ಬೀಡಿನಗುಡ್ಡೆಯಲ್ಲಿ ಎಂಆರ್ಎಫ್ ಘಟಕ ನಿರ್ಮಾಣಕ್ಕೆ ವಿರೋಧ: ನಗರಸಭೆ ಅಧಿಕಾರಿಗಳೊಂದಿಗೆ ಚರ್ಚೆ

ಉಡುಪಿ, ಜು.8: ಉಡುಪಿ ನಗರ ಪ್ರದೇಶದ ಒಣಕಸಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ ಬೀಡಿನಗುಡ್ಡೆಯಲ್ಲಿ ನಿರ್ಮಿಸಲಾಗುತ್ತಿರುವ ಎಂಆರ್ಎಫ್(ಮೆಟೀರಿಯಲ್ ರಿಕವರಿ ಪೆಸಿಲಿಟಿ) ಘಟಕಕ್ಕೆ ಬೀಡಿನಗುಡ್ಡೆ ಅಭಿವೃದ್ಧಿ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಬೀಡಿನಗುಡ್ಡೆ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಉಡುಪಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಸಮ್ಮುಖದಲ್ಲಿ ಶನಿವಾರ ಬೀಡಿನ ಗುಡ್ಡೆಯ ಎಂಆರ್ಎಫ್ ಘಟಕದಲ್ಲಿ ನಡೆದ ಸಭೆಯಲ್ಲಿ ಈ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರಕಾರದ ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ಸುಮಾರು 3ರಿಂದ 3.5ಕೋಟಿ ರೂ. ವೆಚ್ಚದಲ್ಲಿ 33 ಟನ್ ಸಾಮರ್ಥ್ಯದಲ್ಲಿ ಈ ಘಟಕ ನಿರ್ಮಾಣವಾಗುತ್ತಿದೆ.
ಬೀಡಿನಗುಡ್ಡೆ ಅಭಿವೃದ್ಧಿ ಸಮಿತಿ ಸ್ಥಳೀಯರಾದ ಸುಧೀರ್ ದೇವಾಡಿಗ ಮಾತನಾಡಿ, ಘಟಕ ನಿರ್ಮಿಸುವ ಆರಂಭದಲ್ಲಿ ಇಲ್ಲಿ ತರಕಾರಿ ಮಾರುಕಟ್ಟೆ ಹೇಳಿದರೂ ನಂತರ ಮೀನು ಮಾರುಕಟ್ಟೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ನಮಗೆ ಯಾವುದೇ ಮಾಹಿತಿ ನೀಡಿದೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಈ ಘಟಕ ಮಾಡಲಾಗುತ್ತಿದೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ, ನಾವು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಈ ಕಾರ್ಯ ಆರಂಭಿಸಿ ದ್ದೇವೆ. ಸಾರ್ವಜನಿಕರಿಗೆ ನಾವು ಇಲ್ಲಿ ತರಕಾರಿ, ಮೀನು ಮಾರುಕಟ್ಟೆ ಮಾಡುತ್ತೇವೆ ಎಂದು ಸುಳ್ಳು ಹೇಳಿ ಘಟಕ ವನ್ನು ಆರಂಭಿಸಿಲ್ಲ. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ, ಪತ್ರಿಕಾ ಪ್ರಕಟಣೆಯನ್ನು ನೀಡಿಯೇ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಇಲ್ಲಿ ಒಣ ತ್ಯಾಜ್ಯ ಘಟಕವೇ ಮಾಡುವುದಾಗಿ ನಾವು ಮೊದಲೇ ಹೇಳಿದ್ದೇವೆ. ಸ್ಥಳೀಯರಿಗೆ ಈ ಘಟಕದಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಪೌರಾಯುಕ್ತ ಈ ಸಂದರ್ಭದಲ್ಲಿ ಭರವಸೆ ನೀಡಿದರು. ಈ ಘಟಕದಿಂದ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆ ಆಗುವುದಾದರೆ ಕೋರ್ಟ್ ಮೂಲಕ ಸ್ಥಗಿತಗೊಳಿಸಲು ಅವಕಾಶ ಕೂಡ ಇದೆ ಎಂದು ಅವರು ತಿಳಿಸಿದರು.
