ಉಡುಪಿ: ರವಿವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ದಿನ

ಉಡುಪಿ, ಜೂ.26: ಭಾರತ ಕಳೆದ 14 ವರ್ಷಕ್ಕೂ ಮೇಲ್ಪಟ್ಟು ಪೋಲಿಯೋ ಮುಕ್ತ ರಾಷ್ಟ್ರವಾಗಿದೆ. ಇದೊಂದು ಮಹತ್ವದ ಸಾಧನೆಯಾ ಗಿದ್ದರೂ, ಪೋಲಿಯೋ ವೈರಸ್ಗಳ ಪಸರಿಸುವ ಸಾಧ್ಯತೆ ಇಂದಿಗೂ ಜಗತ್ತಿನಾದ್ಯಂತ ಮಕ್ಕಳನ್ನು ಬಾಧಿಸುತ್ತಿದೆ. ಇದರಲ್ಲಿ ಭಾರತದ ನೆರೆ ರಾಷ್ಟ್ರಗಳು ಸೇರಿರುವುದು ಭಾರತಕ್ಕೆ ಆತಂಕಕಾರಿಯಾಗಿದೆ.
2026ರಲ್ಲಿ ಇದುವರೆಗೆ ನೆರೆರಾಷ್ಟ್ರಗಳಾದ ಪಾಕಿಸ್ತಾನದಲ್ಲಿ 01 ಮತ್ತು ಆಫ್ಘಾನಿಸ್ತಾನದಲ್ಲಿ 03 ಪೋಲಿಯೋ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ದೇಶಗಳ ಮೂಲಕ ಭಾರತಕ್ಕೆ ಪೋಲಿಯೋ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಪೋಲಿಯೋ ಮುಕ್ತ ಭಾರತ ಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗಲು ಮುಂಜಾ ಗೃತಾ ಕ್ರಮವಾಗಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಭಾರತದಲ್ಲಿ ಈಗಲೂ ಮುಂದುವರಿಸಲಾಗಿದೆ.
ಭಾರತ ತಜ್ಞ ಸಲಹಾ ಗುಂಪಿನ ಶಿಫಾರಸ್ಸಿನ ಅನ್ವಯ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ)ವನ್ನು ಜೂನ್ 28ರಂದು ನಡೆಸಲು ಸರಕಾರ ನಿರ್ಧರಿಸಿದೆ. ಅದರಂತೆ ಜಿಲ್ಲೆಯಲ್ಲಿ ರವಿವಾರ ರಾಷ್ಟ್ರೀಯ ಲಸಿಕಾ ದಿನದ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ಜಿಲ್ಲೆಯಲ್ಲಿ ಜೂ.28ರಂದು ಲಸಿಕಾ ಕೇಂದ್ರದಲ್ಲಿ 0-5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿಯನ್ನು ನೀಡಲಾಗುತ್ತದೆ. ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜೂ.29 ಹಾಗೂ 30ರಂದು ಮತ್ತು ನಗರ ಪ್ರದೇಶ ದಲ್ಲಿ ಜೂ.29 ರಿಂದ ಜುಲೈ 1ರವರೆಗೆ ಮನೆ ಮನೆ ಭೇಟಿ ಮಾಡಿ ಪಲ್ಸ್ ಪೋಲಿಯೋ ಹನಿಯನ್ನು ಮಕ್ಕಳಿಗೆ ನೀಡಲಾಗುತ್ತದೆ.
ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 51,711 ಮತ್ತು ನಗರ ಪ್ರದೇಶದಲ್ಲಿ 13,690 ಸೇರಿದಂತೆ ಒಟ್ಟು 0-5 ವರ್ಷದೊಳಗಿನ 65,401 ಮಕ್ಕಳಿಗೆ ಲಸಿಕೆ ನೀಡಲಾಗುವುದು. ಜಿಲ್ಲೆಯಲ್ಲಿ ಒಟ್ಟು 665 ಲಸಿಕಾ ಕೇಂದ್ರಗಳನ್ನು (ಗ್ರಾಮೀಣ ಪ್ರದೇಶದಲ್ಲಿ 571 ಮತ್ತು ನಗರ ಪ್ರದೇಶದಲ್ಲಿ 94) ಇದಲ್ಲದೆ 3 ಮೊಬೈಲ್ ಟೀಮ್ ಮತ್ತು 19 ಟ್ರಾನ್ಸಿಟ್ ಬೂತ್ ಗಳನ್ನು ತೆರೆದು 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುತ್ತದೆ.
ಲಸಿಕಾ ಕಾರ್ಯಕ್ಕೆ 2660 ಲಸಿಕಾ ಸ್ವಯಂಸೇವಕರು, 134 ಮೇಲ್ವಿಚಾರಕರು, ಆರೋಗ್ಯ ಇಲಾಖೆ ಎಲ್ಲಾ ಅಧಿಕಾರಿಗಳು, ವೈದ್ಯಾಧಿಕಾರಿ ಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಲಿದ್ದಾರೆ.
ಕಾರ್ಯಕ್ರಮವನ್ನು ಆರೋಗ್ಯ, ಪಂಚಾಯತ್ರಾಜ್, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಗರಸಭೆ, ಕಂದಾಯ ಇಲಾಖೆ ಮತ್ತು ಇತರ ಇಲಾಖೆ, ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಹಾಗೂ ಜಿಲ್ಲಾಡಳಿತದ ಮಾರ್ಗದರ್ಶನದೊಂದಿಗೆ ನಡೆಸಲಾಗುವುದು.
ಪೋಲಿಯೋ ನಿರ್ಮೂಲನೆ ಎಲ್ಲರ ಜವಾಬ್ದಾರಿಯಾಗಿದ್ದು, ಸಾರ್ವಜನಿಕ ರು, ವಲಸೆ ಕಾರ್ಮಿಕರು, ಕೊಳಚೆ ನಿವಾಸಿಗಳು ತಮ್ಮ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ರಾಷ್ಟ್ರೀಯ ಲಸಿಕಾ ದಿನವಾದ ಜೂನ್ 28ರ ರವಿವಾರ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸುವಂತೆ ನೋಡಿಕೊಳ್ಳಬೇಕಾಗಿದೆ.
ಉದ್ಘಾಟನೆ: ಪಲ್ಸ್ ಪೋಲಿಯೊ ಕಾರ್ಯಕ್ರಮದ ಉದ್ಘಾಟನೆ ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜೂ.28ರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಯಶ್ಪಾಲ್ ಎ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.






