ಕುಂದಾಪುರ: ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸರಕಾರಿ ಭೂಮಿ ಮಂಜೂರು ಖಂಡಿಸಿ ಬಿಜೆಪಿ ಪ್ರತಿಭಟನೆ

ಕುಂದಾಪುರ, ಮೇ 13: ಕುಂದಾಪುರದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಉಳಿಸಬೇಕಾದ ಸರಕಾರಿ ಭೂಮಿ ಯನ್ನು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ನೀಡಿರುವ ಸರಕಾರದ ಕ್ರಮವನ್ನು ಖಂಡಿಸಿ ಕುಂದಾಪುರ ಬಿಜೆಪಿ ಮಂಡಲದ ವತಿಯಿಂದ ಬುಧವಾರ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ನಗರದಲ್ಲಿ ಪಾರ್ಕಿಂಗ್ಗೆ ಬಹಳಷ್ಟು ಸಮಸ್ಯೆಯಿದೆ. ಅಗ್ನಿ ಶಾಮಕ ದಳದ ತುರ್ತು ವಾಹನ ನಿಲ್ಲಿಸಲು ಸಹ ಜಾಗದ ಅವಶ್ಯಕತೆಯಿದೆ. ಗೂಡ್ಸ್ ವಾಹನಗಳ ನಿಲ್ದಾಣಕ್ಕೂ ಈ ಜಾಗ ಬೇಡಿಕೆಯಿದೆ. ನಿಮಗೆ ಪಕ್ಷದ ಕಚೇರಿ ನಿರ್ಮಿಸಲು ಸಾರ್ವಜನಿಕರಿಗೆ ತೊಂದರೆ ಆಗದ ಯಾವುದಾದರೂ ಜಾಗ ಹುಡುಕಿ. ಆದರೆ ಇಂತಹ ಸರಕಾರಿ ಜಾಗವನ್ನು ಸಾರ್ವಜನಿಕ ಹಿತಾಸಕ್ತಿಗೆ ಬಳಸಿ. ಅಧಿಕಾರಿಗಳು ಮಂಜೂರು ಮಾಡಿದ್ದನ್ನು ತಕ್ಷಣ ರದ್ದುಪಡಿಸಿ, ಸರಕಾರಿ ಯೋಜನೆಗೆ ಈ ಜಾಗ ಬಳಸಿ ಎಂದು ಆಗ್ರಹಿಸಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಪೇಟೆಯ ಮಧ್ಯದಲ್ಲಿರುವ ಈ ಜಾಗವನ್ನು ಕಾಂಗ್ರೆಸ್ ಕಚೇರಿಗೆ ಸರಕಾರ ನೀಡಿದೆ. ಅಂದಾಜು 4-5 ಕೋ.ರೂ. ಮೌಲ್ಯದ ಜಾಗವನ್ನು ಕೇವಲ 1.75 ಲಕ್ಷ ರೂ.ಗೆ ನೀಡಿದಂತಾಗಿದೆ. ಖಾರ್ವಿಕೇರಿ, ಕೋಡಿಯಲ್ಲಿ 40-50 ವರ್ಷ ಗಳಿಂದ ವಾಸವಿದ್ದವರೆಗೆ ಇಷ್ಟು ವರ್ಷವಾದರೂ ಹಕ್ಕುಪತ್ರ ಕೊಡಲು ಆಗಿಲ್ಲ. ಇದಕ್ಕೆ ಸರಕಾರ, ಅಧಿಕಾರಿಗಳ ಧೋರಣೆಯೇ ಕಾರಣ. ಕೋಡಿಯಲ್ಲಿ 98 ಜನರಿಗೆ ಹಕ್ಕುಪತ್ರ ಸಿಕ್ಕಿಲ್ಲ. 3 ವರ್ಷದಿಂದ ಹೋರಾಡುತ್ತಿದ್ದೇವೆ. ಆದರೆ ತರಾತುರಿಯಲ್ಲಿ ಈ ಜಾಗ ಮಂಜೂರು ಮಾಡಲಾ ಗಿದೆ. ಈ ಆದೇಶವನ್ನು ಸರಕಾರ ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ ನಾನು ಕಾನೂನು ಹೋರಾಟದ ಮೂಲಕವಾದರೂ ತಾರ್ಕಿಕ ಅಂತ್ಯಕ್ಕೆ ಪ್ರಯತ್ನಿಸಲಾಗುವುದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಂಡಲದ ಮಾಜಿ ಅಧ್ಯಕ್ಷ ಶಂಕರ ಅಂಕದಕಟ್ಟೆ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿದರು. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸರಕಾರಿ ಜಾಗವನ್ನು ಮಂಜೂರು ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ, ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಅವರಿಗೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಪ್ರಮುಖರಾದ ಐರೋಡಿ ವಿಠಲ ಪೂಜಾರಿ, ಶ್ರೀಶ ಆರ್.ನಾಯಕ್, ಬಾರ್ಕೂರು ಶಾಂತರಾಮ ಶೆಟ್ಟಿ, ಮೋಹನ್ ದಾಸ್ ಶೆಣೈ, ಜಿಲ್ಲಾ ಪದಾಧಿಕಾರಿಗಳು, ಮಂಡಲದ ಪ್ರ. ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್., ಕುಂದಾಪುರ ಬಿಜೆಪಿ ಮಂಡಲದ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಮೊದಲಾದವರು ಉಪಸ್ಥಿತರಿದ್ದರು.