ಈ ಹಿಂದೆ ಬೀಡಿನಗುಡ್ಡೆಯಲ್ಲಿ ಹಾಕುತ್ತಿದ್ದ ಕಸದ ರಾಶಿಯಿಂದ ನಾವು ಸಾಕಷ್ಟು ಸಮಸ್ಯೆ ಅನುಭವಿಸಿದ್ದೇವೆ. ಇದೀಗ ಮತ್ತೆ ತ್ಯಾಜ್ಯ ಘಟಕ ಇಲ್ಲಿಗೆ ತರುವುದು ಬೇಡ ಎಂದು ಸ್ಥಳೀಯರು ಆಗ್ರಹಿಸಿದರು. ನಗರಸಭೆ ಇರುವುದು ನಾಗರಿಕರ ಅಭಿವೃದ್ಧಿಗಾಗಿ. ಸಮಾಜಕ್ಕೆ ತೊಂದರೆ ಆಗುವ ಯಾವುದೇ ಯೋಜನೆ ನಾವು ತರುವುದಿಲ್ಲ. ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಪೌರಾಯುಕ್ತರು ಹೇಳಿದರು.
ಸ್ಥಳೀಯರಾದ ಕಾರ್ತಿಕ್ ದೇವಾಡಿಗ ಮಾತನಾಡಿ, ಒಣ ಕಸ ಸುರಕ್ಷಿತ ಎಂಬುದು ಯಾರು ಹೇಳಿದ್ದು. ಒಣ ಕಸದಿಂದಲೂ ಬೇಕಾದಷ್ಟು ಆರೋಗದ್ಯ ಸಮಸ್ಯೆ ಎದುರಾಗುತ್ತದೆ. ಅದರಲ್ಲಿ ಫ್ಲಾಸ್ಟಿಕ್, ಔಷಧಿ ಸೇರಿದಂತೆ ರಾಸಾಯನಿಕಯುಕ್ತ ತ್ಯಾಜ್ಯಗಳು ಇರುತ್ತವೆ. ಒಣ ಕಸದಲ್ಲಿರುವ ರಾಸಾಯನಿಕ ಹಸಿ ಕಸಕ್ಕಿಂತ ಅಪಾಯಕಾರಿ ಎಂದು ಟೀಕಿಸಿದರು.
ಒಂದು ಕಾಲದಲ್ಲಿ ಬೀಡಿನಗುಡ್ಡೆ ಕಸದ ತೊಟ್ಟಿ ಆಗಿತ್ತು. ಎಲ್ಲ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಜಂಕ್ಷನ್ನ್ನು ಮತ್ತೆ ಆ ಮಟ್ಟಕ್ಕೆ ತೆಗೆದು ಹೋಗಲು ನಾವು ಬಿಡುವುದಿಲ್ಲ. ಇದಕ್ಕೆ ನಮ್ಮ ವಿರೋಧ ಇದೆ. ಮೊದಲು 15 ವಾರ್ಡ್ ಗಳ ಕಸ ಮಾತ್ರ ಇಲ್ಲಿ ತರಲಾಗುತ್ತದೆ ಎಂದು ಹೇಳುತ್ತಾರೆ. ಮುಂದೆ 35 ವಾರ್ಡ್ಗಳ ಕಸವೂ ಇಲ್ಲಿಗೆ ಬರುತ್ತ ದೆಂದು ಅವರು ಆರೋಪಿಸಿದರು.
ಶೇಕ್ ವಾಹೀದ್ ದಾವೂದ್ ಸಾಹೇಬ್ ಮಾತನಾಡಿ, ಸ್ಮಶಾನ ಇರುವ ಈ ಜಾಗದಲ್ಲಿ ಪಾರ್ಕ್ ನಿರ್ಮಿಸಬೇಕೆ ಹೊರತು ಇಂತಹ ಜನವಿರೋಧಿ ಘಟಕ ಅಲ್ಲ. ಆದುದರಿಂದ ಈ ಸಮಸ್ಯೆಗೆ ಕೂಡಲೇ ಪರಿಹಾರ ಕಂಡು ಕೊಂಡು, ಈ ಘಟಕವನ್ನು ಇಲ್ಲಿಂದ ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಬೀಡಿನಗುಡ್ಡೆ ಅಭಿವೃದ್ಧಿ ಸಮಿತಿಯ ಚಂದ್ರ ಮೋಹನ್, ನಗರಸಭೆ ನಾಮನಿರ್ದೇಶಿತ ಮಾಜಿ ಸದಸ್ಯ ಮುಹಮ್ಮದ್, ನಗರಸಭೆ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಯಶ್ವಂತ್, ಪರಿಸರ ಇಂಜಿನಿಯರ್ ರವಿ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.






