ನ್ಯಾಯಕ್ಕಾಗಿ ಸರಿಯಾದ ಮಾರ್ಗ ಕಂಡುಕೊಳ್ಳದಿದ್ದರೆ ಬ್ರಿಟಿಷರ ಆಡಳಿತಕ್ಕಿಂತ ಹೀನಾಯ ಸ್ಥಿತಿ ನಿರ್ಮಾಣ: ಶಾನುಭಾಗ್

ಉಡುಪಿ, ಜೂ.20: ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ದಾರಿಗಳಿವೆ. ಅದರ ಮುಂದಾ ಳತ್ವ ವಹಿಸಿಕೊಳ್ಳಲು ಶಿಕ್ಷಕರು ಆಸಕ್ತಿ ತೋರುತ್ತಿಲ್ಲ. ಶಿಕ್ಷಕರು ಅನ್ಯಾಯದ ವಿರುದ್ಧ ಮಾತನಾಡಬೇಕು. ಆ ನಿಟ್ಟಿನಲ್ಲಿ ಮಕ್ಕಳನ್ನು ತರಬೇತಿಗೊಳಿಸಬೇಕು. ನ್ಯಾಯಕ್ಕಾಗಿ ಸರಿಯಾದ ಮಾರ್ಗವನ್ನು ನಾವು ಕಂಡುಕೊಳ್ಳದಿದ್ದರೆ ಬ್ರಿಟಿಷರ ಆಡಳಿತಕ್ಕಿಂತ ಹೀನಾಯ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರ ನಾಥ್ ಶಾನುಭಾಗ್ ಹೇಳಿದ್ದಾರೆ.
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಅನುದಾನಿತ ಶಾಲಾ ಸಂಘಗಳ ಸಹಕಾರದೊಂದಿಗೆ ಉಡುಪಿ ಜಿಲ್ಲೆಯ 200 ಅನುದಾನಿತ ಶಾಲೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ 20000 ಜೊತೆ ಉಚಿತ ಶಾಲಾ ಸಮವಸ್ತ್ರ ವಿತರಣೆ ಕಾರ್ಯಕ್ರಮದ ಉದ್ಘಾಟನೆ ಹಾಗೂ ಮತ್ತು ವೆಬ್ಸೈಟ್ ಅನಾವರಣವನ್ನು ನೆರವೇರಿಸಿ ಅವರು ಮಾತನಾಡುತಿದ್ದರು.
ಶಾಸಕರು, ಸಂಸದರು, ಅಧಿಕಾರಿಗಳು ನಮ್ಮ ಸೇವಕರೇ ಹೊರತು ನಾವು ಅವರ ಅಡಿಯಾಳು ಅಲ್ಲ. ನಮ್ಮ ಜನಪ್ರತಿನಿಧಿಗಳಿಗೆ ಜನಪರ ಕಾಳಜಿ ಇಲ್ಲದಿದ್ದರೆ ಅವರಿಂದ ಯಾವುದೇ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಅವರು ಆರೋಪಿಸಿದರು.
ಬೀದಿನಾಯಿಗಳ ಕಡಿತದಿಂದ ಮಕ್ಕಳು ಸಾಯುತ್ತಿದ್ದಾರೆ. ನಾಯಿಗಳನ್ನು ನಿಯಂತ್ರಣ ಮಾಡುವ ಬಗ್ಗೆ ಸಾಕಷ್ಟು ಪ್ರಯೋಗಗಳು ಆದರೂ ಕೂಡ ಕರ್ನಾಟಕದಲ್ಲಿ ಇನ್ನೂ ಅದನ್ನು ಅನುಷ್ಠಾನ ಮಾಡುತ್ತಿಲ್ಲ. ಈ ಬಗ್ಗೆ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸರಕಾರ, ಜನಪ್ರತಿನಿಧಿಗಳಿಗೆ ಈ ಬಗ್ಗೆ ಇಚ್ಛಾಶಕ್ತಿಯ ಕೊರತೆ ಇದೆ ಎಂದು ಅವರು ಟೀಕಿಸಿದರು.
