ಕುಂದಾಪುರ: ಪಾನೀಯ, ನೀರಿನ ಬಾಟಲಿ ವಿಲೇವಾರಿಗೆ ಪ್ರಯೋಗ; ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಬಾಟಲಿ ಮಾದರಿ ಬುಟ್ಟಿ

ಕುಂದಾಪುರ: ತಂಪು ಪಾನೀಯ, ಕುಡಿಯುವ ನೀರಿನ ಬಾಟಲಿಗಳನ್ನು ಖರೀದಿಸಿ, ಬಳಿಕ ಎಲ್ಲೆಂದರಲ್ಲಿ ಎಸೆಯ ಬಾರದು ಅನ್ನುವ ನೆಲೆಯಲ್ಲಿ ಈಗ ಕುಂದಾಪುರ ಪುರಸಭೆಯಿಂದ ಬಸ್ ನಿಲ್ದಾಣ ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಬಾಟಲಿಗಳನ್ನೇ ಹಾಕುವ ಸಲುವಾಗಿ ಬಾಟಲಿ ಮಾದರಿಯ ಕಸದ ಬುಟ್ಟಿಗಳನ್ನು ಇಡಲಾಗಿದೆ. ಇದು ಪಾನೀಯ, ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ತಡೆಯುವ ನಿಟ್ಟಿನಲ್ಲಿ ಕೈಗೊಂಡ ಕ್ರಮವಾಗಿದೆ.
ಪುರಸಭಾ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಬಳಸಿದ ಪ್ಲಾಸ್ಟಿಕ್ ಬಾಟಲ್ ಗಳನ್ನು ಎಸೆಯುತ್ತಿದ್ದು, ಆ ಬಾಟಲಿಗಳು ಚರಂಡಿ ಸೇರಿ ಮಳೆಗಾಲದಲ್ಲಿ ಚರಂಡಿ ತುಂಬಿ, ಕೃತಕ ನೆರೆಗೆ ಕಾರಣವಾ ಗುತ್ತಿದೆ. ಅಲ್ಲದೆ ಮಳೆ ನೀರಿನೊಂದಿಗೆ ನದಿ ಮೂಲಗಳಿಗೆ ಈ ಪ್ಲಾಸ್ಟಿಕ್ ಬಾಟಲಿಗಳು ಸೇರಿ, ಜಲಚರ ಜೀವಿಗಳ ಪ್ರಾಣಕ್ಕೂ ಕಂಟಕವಾಗಿದೆ.
ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕುಂದಾಪುರ ಪುರಸಭೆಯು ಲಯನ್ಸ್ ಕ್ಲಬ್ ಸಹಕಾರದೊಂದಿಗೆ ವಿವಿಧೆಡೆಗಳಲ್ಲಿ ಈ ಬಾಟಲಿ ಮಾದರಿಯ ಕಸದ ಬುಟ್ಟಿಗಳನ್ನು ಇಡುವ ಕ್ರಮ ಕೈಗೊಂಡಿದೆ.
ಎಲ್ಲೆಲ್ಲಿ ಅಳವಡಿಕೆ?: ಇಲ್ಲಿನ ಹಳೆ ಬಸ್ ನಿಲ್ದಾಣ ಬಳಿ, ಹೊಸ ಬಸ್ ನಿಲ್ದಾಣ ಸಮೀಪ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಶಾಸ್ತ್ರಿ ಸರ್ಕಲ್ ಹತ್ತಿರ, ಗಾಂಧಿ ಮೈದಾನ, ಬಿ.ಸಿ. ರಸ್ತೆ, ಕುಂದೇಶ್ವರ ದೇವಸ್ಥಾನದ ಸ್ವಾಗತ ಗೋಪುರ ಬಳಿ, ಭಂರ್ಡಾಕಾರ್ಸ್ ಕಾಲೇಜು ರಸ್ತೆಯ ತಿರುವಿನಲ್ಲಿ, ಪುರಸಭೆ ಕಚೇರಿ ಬಳಿ, ಬಸ್ರೂರು ಮೂರುಕೈ ಬಸ್ ನಿಲ್ದಾಣದ ಹತ್ತಿರ ಈ ಬಾಟಲಿ ಮಾದರಿಯ ಬುಟ್ಟಿಗಳನ್ನು ಇಡಲಾಗಿದೆ.
