‘ಸೂರು ನೂರರ ಸಡಗರ’ ವಿಶೇಷ ಕಾರ್ಯಕ್ರಮ

ಉಡುಪಿ, ಜೂ.28: ಉಡುಪಿ ಯಕ್ಷಗಾನ ಕಲಾರಂಗ ತನ್ನ ವಿದ್ಯಾಪೋಷಕ್’ ಯೋಜನೆಯಡಿಯಲ್ಲಿ ಬಡ ಕಲಾವಿ ದರು ಹಾಗೂ ವಿದ್ಯಾರ್ಥಿಗಳಿಗೆ ದಾನಿಗಳ ಮೂಲಕ ನಿರ್ಮಿಸಿಕೊಡುತ್ತಿರುವ 100ನೇ ಮನೆಯ ಹಸ್ತಾಂತರದ ಪ್ರಯುಕ್ತ ‘ಸೂರು ನೂರರ ಸಡಗರ’ ವಿಶೇಷ ಕಾರ್ಯಕ್ರಮವನ್ನು ರವಿವಾರ ಉಡುಪಿ ಕಲಾರಂಗದ ಐವೈಸಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಮಾತನಾಡಿ, ಧರ್ಮ ಪ್ರಜ್ಜೆ ಉಳಿಯಲು ಯಕ್ಷಗಾನ ಕಾರಣ. ಆದರೆ ಯಕ್ಷಗಾನ ಕಲಾರಂಗವು ಕಲೆಯ ಮೂಲಕ ಕಾರ್ಯ ಮಾಡುವುದರ ಜೊತೆಗೆ ಧರ್ಮವನ್ನು ಆಚರಣೆಯನ್ನು ಕೂಡ ಮಾಡುತ್ತಿದೆ. ಸಮಾಜ ಮತ್ತು ಭವಿಷ್ಯದ ಉದ್ದೇಶದಿಂದ ಈ ಉತ್ತಮ ಕಾರ್ಯಗಳನ್ನು ಕಲಾರಂಗ ಮಾಡುತ್ತಿದೆ. ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಹುಟ್ಟಿಸುವ ಕಾರ್ಯ ಆಗುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಮಾತನಾಡಿ, ಪ್ರತಿಭಾವಂತರಿಗೆ ಮಾತ್ರವಲ್ಲ ಎಲ್ಲ ಬಡ ವಿದ್ಯಾರ್ಥಿಗಳಿಗೂ ಮನೆ ನಿರ್ಮಿಸಿಕೊಡಬೇಕು. ಆಗ ಅವರು ಉತ್ತಮ ಸೌಲಭ್ಯದೊಂದಿಗೆ ಓದಿ ಪ್ರತಿಭಾವಂತರಾಗಲು ಸಾಧ್ಯ ಇದೆ. ಹಾಗಾಗಿ ಮಾಹೆಯಿಂದ ಎಲ್ಲ ಬಡ ವಿದ್ಯಾರ್ಥಿಗಳಿಗೆ ವರ್ಷಕ್ಕೆ 10ರಂತೆ ಐದು ವರ್ಷ 50 ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಬ್ಯಾಂಕಿನ ಎಂಡಿ ಮತ್ತು ಸಿಇಓ ಎಂ.ರಾಘವೇಂದ್ರ ಭಟ್ ಅವರು ಸೂರು ನೂರರ’ ಸಂಪುಟವನ್ನು ಬಿಡುಗಡೆ ಮಾಡಿದರು. ಗೀತಾನಂದ ಫೌಂಡೇಶನ್ ಕೋಟದ ಆನಂದ ಸಿ.ಕುಂದರ್ ಶುಭಾ ಶಂಸನೆ ಗೈದರು. ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೂರು ಮನೆಗಳ ಪ್ರಾಯೋಜಕರು, ನಿರ್ಮಾಣಕ್ಕೆ ಸಹಕರಿಸಿದ ಕಾರ್ಮಿಕರು ಹಾಗೂ ಸಹಾಯ ಕರನ್ನು ಸನ್ಮಾನಿಸಲಾಯಿತು. ಜೊತೆಗೆ ಫಲಾನುಭವಿಗಳಿಗೆ ಒಂದೊಂದು ಕಸಿ ಮಾವಿನ ಗಿಡವನ್ನು ವಿತರಿಸಲಾ ಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.
ಕುಲ್ಮುಂದದಲ್ಲಿ 100ನೇ ಮನೆ ಹಸ್ತಾಂತರ
100ನೇ ಮನೆಯನ್ನು ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಕುಲ್ಮುಂದ ಗ್ರಾಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾಳಿಗೆ ನಿರ್ಮಿಸಿದ್ದು, ಇದರ ಹಸ್ತಾಂತರ ಸಮಾರಂಭ ರವಿವಾರ ನಡೆಯಿತು.
ಈ ಮನೆಯನ್ನು ಈವರೆಗೆ ವಿದ್ಯಾಪೋಷಕ್ನಿಂದ ಮನೆ ನಿರ್ಮಿಸಿಕೊಂಡ 100 ಮಂದಿ ಫಲಾನುಭವಿಗಳ ಕುಟುಂಬವೇ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದೆ. ಮನೆಯನ್ನು ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯ ಕುಮಾರ್ ಸರಳತ್ತಾಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.