ಈ ಸಂದರ್ಭದಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾಪೋಷಕ ಪ್ರಶಸ್ತಿಯನ್ನು ನಿವೃತ್ತ ಪ್ರಾಧ್ಯಾಪಕ, ಪರಿಸರ ಹಾಗೂ ಕೃಷಿ ಲೇಖಕ ಎನ್. ನರೇಂದ್ರ ರೈ ದೆರ್ಲ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಇಡೀ ಪ್ರಪಂಚವನ್ನು 15 ಬಾರಿ ಸರ್ವ ನಾಶ ಮಾಡುವಷ್ಟು ಅಣು ಬಾಂಬುಗಳು ವಿವಿಧ ದೇಶಗಳಲ್ಲಿ ಇವೆ. ಆದರೆ ಜಗತ್ತಿನ 800 ಕೋಟಿ ಜನರಿಗೆ ಬೇಕಾದ ಪರಿಶುದ್ಧವಾದ ಕುಡಿಯುವ ನೀರು, ಆಮ್ಲಜನಕ, ವಿಷ ಸೇರದ ಅನ್ನ, ಮಣ್ಣು ನಮ್ಮಲ್ಲಿ ಇಲ್ಲ. ಅನ್ನ, ಮಣ್ಣು, ನೀರಿಗೆ ವಿಷ ಹಾಕಿರುವುದು ನಾವೇ ಹೊರತು ಯಾವುದೇ ಪ್ರಾಣಿ, ಪಕ್ಷಿಗಳಲ್ಲ ಎಂದರು.
ಟ್ರಸ್ಟ್ನ ಅಧ್ಯಕ್ಷ ಡಾ.ಎಚ್.ಎಸ್.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸುವ ಬಗ್ಗೆ ಯಾರಿಗೂ ಆಸಕ್ತಿ ಇಲ್ಲ. ಕನ್ನಡ ಶಾಲೆಗಳು ನಮ್ಮ ಭಾಷೆಯ ನರನಾಡಿಯಾಗಿದ್ದು, ಅದನ್ನು ಉಳಿಸುವುದು ಅತೀ ಅಗತ್ಯ ವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಜಿಲ್ಲಾ ಅನುದಾನಿತ ಪ್ರೌಢಶಾಲೆಗಳ ನೌಕರರ ಸಂಘದ ಅಧ್ಯಕ್ಷ ಡಾ.ಜಯಶೀಲ ಶೆಟ್ಟಿ ಕಂದಾವರ ಮಾತನಾಡಿದರು.
ಮಾಜಿ ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲಾ ಪ್ರಾಥಮಿಕ ಅನುದಾನಿತ ಶಾಲಾ ಸಂಘದ ಅಧ್ಯಕ್ಷ ಕೆ.ಅರುಣ್ ಕುಮಾರ್ ಶೆಟ್ಟಿ, ಟ್ರಸ್ಟ್ನ ಉಪಾಧ್ಯಕ್ಷ ಹಾಲಾಡಿ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು. ದಾಮೋದರ ಶರ್ಮ ಬಾರಕೂರು ಕಾರ್ಯಕ್ರಮ ನಿರೂಪಿಸಿದರು.
‘ಕಳೆದ ಐದು ವರ್ಷಗಳಲ್ಲಿ ನಮ್ಮ ದೇಶದ ಜನರ ಮನಸ್ಸು ಬದಲಾಗಿದೆ. ತರಗತಿ ಒಳಗೆ ಒಂದು ಗಂಟೆ ಕೂರಲು ಆಗದ ವಿದ್ಯಾರ್ಥಿಗಳನ್ನು ನಾವು ನೋಡುತ್ತಿದ್ದೇವೆ. ಅವರ ಒಳಗಿನ ಸಂವೇದನ, ಭಾವನೆ, ಮನುಷ್ಯ ಪ್ರೀತಿ, ತಾಳ್ಮೆ ಸತ್ತು ಹೋಗಿದೆ. ಆ ಮೂಲಕ ಸಂವೇದನಾ ಶೂನ್ಯರಾಗುತ್ತಿದ್ದಾರೆ. ಆದುದರಿಂದ ಶಿಕ್ಷಕರು ಮಕ್ಕಳ ಮನಸ್ಸಿನ ಯಂತ್ರವನ್ನು ಕಳಚಿ, ಅವರ ಒಳಗಡೆ ಮನುಷ್ಯತ್ವ, ಸಂಸ್ಕೃತಿಯನ್ನು ತುಂಬುವ ಕಾರ್ಯ ಮಾಡಬೇಕು’
-ನರೇಂದ್ರ ರೈ ದೆರ್ಲ, ಲೇಖಕ






