ಉಡುಪಿ ನಗರದಲ್ಲಿ ಕುಡುಕರ ಹಾವಳಿ ನಿಯಂತ್ರಿಸಲು ಪೌರಾಯುಕ್ತರಿಗೆ ಮನವಿ

ಉಡುಪಿ, ಜೂ.29: ಉಡುಪಿ ನಗರದ ಸಾರ್ವಜನಿಕ ಸ್ಥಳ ಮತ್ತು ಬಸ್ ನಿಲ್ದಾಣದಲ್ಲಿ ಕುಡುಕರ ಹಾವಳಿ ನಿಯಂತ್ರಿಸಿ, ನಿರ್ಗತಿಕರಿಗೆ ಪರ್ಯಾಯ ಆಶ್ರಯ ಕಲ್ಪಿಸಿಕೊಡುವಂತೆ ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲೆಯ ವತಿಯಿಂದ ಸೋಮವಾರ ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ನಗರ ಈಗ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇತ್ತೀಚೆಗೆ ಹೆಚ್ಚಿನ ಸಾರ್ವಜನಿಕ ಸ್ಥಳದಲ್ಲಿ ಕುಡುಕರು ಮತ್ತು ನಿರ್ಗತಿಕರ ಹಾವಳಿ ಹೆಚ್ಚಾಗಿದೆ. ಅವರು ಅಲ್ಲಿಯೇ ಮಲಗಿ ಕುಡಿದುಕೊಂಡು ಗಲಾಟೆ ಮಾಡುವುದರಿಂದ ಸಾರ್ವಜನಿಕರಿಗೆ ಮತ್ತು ಮಹಿಳೆಯರಿಗೆ ತುಂಬಾ ತೊಂದರೆ ಯಾಗುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ನಿರ್ಗತಿಕರು ಯಾವುದೇ ಪರ್ಯಾಯ ಸ್ಥಳ ಇಲ್ಲದ ಕಾರಣ ಇದನ್ನೇ ಆಶ್ರಯತಾಣ ಮಾಡಿಕೊಂಡಿದ್ದಾರೆ. ಹಾಗಾಗಿ ಅವರಿಗೆ ತಕ್ಷಣ ಪರ್ಯಾಯ ಆಶ್ರಯತಾಣ ಒದಗಿಸಬೇಕಾಗಿದೆ. ಅಲ್ಲದೆ ಕುಡುಕರಿಗೆ ನಿರ್ದಾಕ್ಷಿಣ್ಯವಾಗಿ ದಂಡ ಹಾಕಿ ಇಲ್ಲಿಂದ ತೆರವು ಮಾಡಿಸಲು ಕ್ರಮ ಕೈಗೊಳ್ಳಬೇಕು. ನಗರಸಭೆಗೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗದಿದ್ದಲ್ಲಿ ಸಂಘಟನೆ ಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಗೌರವಾಧ್ಯಕ್ಷ ಲಕ್ಷ್ಮಿಶ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಜಯಪ್ರಕಾಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸಿದ್ದಣ್ಣ ಎಸ್.ಪೂಜಾರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಅನಿತಾ ಬಿ.ವಿ., ಜಿಲ್ಲಾ ಕಾರ್ಯದರ್ಶಿ ಸುಬ್ಬಣ್ಣ ಕಾಮತ್, ಜಿಲ್ಲಾ ಸದಸ್ಯರಾದ ಅಶೋಕ, ಸಂತೋಷ್, ಹನುಮಂತ ಮೊದಲಾದವರು ಉಪಸ್ಥಿತರಿದ್ದರು.






