ಯುವಜನತೆ ತಾಯ್ನಾಡು, ಭಾಷೆಯನ್ನು ಎಂದಿಗೂ ಮರೆಯಬಾರದು: ಎಸ್ಪಿ ಹರಿರಾಂ ಶಂಕರ್

ಕುಂದಾಪುರ, ಜು.7: ಯುವಜನತೆ ತಮ್ಮ ತಾಯ್ನಾಡು, ಮೂಲ ಪರಂಪರೆ ಮತ್ತು ಭಾಷೆಯನ್ನು ಎಂದಿಗೂ ಮರೆಯ ಬಾರದು. ಅವುಗಳನ್ನು ಗೌರವಿಸಿ, ಪ್ರೀತಿಸಿ ಹಾಗೂ ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊತ್ತುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಕುಂದಾಪುರ ಕನ್ನಡ ಅಧ್ಯಯನ ಪೀಠ ಹಾಗೂ ಯಡಾಡಿ-ಮತ್ಯಾಡಿ ಸುಜ್ಞಾನ ಪಿಯು ಕಾಲೇಜು ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾದ ಕುಂದಾಪುರ ಕನ್ನಡ ಭಾಷಿಕ ಪ್ರದೇಶದ ವಿದ್ಯಾರ್ಥಿಗಳಿಗಾಗಿ ನಡೆದ ಸಾಂಸ್ಕೃತಿಕ ಮತ್ತು ಚಿತ್ರಕಲಾ ಸ್ಪರ್ಧೆಗಳ ವಾಲ್ಬೆಲ್ಲ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.
ನಾನು ಮೊದಲ ಸೇವೆಯನ್ನು ಕುಂದಾಪುರ ಉಪವಿಭಾಗದ ಎಎಸ್ಪಿಯಾಗಿ ಆರಂಭಿಸಿದ್ದು, ಇಂದು ಉಡುಪಿ ಜಿಲ್ಲೆಯ ಎಸ್ಪಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ. ಎಲ್ಲಿ ಹೋದರೂ ಕುಂದಾಪುರದೊಂದಿಗಿನ ನಂಟು ನನ್ನ ಜೀವನ ದಿಂದ ಬೇರ್ಪಡಿಸಲಾಗದು. ನನ್ನ ಹುಟ್ಟೂರು ತ್ರಿಶೂರ್ ಆಗಿದ್ದರೂ, ಕುಂದಾಪುರವೇ ನನ್ನ ಮತ್ತೊಂದು ಹುಟ್ಟೂರು ಎನ್ನುವಷ್ಟು ಈ ನೆಲ ನನ್ನ ಜೀವನದ ಮೇಲೆ ಪ್ರಭಾವ ಬೀರಿದೆ. ನಾನು ಕನ್ನಡವನ್ನು ಕಲಿತದ್ದೂ ಕುಂದಾಪುರದಲ್ಲೇ ಎಂದರು.
ಮುಖ್ಯ ಅತಿಥಿಯಾಗಿ ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್.ಆರ್. ಮಾತನಾಡಿ, ಕರ್ನಾಟಕದ ವಿವಿಧ ಭಾಗಗಳಲ್ಲಿ ಕನ್ನಡ ಭಾಷೆಯ ಹಲವು ಪ್ರಾದೇಶಿಕ ರೂಪಗಳು ಬಳಕೆಯಲ್ಲಿದ್ದರೂ, ಕನ್ನಡಿಗರು ಎಲ್ಲರೂ ಏಕತೆ ಮತ್ತು ಸಾಮರಸ್ಯದಿಂದ ಬದುಕುತ್ತಿರುವುದು ನಮ್ಮ ಸಂಸ್ಕೃತಿಯ ವೈಶಿಷ್ಟ್ಯ ಎಂದು ಹೇಳಿದರು.
ಸಮಾರೋಪ ಭಾಷಣ ಮಾಡಿದ ಮಾಜಿ ಸಚಿವ ಹಾಗೂ ಕುಂದಾಪುರ ಕನ್ನಡ ಅಧ್ಯಯನ ಪೀಠದ ಸದಸ್ಯ ಕೆ.ಜಯಪ್ರಕಾಶ್ ಹೆಗ್ಡೆ, ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗೆ ಅನುಗುಣವಾಗಿ ಪೋಷಕರು ಪ್ರೋತ್ಸಾಹ ನೀಡಿದಾಗ ಮಾತ್ರ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆಯನ್ನು ನಿರೀಕ್ಷಿಸಬಹುದು ಎಂದು ಹೇಳಿದರು.
