ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿಮಳೆ: ಹಲವು ಮನೆಗಳಿಗೆ ಹಾನಿ

ಉಡುಪಿ, ಜೂ.14: ಉಡುಪಿ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಹಾಗೂ ರವಿವಾರ ಬೆಳಗ್ಗೆಯಿಂದ ಸಂಜೆಯವರೆಗೂ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ಇದರಿಂದ ಹಲವು ಮನೆಗಳಿಗೆ ಹಾನಿಯಾಗಿರುವುದು ವರದಿ ಯಾಗಿದೆ.
ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸರಾಸರಿ 32.9ಮಿ.ಮೀಟರ್ ಮಳೆಯಾಗಿದ್ದು, ಕಾರ್ಕಳ- 14.3ಮಿ.ಮೀ., ಕುಂದಾಪುರ-36.1ಮಿ.ಮೀ., ಉಡುಪಿ- 53.2ಮಿ.ಮೀ., ಬೈಂದೂರು -38.9ಮಿ.ಮೀ., ಬ್ರಹ್ಮಾವರ- 36.6ಮಿ.ಮೀ., ಕಾಪು-57.8ಮಿ.ಮೀ., ಹೆಬ್ರಿ-18.6 ಮಿ.ಮೀಟರ್ ಮಳೆಯಾಗಿದೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ಮಧ್ಯಾಹ್ನದ ವೇಳೆಗೆ ಗಾಳಿ- ಮಳೆಯಾಗಿದ್ದು, ಅದರಲ್ಲೂ ಗಾಳಿಯಬ್ಬರ ಜೋರಾಗಿತ್ತು. ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ಮಂಡಿಕೇರಿ ಎಂಬಲ್ಲಿ ಸುಂದರ ಖಾರ್ವಿ ಎಂಬವರ ಮನೆ ಮೇಲೆ ಮರ ಬಿದ್ದು 25000ರೂ., ಸುರೇಂದ್ರ ಕಿಣಿ ಎಂಬವಪ ಮನೆ ಮೇಲೆ ಮರ ಬಿದ್ದು 25000 ರೂ., ಕೋಣಿ ಗ್ರಾಮದ ಸುಮನ ಎಂಬವರ ಮನೆ ಮೇಲೆ ಮರ ಬಿದ್ದು 30000ರೂ., ಬಸ್ರೂರು ಗ್ರಾಮದ ಜೆಎಂ ರಸ್ತೆಯ ಸೀತು ಎಂಬವರ ಮನೆ ಮೇಲೆ ಮರ ಬಿದ್ದು 30000ರೂ., ಅಬ್ದುಲ್ ಸಮದ್ ಎಂಬವರ ಮನೆ ಮೇಲೆ ಮರ ಬಿದ್ದು 40000ರೂ. ಹಾಗೂ ಜಯಲಕ್ಷ್ಮೀ ಎಂಬವರ ಮನೆ ಮೇಲೆ ಮರ ಬಿದ್ದು ಸುಮಾರು 80000ರೂ. ನಷ್ಟ ಉಂಟಾಗಿದೆ.
ಹೆದ್ದಾರಿಯಲ್ಲಿ ಕೃತಕ ನೆರೆ: ರಾಷ್ಟ್ರೀಯ ಹೆದ್ದಾರಿ ಸಹಿತ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ, ಗ್ರಾಮೀಣ ರಸ್ತೆಗಳ ಅಲ್ಲಲ್ಲಿ ಮಳೆ ನೀರು ನಿಂತು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇನ್ನು ಕೂಡ ಬಹುತೇಕ ಕಡೆಗಳಲ್ಲಿ ಚರಂಡಿ ಸ್ವಚ್ಛ ಮಾಡದೇ ಇರುವುದರಿಂದ, ಮಳೆ ನೀರು ಸರಾಗ ಹರಿದು ಹೋಗದೇ, ಹೆದ್ದಾರಿಯಲ್ಲೇ ನಿಂತು ಇನ್ನೊಂದು ವಾಹನಗಳ ಎರಚುತ್ತಿದೆ. ಇನ್ನು ಕೆಲ ಮಣ್ಣಿನ ರಸ್ತೆಗಳಂತೂ ಒಂದೇ ಮಳೆಗೆ ರಾಡಿಯಾಗಿ, ಕೆಸರು ಗದ್ದೆಯಂತಾಗಿದೆ.
ಕುಂದಾಪುರ - ಬೈಂದೂರು ಹೆದ್ದಾರಿಯ ತಲ್ಲೂರಿನ ಬಸ್ ನಿಲ್ದಾಣ ಬಳಿ ಭಾರೀ ಪ್ರಮಾಣದ ಮಳೆ ನೀರು ರಸ್ತೆಯ ಲ್ಲಿಯೇ ಹರಿಯುತ್ತಿದ್ದು, ಇದರಿಂದ ವಾಹನ ಸವಾರರು ಮಾತ್ರವಲ್ಲದೆ, ಜನರು ತೊಂದರೆ ಅನುಭವಿಸು ವಂತಾಗಿದೆ. ಇಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸಬೇಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇನ್ನು ಸರ್ಜನ್ ಆಸ್ಪತ್ರೆಗೂ ತುಸು ಹಿಂದೆ ಸರ್ವಿಸ್ ರಸ್ತೆಯಲ್ಲಿಯೇ ನೀರು ನಿಲ್ಲುತ್ತಿದ್ದು, ಇದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದಲ್ಲದೆ ಅಂಕದ ಕಟ್ಟೆಯ ಶಾಲೆಯ ಬಳಿ ಹೆದ್ದಾರಿಯಲ್ಲಿಯೇ ನೀರು ನಿಲ್ಲುತ್ತಿದ್ದು, ಮಳೆ ನೀರು ಹರಿದು ಹೋಗುತ್ತಿಲ್ಲ. ಇನ್ನು ಟಿಟಿ ರಸ್ತೆ ಅಂರ್ಡ ಪಾಸ್ ಮಾತ್ರವಲ್ಲದೆ, ಅಲ್ಲಿನ ಸರ್ವಿಸ್ ರಸ್ತೆ ಬಳಿಯ ನೀರು ನಿಲ್ಲುವ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಸಾರ್ವಜನಿಕರು ದೂರಿದರು.






