ಬಾವಿಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯ ರಕ್ಷಣೆ

ಕಾರ್ಕಳ, ಜೂ.15: ಮನೆಯ ಬಾವಿಗೆ ಬಿದ್ದಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ತಾವೂ ಬಾವಿಯಿಂದ ಮೇಲೆ ಬರಲಾಗದೆ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ ಘಟನೆ ಕಾರ್ಕಳ ಬೈಪಾಸ್ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಬೈಪಾಸ್ ರಸ್ತೆಯ ನಿವಾಸಿ ನಾರಾಯಣ ಭಟ್(48 ) ರಕ್ಷಿಸಲ್ಪಟ್ಟ ವ್ಯಕ್ತಿ. ಸೋಮವಾರ ಬೆಳಗ್ಗೆ ನಾರಾಯಣ ಭಟ್ ಅವರ ಮನೆಯ ಬಾವಿಗೆ ಬೆಕ್ಕೊಂದು ಬಿದ್ದಿತ್ತು. ಇದನ್ನು ಗಮನಿಸಿದ ನಾರಾಯಣ ಭಟ್ ಬೆಕ್ಕನ್ನು ಮೇಲಕ್ಕೆತ್ತಲು ಸ್ವತಃ ಬಾವಿಗೆ ಇಳಿದರು. ಆದರೆ ಬೆಕ್ಕನ್ನು ಹಿಡಿದ ನಂತರ ಅವರಿಗೆ ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೆ ಒಳಗೇ ಸಿಕ್ಕಿಹಾಕಿ ಕೊಂಡರೆನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಕಾರ್ಕಳ ಅಗ್ನಿಶಾಮಕ ದಳದ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದ ತಂಡ ತತ್ಕ್ಷಣವೇ ಸ್ಥಳಕ್ಕೆ ಆಗಮಿಸಿತು. ಸಿಬಂದಿ ರೂಪೇಶ್ ಬಾವಿಗಿಳಿದು ನಾರಾಯಣ ಭಟ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ದರು. ಇದೇ ವೇಳೆ ಬಾವಿಗೆ ಬಿದ್ದಿದ್ದ ಬೆಕ್ಕನ್ನೂ ಸಜೀವವಾಗಿ ರಕ್ಷಿಸಲಾಯಿತು. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬಂದಿ ಭೀಮಪ್ಪ, ಗಣೇಶ್, ಸುರೇಶ್ ಹಾಗೂ ಚಾಲಕ ಮುಜಾಮೀರ್ ಸಹಕರಿಸಿದರು.