ನಾವು ಮಾತನಾಡುವ ಭಾಷೆ ಹಾಗೂ ಬಳಸುವ ಪ್ರತಿಯೊಂದು ಶಬ್ದವೂ ಉತ್ತಮ ಮೌಲ್ಯಗಳನ್ನು ಪ್ರತಿಬಿಂಬಿಸು ವಂತಿರಬೇಕು. ಅದು ನಮ್ಮ ಸಂಸ್ಕೃತಿ ಮತ್ತು ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಜೀವನದಲ್ಲಿ ಮಾನವೀಯ ಮೌಲ್ಯ ಗಳನ್ನು ಅಳವಡಿಸಿಕೊಂಡು ಸಮಾಜಮುಖಿಯಾಗಿ ಬದುಕಬೇಕು ಎಂದು ಅವರು ಕರೆ ನೀಡಿದರು.
ಕುಂದಗನ್ನಡ ಅಧ್ಯಯನ ಪೀಠದ ಸ್ಥಾಪನೆಗಾಗಿ ಶ್ರಮಿಸಿದ ಜಯಪ್ರಕಾಶ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಸುಜ್ಞಾನ ಎಜುಕೇಷನಲ್ ಟ್ರಸ್ಟ್ನ ಅಧ್ಯಕ್ಷ ಡಾ.ರಮೇಶ್ ಶೆಟ್ಟಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರಣ್ಯ ಪ್ರಶಸ್ತಿಯನ್ನು ಕುಂದಾಪುರ ಕನ್ನಡ ಪ್ರತಿಷ್ಠಾನಕ್ಕೆ ಪ್ರದಾನ ಮಾಡಲಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ ಪ್ರಶಸ್ತಿ ಸ್ವೀಕರಿಸಿದರು. ಸಾಂಸ್ಕೃತಿಕ ಸ್ಪರ್ಧೆಗಳ ಒಟ್ಟಾರೆ ಪ್ರಶಸ್ತಿಯಲ್ಲಿ ಸುಜ್ಞಾನ ಪಿಯು ಕಾಲೇಜು, ಯಡಾಡಿ-ಮತ್ಯಾಡಿ ಪ್ರಥಮ ಸ್ಥಾನ, ಮೂಕಾಂಬಿಕಾ ಪಿಯು ಕಾಲೇಜು, ಕೊಲ್ಲೂರು ದ್ವಿತೀಯ ಸ್ಥಾನ ಹಾಗೂ ಶ್ರೀ ಶಾರದಾ ಪಿಯು ಕಾಲೇಜು, ಬಸ್ರೂರು ಮತ್ತು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು, ಬಾರ್ಕೂರು ಜಂಟಿಯಾಗಿ ತೃತೀಯ ಸ್ಥಾನ ಪಡೆದರು.
‘ಕುಂದಾಪುರ ಕನ್ನಡ ಅಧ್ಯಯನ ಪೀಠದ ಮೂಲಕ ಇಂತಹ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಸಿದ್ಧರಾಗಿದ್ದೇವೆ. ನಮ್ಮ ಭಾಷೆಯನ್ನು ಇತರರಿಗೆ ಕಲಿಸುವ ಮೂಲಕ ಅದನ್ನು ಇನ್ನಷ್ಟು ಬೆಳೆಸಬೇಕು. ಹೊಸ ಪದಗಳನ್ನು ಸಂಗ್ರಹಿಸಿ ಅಧ್ಯಯನ ಪೀಠಕ್ಕೆ ಸಲ್ಲಿಸಿದರೆ, ಅವುಗಳನ್ನು ಪರಿಶೀಲಿಸಿ ಶಬ್ದಕೋಶಕ್ಕೆ ಸೇರ್ಪಡೆಗೊಳಿಸುವ ಕಾರ್ಯ ಕೈಗೊಳ್ಳ ಲಾಗುವುದು’
-ಜಯಪ್ರಕಾಶ್ ಹೆಗ್ಡೆ, ಸದಸ್ಯರು, ಕುಂದಾಪುರ ಕನ್ನಡ ಅಧ್ಯಯನ ಪೀಠ






