ಶ್ರೀಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರಮಂಡಳಿ ಶತಮಾನೋತ್ಸವ: ಯಕ್ಷ ದಿಗ್ಗಜರಿಗೆ ಸನ್ಮಾನ, ಪುಸ್ತಕ ಲೋಕಾರ್ಪಣೆ

ಉಡುಪಿ, ಮೇ 18: ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿರುವ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೂಕು ಹುಕ್ಲಮಕ್ಕಿ ಶ್ರೀಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರಮಂಡಳಿ ಈ ಪ್ರಯುಕ್ತ ರವಿವಾರ ಉಡುಪಿಯ ಯಕ್ಷ ಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಯಕ್ಷಗಾನದ ದಿಗ್ಗಜರಿಗೆ ಸನ್ಮಾನ, ಯಕ್ಷಗಾನ ಕೃತಿಯ ಲೋಕಾರ್ಪಣೆ ಹಾಗೂ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿತ್ತು.
ಶತಮಾನೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಹೆಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಲಾವಿದರಾದ ಮಲ್ಪೆ ಶಂಕರನಾರಾಯಣ ಸಾಮಗರು 85 ವರ್ಷಗಳ ಹಿಂದೆ ಬರೆದು ಡಾ. ಶ್ರೀಪಾದ ಹೆಗಡೆ ಹುಕ್ಳಮಕ್ಕಿ ಸಂಪಾದಿಸಿ ಪ್ರಕಟಿಸಿದ ಅರ್ಥಸಹಿತ ‘ಅಂಗದ ಸಂಧಾನ’ ಪುಸ್ತಕವನ್ನು ವೇದಿಕೆಯ ಗಣ್ಯರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಯಕ್ಷಗಾನದ ಹಿರಿಯ ಸಾಧಕರಾದ ಡಾ.ಎಂ. ಪ್ರಭಾಕರ ಜೋಶಿ, ಪ್ರೊ. ಎಂ. ಎಲ್. ಸಾಮಗ, ಶ್ರೀಧರ ಡಿ.ಎಸ್., ಡಾ. ಜಿ. ಎಲ್. ಹೆಗಡೆ ಇವರನ್ನು ಶತಮಾನೋತ್ಸವ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.
ಆಯೋಜಕರು ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗಕ್ಕೆ ತಮ್ಮ ಶತಮಾನ ಆಚರ ಣೆಯ ನೆನಪಿನ ಗೌರವವನ್ನು ಪ್ರದಾನ ಮಾಡಿ ಅಭಿನಂದಿಸಿದರು. ಸಂಸ್ಥೆಯ ಪರವಾಗಿ ಹಿರಿಯ ಉಪಾಧ್ಯಕ್ಷ ಎಸ್. ವಿ. ಭಟ್ ಗೌರವ ಪುರಸ್ಕಾರ ಸ್ವೀಕರಿಸಿದರು. ಶತಮಾನದ ಸಂಭ್ರಮದಲ್ಲಿರುವ ಹುಕ್ಲಮಕ್ಕಿ ಮೇಳವನ್ನು ಪ್ರಸ್ತುತ ಮುನ್ನಡೆಸುತ್ತಿರುವ ಸಿ.ಎಸ್. ಗೋಪಾಲಕೃಷ್ಣ, ಡಾ. ಶ್ರೀಪಾದ ಹೆಗಡೆ ಸಹೋದರರನ್ನು ಯಕ್ಷಗಾನ ಕಲಾರಂಗದ ವತಿಯಿಂದ ಶಾಲು, ಸ್ಮರಣಿಕೆಯೊಂದಿಗೆ ಅಭಿನಂದಿಸಲಾಯಿತು.
ನ್ಯಾಯವಾದಿ ಸತೀಶ ಭಟ್ ಉಳಗೆರೆ ಸನ್ಮಾನಪತ್ರ ವಾಚಿಸಿದರು. ದತ್ತಾತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿ ದರು. ಸಭಾ ಕಾರ್ಯಕ್ರಮದ ಬಳಿಕ ಹುಕ್ಲಮಕ್ಕಿ ಮೇಳದ ಕಲಾವಿದರಿಂದ ‘ಕರಂಡಕಾಸುರ ಕಾಳಗ’ ಯಕ್ಷಗಾನ ಪ್ರಸಂಗ ಪ್ರಸ್ತುತಗೊಂಡಿತು.






