ಎಚ್ಆರ್ಡಿ ಕಾರ್ಯಕರ್ತರಿಗೆ ಕಾರ್ಯಾಗಾರ

ಉಡುಪಿ, ಮೇ 31: ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾ ಘಟಕದ ವತಿಯಿಂದ ಸಂಘಟನೆಯ ಆಯ್ದ ಕಾರ್ಯಕರ್ತರಿಗಾಗಿ ವಿಶೇಷ ಮಾನವ ಸಂಪನ್ಮೂಲ ಅಭಿವೃದ್ಧಿ(ಎಚ್ಆರ್ಡಿ) ಕಾರ್ಯಾಗಾರವನ್ನು ಉಡುಪಿಯ ಜಾಮೀಯಾ ಮಸೀದಿಯಲ್ಲಿ ರವಿವಾರ ಆಯೋಜಿಸಲಾಗಿತ್ತು.
ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಹಾಗೂ ದಕ್ಷತೆಯನ್ನು ವೃದ್ಧಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಾಗಾರವನ್ನು ಜಮಾಅತೆ ಇಸ್ಲಾಮಿ ಹಿಂದ್ನ ಎಚ್ಆರ್ಡಿ ಘಟಕದ ಪ್ರಮುಖ ಸದಸ್ಯರುಗಳಾದ ಲಯಿಖುಲ್ಲಾ ಖಾನ್ ಮನ್ಸೂರಿ ಮತ್ತು ಪ್ರೊ.ಸಯ್ಯದ್ ಕಾಝೀಮ್ ನಡೆಸಿಕೊಟ್ಟರು.
ಕಾರ್ಯಾಗಾರದಲ್ಲಿ ಮುಖ್ಯವಾಗಿ ಕಾರ್ಯಕರ್ತರ ವೈಯಕ್ತಿಕ ಕೌಶಲ್ಯ ಅಭಿವೃದ್ಧಿ, ಸಮಯ ನಿರ್ವಹಣೆ, ಸಂವಹನ ಕಲೆ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಕುರಿತು ಸಂಪನ್ಮೂಲ ವ್ಯಕ್ತಿಗಳು ಸವಿಸ್ತಾರವಾಗಿ ಮಾರ್ಗದರ್ಶನ ನೀಡಿದರು. ಸಮಾಜದ ಪ್ರಗತಿ ಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ತನ್ನ ಆಂತರಿಕ ಸಾಮರ್ಥ್ಯವನ್ನು ಹೇಗೆ ಧನಾತ್ಮಕವಾಗಿ ಬಳಸಿಕೊಳ್ಳಬಹುದು ಎಂಬುದನ್ನು ವಿವಿಧ ಉದಾಹರಣೆಗಳ ಮೂಲಕ ವಿವರಿಸಲಾಯಿತು.
ಈ ತರಬೇತಿ ಶಿಬಿರದಲ್ಲಿ ಉಡುಪಿ ಜಿಲ್ಲೆಯ ವಿವಿಧ ಭಾಗಗಳಿಂದ ಆಯ್ಕೆಯಾದ ಜಮಾಅತ್ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿ, ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.






