ಪೆರ್ಡೂರು ದೇವಳ ಜೀರ್ಣೋದ್ಧಾರ ಸಮಿತಿ ಕಾರ್ಯಾಲಯಉದ್ಘಾಟನೆ

ಉಡುಪಿ, ಜೂ.24: ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ದೇವರಿಗೋಸ್ಕರ ಅಲ್ಲ, ಭಕ್ತರಿಗೋಸ್ಕರ. ಇದರ ಫಲವಾಗಿ ದೇವರು ನಮಗೆ ಹತ್ತು ಪಾಲು ವಾಪಾಸು ಕೊಡುತ್ತಾನೆ. ದೇವಸ್ಥಾನ ನಿರ್ಮಾಣ ಮಾಡಿದರೆ ನಮಗೆ ಶ್ರೇಯ ದೊರಕುತ್ತದೆ. ಭಕ್ತರಾದ ನಾವು ದೇವರ ಆರಾಧನೆ ಮಾಡಿ ದೇವರಿಂದ ಫಲ ನಿರೀಕ್ಷೆ ಮಾಡ್ತೇವೆ. ಇದು ನನ್ನ ಕರ್ತವ್ಯ ಎಂಬ ಮನಸಿನಲ್ಲಿ ಮಾಡಿದಾಗ ದೇವರ ಅನುಗ್ರಹ ನಮಗೆ ಸಿಗುತ್ತದೆ ಎಂದು ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪೆರ್ಡೂರು ಶ್ರೀಅನಂತ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯಾಲಯವನ್ನು ಬುಧವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ದೇವಸ್ಥಾನದ ತ್ರಿಡಿ ವಿಡಿಯೋ ಅನಾವರಣ ಮಾಡಲಾಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಾಂತರಾಮ ಸೂಡ ಕೆ. ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೇವಾ ಕಚೇರಿಯನ್ನು ಉದ್ಘಾಟಿಸಿದರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ದೇವಸ್ಥಾನದ ಜೀರ್ಣೋದ್ಧಾರದ ಯೋಜಿತ ಮಾದರಿ ಯನ್ನು ಅನಾವರಣಗೊಳಿಸಿದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು.
ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ತುಳುಕೂಟ ಬೆಂಗಳೂರು ಇದರ ಅಧ್ಯಕ್ಷ ಬಿ.ದಿನೇಶ್ ಹೆಗ್ಡೆ ಯೋಜಿತ ನಕ್ಷೆಯ ವಿಡಿಯೋ ಅನಾವರಣ ಮಾಡಿದರು. ಹಿರಿಯ ಅರ್ಚಕ, ಸಮಿತಿಯ ಗೌರವಾಧ್ಯಕ್ಷ ಪಿ.ಕೃಷ್ಣ ಅಡಿಗ ಗಣಕಯಂತ್ರ ವಿಭಾಗವನ್ನು ಉದ್ಘಾಟಿಸಿದರು.
ಶ್ರೀಕ್ಷೇತ್ರದ ತಂತ್ರಿಗಳಾದ ಕೆ.ಜಿ.ವಿಠಲ ತಂತ್ರಿ ಕೊರಂಗ್ರಪಾಡಿ, ಕೆ.ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ, ದೇವಳದ ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಕಾರ್ಯನಿರ್ವಹಣಾಧಿಕಾರಿ ಗುರುರಾಜ್ ಪಿ.ಆರ್., ಸರದಿ ಅರ್ಚಕ ಪಿ. ಶ್ರೀಧರ ಅಡಿಗ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಲಾಲ್ ಪಕ್ಕಾಲ್ ಸ್ವಾಗತಿಸಿದರು.






