ಮಾನವೀಯ ಸ್ಪಂದನೆಯ ನಿರೀಕ್ಷೆಯಲ್ಲಿ ಪಾರ್ಶ್ವವಾಯು ಪೀಡಿತ ವ್ಯಕ್ತಿ

ಉಡುಪಿ: ಆರು ತಿಂಗಳ ಹಿಂದೆ ಪಾರ್ಶ್ವವಾಯುಗೆ ತುತ್ತಾದ ಕೇರಳ ಮೂಲದ ವ್ಯಕ್ತಿಯೊಬ್ಬರು ಇದೀಗ ಮಾನವೀಯ ಸ್ಪಂದನೆಯ ನಿರೀಕ್ಷೆಯಲ್ಲಿದ್ದಾರೆ ಎಂದು ಉಡುಪಿಯ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಹೇಳಿದ್ದಾರೆ.
ರಾಯಲ್ ಪೌಲ್ (44) ಅವರು ಕೇರಳದ ಎರ್ನಾಕುಳಂ ಜಿಲ್ಲೆಯ ಮಂಜಲ್ಲೂರು ಮುವಾಟ್ಟುಪುಳದವರಾಗಿದ್ದು ಕೂಲಿಕಾರ್ಮಿಕರಾಗಿ ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ಕಾರ್ಕಳದ ಸಾಣೂರಿನ ತೋಟವೊಂದರಲ್ಲಿ ಕೂಲಿ ಕಾರ್ಮಿಕ ನಾಗಿ ದುಡಿಯುತಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರನ್ನು ಕರೆತಂದವರು ಉಡುಪಿ ಖಾಸಗಿ ಆಸ್ಪತ್ರೆಗೆ ತಂದು ಸೇರಿಸಿ ನಾಪತ್ತೆ ಯಾಗಿದ್ದರು.
ಅಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಪೌಲ್ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಅವರು ಅಲ್ಲಿಂದ ಬಿಡುಗಡೆಗೊಂಡಿದ್ದು, ಅವರಿಗೆ ಮುಂದಿನ ವ್ಯವಸ್ಥೆಯ ಸಮಸ್ಯೆ ಎದುರಾಗಿದೆ ಎಂದು ವಿಶು ಶೆಟ್ಟಿ ತಿಳಿಸಿದರು.
ಎದ್ದು ನಡೆಯಲಾಗದ ಸ್ಥಿತಿಯಲ್ಲಿರುವ ಅವರನ್ನು ಖಾಸಗಿ ಆಶ್ರಮಕ್ಕೆ ಸೇರಿದಂರೆ ತಿಂಗಳಿಗೆ 20ರಿಂದ 25 ಸಾವಿರ ರೂ.ಗಳ ವೆಚ್ಚ ಬರುತ್ತದೆ. ಸರಕಾರಿ ಅನುದಾನಿತ ಆಶ್ರಮದಲ್ಲಿ ಸೇರ್ಪಡೆಗೆ ಅವಕಾಶವಿಲ್ಲ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ ಅವರಿಗೆ ಆರೈಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ವಿಶು ಶೆಟ್ಟಿ ಮನವಿ ಮಾಡಿದ್ದಾರೆ.
ಅಂಬುಲೆನ್ಸ್ನಲ್ಲಿ ರೋಗಿಯನ್ನು ಕರೆತಂದು ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಶು ಶೆಟ್ಟಿ, ಸರಕಾರಿ ಅನುದಾನಿತ ಆಶ್ರಮದಲ್ಲಿ ಹಾಸಿಗೆ ಹಿಡಿದ ರೋಗಿಗಳನ್ನು ನೋಡಿಕೊಳ್ಳುವ ವ್ಯವಸ್ಥೆ ಇಲ್ಲ. ಹೀಗಾಗಿ ಅಲ್ಲಿ ಅವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಅಥವಾ ಯಾರಾದರೂ ದಾನಿಗಳು ಮುಂದೆ ಬಂದು ಖಾಸಗಿ ಆಶ್ರಮದಲ್ಲಿ ಇವರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಜಿಲ್ಲೆಯಲ್ಲಿ ಇಂಥ ಹಲವು ಪಾರ್ಶ್ವವಾಯು ಪೀಡಿತ ರೋಗಿಗಳಿದ್ದು, ಅವರು ಇಂಥದೇ ಪರಿಸ್ಥಿತಿ ಎದುರಿಸುತಿದ್ದಾರೆ. ಕೆಲವರಂತೂ ನಮ್ಮನ್ನು ಕಾಡಿಗೆ ಬಿಟ್ಟು ಬನ್ನಿ. ಅಲ್ಲಿ ಪ್ರಾಣಿಗಳಿಗೆ ಆಹಾರವಾಗುತ್ತೇವೆ ಎಂದು ಮನವಿ ಮಾಡಿದ್ದಾರೆ ಎಂದು ವಿಶು ಶೆಟ್ಟಿ ತಿಳಿಸಿದರು.






