ಬದಲಾವಣೆಗೆ ಒಗ್ಗಿಕೊಳ್ಳದಿದ್ದರೆ ಕಾಲದ ಜೊತೆಗೆ ಹೋರಾಟ ಅಸಾಧ್ಯ: ಪ್ರೊ.ರಾಧಾಕೃಷ್ಣ ಶೆಟ್ಟಿ

ಹಿರಿಯಡ್ಕ, ಜೂ.1: ಹೊಸತನಕ್ಕೆ ಒಗ್ಗಿಕೊಳ್ಳುತ್ತಾ ಹೊಸ ಕಲಿಕೆಯೊಂದಿಗೆ ಕಾಲದ ಸವಾಲುಗಳನ್ನು ಎದುರಿಸಲು ಬದಲಾವಣೆಗೆ ಒಗ್ಗಿಕೊಳ್ಳದೇ ಇದ್ದರೆ ಕಾಲದ ಜೊತೆಗೆ ಹೋರಾಡಿ ಗೆಲ್ಲುವ ಅವಕಾಶಗಳಿಂದ ಯುವ ಸಮುದಾಯ ವಂಚಿತವಾಗುವ ಅಪಾಯವಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ರಾಧಾಕೃಷ್ಣ ಶೆಟ್ಟಿ ಕೆ. ಹೇಳಿದ್ದಾರೆ.
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಅವಮಾನ, ಸವಾಲು ಗಳನ್ನು ಒಡ್ಡುವ ಬದುಕಿನ ಸಂಕಟಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದವರಿಗೆ ಸನ್ಮಾನವು ತಾನಾಗಿಯೇ ಒದಗಿ ಬರುತ್ತದೆ ಎಂದು ಹೇಳಿದರು.
ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ.ಸೌಮ್ಯಲತಾ ಪಿ. ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಪ್ರಾಂಶುಪಾಲ ಡಾ.ಜಯ ಪ್ರಕಾಶ್ ಶೆಟ್ಟಿ ಎಚ್., ವಸಂತ ಶೆಟ್ಟಿ ಚೆನ್ನಿಬೆಟ್ಟು, ಉಮೇಶ್ ಶೆಟ್ಟಿ, ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ., ವಿದ್ಯಾರ್ಥಿ ಸಂಘದ ಅಧ್ಯಕ್ಷ ಈರಬಸು, ಉಪಾಧ್ಯಕ್ಷೆ ವೈಷ್ಣವಿ ಮೊದಲಾದವರು ಉಪಸ್ಥಿತರಿದ್ದರು.
ಡಾ.ಡಿ.ಎಸ್.ದೊಡ್ಡಮನಿ ಸ್ವಾಗತಿಸಿದರು. ಪ್ರಣೀತ ವಂದಿಸಿದರು. ನಿಶ್ಚಿತ ಎಸ್.ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು.




