ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕರ ಸ್ಪಷ್ಟೀಕರಣ
ಉಡುಪಿ, ಮೇ 18: ಕಳೆದ ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಕಳದ ಯಕ್ಷ ರಂಗಾಯಣದಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂಬ ವಿಷಯ ಪ್ರಸ್ತಾಪಗೊಂಡಿದ್ದು ಈ ಬಗ್ಗೆ ಯಕ್ಷ ರಂಗಾಯಣದ ನಿರ್ದೇಶಕರು ಸ್ಪಷ್ಟೀಕರಣ ನೀಡಿದ್ದಾರೆ.
ಕಾರ್ಕಳ ಯಕ್ಷ ರಂಗಾಯಣವು ಜಿಲ್ಲಾ ಮಟ್ಟದ ಎಲ್ಲಾ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರವನ್ನು ತಪ್ಪದೆ ಪಾಲಿಸಿದೆ. ಯಕ್ಷ ರಂಗಾಯಣದ ರೆಪರ್ಟರಿ ನಾಟಕಕ್ಕೆ ಸಂಬಂಧಿಸಿದಂತೆ ಕರಪತ್ರವನ್ನು ಪ್ರಕಟಿಸಲಾಗಿದ್ದು, ಈ ಕರಪತ್ರದಲ್ಲಿ ಇಲಾಖಾ ಸಚಿವರ ಸಂದೇಶವನ್ನು ಮತ್ತು ಪ್ರದರ್ಶನಕ್ಕೆ ಸಿದ್ದಗೊಂಡ ನಾಟಕದ ವಿವರ ಹಾಗೂ ಕಲಾವಿದರ ಮಾಹಿತಿ ಯನ್ನು ನೀಡಲಾಗಿತ್ತು. ಇದನ್ನು ರಾಜ್ಯದ ಇತರ 5 ರಂಗಾಯಣಗಳು ಪಾಲಿಸುತ್ತವೆ ಎಂದು ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್.ವೆಂಕಟರಮಣ ಐತಾಳ್ ಸ್ಪಷ್ಟೀಕರಣ ದಲ್ಲಿ ತಿಳಿಸಿದ್ದಾರೆ.
ಈ ಹಿಂದೆ 2023ರಲ್ಲಿ ಯಕ್ಷ ರಂಗಾಯಣದಲ್ಲಿ ಸಿದ್ಧಗೊಂಡ ಮೊದಲ ನಾಟಕ ‘ಅಮರಕ್ರಾಂತಿ’ ಬಗ್ಗೆಯೂ ಕರಪತ್ರ ಸಿದ್ಧಪಡಿಸಲಾಗಿತ್ತು. ಅದರಲ್ಲಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ.ಸುನಿಲ್ ಕುಮಾರ್ ಸಂದೇಶದೊಂದಿಗೆ ಪ್ರಕಟಿಸಲಾಗಿತ್ತು. ಅದೇ ಪರಂಪರೆ ಯಕ್ಷ ರಂಗಾಯಣದಲ್ಲಿ ಮುಂದುವರಿದಿದೆ ಎಂದು ವೆಂಕಟರಮಣ ಐತಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




