ಜನಾರ್ದನ ಮರವಂತೆ ರಾಷ್ಟ್ರಕ್ಕೆ ಮಾದರಿ ಗ್ರಾಪಂ ರೂಪಿಸಿದರು: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ, ಜೂ.14: ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಅತ್ಯಂತ ಅರ್ಥವತ್ತಾಗಿ ಕೆಲಸ ಮಾಡಿದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಜನಾರ್ದನ ಮರವಂತೆ ಒಬ್ಬರು. ಮರವಂತೆಯನ್ನೇ ತನ್ನ ಪ್ರಯೋಗಶಾಲೆಯನ್ನಾಗಿಸಿ ಕೊಂಡು, ರಾಜ್ಯ, ರಾಷ್ಟ್ರಕ್ಕೆ ಒಂದು ಮಾದರಿ ಗ್ರಾ.ಪಂ. ಆಗಿ ರೂಪಿಸಿದವರು. ಅವರ ಚಿಂತನೆಗಳು, ನಿಲುವು, ಯೋಜನೆಗಳು ಸದಾ ನೆನಪಿನಲ್ಲಿ ಉಳಿಯು ವಂತೆ ಕಾರ್ಯಯೋಜನೆ ರೂಪಿಸಬೇಕಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ, ಜನಪ್ರತಿನಿಧಿ ಸಂಸ್ಥೆ, ಸದ್ಭಾವನಾ ವೇದಿಕೆ, ನಮ್ಮ ಭೂಮಿ ಹಟ್ಟಿಯಂಗಡಿ ಆಶ್ರಯದಲ್ಲಿ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ರವಿವಾರ ನಡೆದ ಪಂಚಾಯತ್ ರಾಜ್ ತಜ್ಞ, ಹಿರಿಯ ಪತ್ರಕರ್ತ ಎಸ್.ಜನಾರ್ದನ ಮರವಂತೆ ಅವರಿಗೆ ಸಾರ್ವಜನಿಕ ಶ್ರದ್ದಾಂಜಲಿ ಸಭೆಯಲ್ಲಿ ಅವರು ನುಡಿ ನಮನ ಸಲ್ಲಿಸಿದರು.
ಹಿರಿಯ ನ್ಯಾಯವಾದಿ, ಸಾಹಿತಿ ಎ.ಎಸ್.ಎನ್.ಹೆಬ್ಬಾರ್ ಮಾತನಾಡಿ, ಜನಾರ್ದನ ಅವರು ಮರವಂತೆಯ ಊರಿಗೆ ಕೀರ್ತಿ ತಂದವರು. ಯಕ್ಷಗಾನ, ತಾಳಮದ್ದಲೆ, ನಾಟಕ, ಕಥೆ, ಪ್ರಬಂಧ, ಲೇಖನ ಸೇರಿದಂತೆ ಸಾಹಿತ್ಯಿಕವಾಗಿ ಅಪಾರ ವ್ಯವಸಾಯ ಮಾಡಿದವರು. ಪಂಚಾಯತ್ ರಾಜ್ ಬಗೆಗಿನ ಅವರ ಜ್ಞಾನ ಅಗಾಧವಾದುದು. ಸದಾ ಧನಾತ್ಮಕ ಚಿಂತನೆ ಹೊಂದಿದ್ದರು ಎಂದು ಸ್ಮರಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ನಮನ ಸಲ್ಲಿಸಿದರು. ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಸದ್ಭಾವನ ವೇದಿಕೆಯ ಟಿ.ಬಿ.ಶೆಟ್ಟ, ಕುಂದಾಪುರ ತಾಲೂಕು ಪಂಚಾಯತ್ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಪತ್ರಕರ್ತ ಶಶಿಧರ ಹೆಮ್ಮಾಡಿ, ಸದ್ಭಾವನಾ ವೇದಿಕೆಯ ಯಾಕೂಬ್ ಖಾದರ್ ಗುಲ್ವಾಡಿ, ಕಲಾಕ್ಷೇತ್ರದ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್, ಕಾರ್ಮಿಕ ಮುಖಂಡ ಎಚ್.ನರಸಿಂಹ, ಲೇಖಕಿ ಡಾ.ಪಾರ್ವತಿ ಜಿ.ಐತಾಳ್, ಸಹಕಾರಿ ಧುರೀಣ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಪಂಚಾಯತ್ರಾಜ್ ತಜ್ಞ ವಿಲ್ಫ್ರೆಡ್ ಡಿಸೋಜ, ಪ್ರಶಾಂತ್ ತೋಳರ್, ಸಚ್ಚಿದಾನಂದ ಎಂ.ಎಲ್., ಡಾ.ಅತುಲ್ ಕುಮಾರ್ ಶೆಟ್ಟಿ ಚಿತ್ತೂರು, ನಮ್ಮ ಭೂಮಿ ಸಂಸ್ಥೆಯ ಸುರೇಶ, ಉಪನ್ಯಾಸಕ ರಾಮಾಂಜಿ, ಮೋಹನಚಂದ್ರ ಉಪ್ಪುಂದ, ಜತೀಂದ್ರ ಮರವಂತೆ ನುಡಿನಮನ ಸಲ್ಲಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.