ಬೇರೆ ಬೇರೆ ಕಡೆಗಳಿಂದ ನಗರಕ್ಕೆ ಬರುವ ಜನರು ಅಂಗಡಿಗಳಿಂದ ತಂಪು ಪಾನೀಯ, ನೀರಿನ ಬಾಟಲಿಗಳನ್ನು ಖರೀದಿಸಿ, ಬಳಸಿದ ನಂತರ ರಸ್ತೆ, ಬಸ್ ನಿಲ್ದಾಣಗಳ ಬಳಿ ಬಿಸಾಡುತ್ತಾರೆ. ಇದು ಚರಂಡಿಗೆ ಸೇರಿ, ಬಹಳಷ್ಟು ಸಮಸ್ಯೆಗೆ ಕಾರಣ ಆಗುತ್ತಿದೆ. ಅದಕ್ಕಾಗಿಯೇ ಇಂತಹ ಬಾಟಲಿಗಳನ್ನು ಮಾತ್ರ ಹಾಕಲು ಅಲ್ಲಲ್ಲಿ ಬಾಟಲಿ ಮಾದರಿಯ ಕಸದ ಬುಟ್ಟಿಯನ್ನು ಇಡಲಾಗಿದೆ.
ಇವುಗಳೊಂದಿಗೆ ಗಾಂಧಿ ಪಾರ್ಕ್, ನೆಹರೂ ಮೈದಾನ, ಸಂಗಮ್ ಜಂಕ್ಷನ್ ಸಹಿತ ಇನ್ನಷ್ಟು ಕಡೆಗಳಲ್ಲಿ ಇದನ್ನು ಇಡುವ ಚಿಂತನೆಯಿದೆ ಎಂದು ಪುರಸಭೆಯ ಪರಿಸರ ಇಂಜಿನಿಯರ್ ಗುರುಪ್ರಸಾದ್ ಮಾಹಿತಿ ನೀಡಿದರು.
ಸಾರ್ವಜನಿಕರು ಬಳಸಿದ ಪ್ಲಾಸ್ಟಿಕ್ ಬಾಟಲಿಗಳನ್ನು ಈ ರೀತಿ ಕಸದ ಬುಟ್ಟಿಗಳಲ್ಲಿ ಹಾಕಿದಾಗ ಮನಸೋಇಚ್ಚೆ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುವ ಪ್ರಮಾಣ ಕಡಿಮೆಯಾಗುತ್ತದೆ. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಬೇಕಾಗಿದೆ. ಈ ಬುಟ್ಟಿಗೆ ಆದಷ್ಟು ಪ್ಲಾಸ್ಟಿಕ್ ಬಾಟಲಿಗಳನ್ನು ಮಾತ್ರ ಹಾಕಿ, ಸಾರ್ವಜನಿಕರು ಸಹಕರಿಸಬೇಕು. ವಾರಕ್ಕೆ ಒಟ್ಟಾರೆ 15ರಿಂದ 20 ಕೆ.ಜಿಯಷ್ಟು ಬಾಟಲಿಗಳ ಸಂಗ್ರಹ ಆಗುತ್ತಿದೆ. ಶೇ.80-90ರಷ್ಟು ಭರ್ತಿಯಾದ ತಕ್ಷಣ ವಿಲೇವಾರಿ ಮಾಡಲಾಗುತ್ತಿದೆ.
-ಆನಂದ್ ಜೆ., ಪುರಸಭೆ ಮುಖ್ಯಾಧಿಕಾರಿ ಕುಂದಾಪುರ.






