ಸುಸ್ಥಿರ, ಆದರ್ಶ ಉಡುಪಿನಿರ್ಮಾಣ ಸಂಕಲ್ಪಕ್ಕೆ ‘ವಿಷನ್ ಉಡುಪಿ’

ಉಡುಪಿ, ಜು.11: ಸಮೃದ್ಧ, ಸುಸ್ಥಿರ ಹಾಗೂ ಆದರ್ಶ ಉಡುಪಿ ನಿರ್ಮಾಣದ ಸಂಕಲ್ಪಕ್ಕಾಗಿ ಉಡುಇ ಚೇಂಬರ್ ಆಫ್ ಕಾಮರ್ಸ್ ಹಾಗೂ ಇಂಡಸ್ಟ್ರೀಸ್, ಕ್ರೆಡೈ ಉಡುಪಿ ಹಾಗೂ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಉಡುಪಿ ಶಾಖೆಯ ಸಹಯೋಗದಲ್ಲಿ ‘ವಿಷನ್ 20-30-35’ ಎಂಬ ಮಹಾತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಚೇಂಬರ್ ಆಫ್ ಕಾಮರ್ಸ್ನ ಗೌರವ ಕಾರ್ಯದರ್ಶಿ ಡಾ.ವಿಜಯೇಂದ್ರ ವಸಂತ ಹೇಳಿದ್ದಾರೆ.
ಉಡುಪಿ ಪ್ರೆಸ್ಕ್ಲಬ್ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಷನ್ ಉಡುಪಿ ಯೋಜನೆಯ ಅಂಗವಾಗಿ ನಡೆಯುವ ಮೊದಲ ಸಮಾಲೋಚನಾ ಸಭೆ ನಾಳೆ ಸಂಜೆ 5:00ಗಂಟೆಗೆ ಉಡುಪಿ ಹೊಟೇಲ್ ಕಿದಿಯೂರಿನ ಶೇಷಶಯನ ಹಾಲ್ನಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಈ ಪರಿಕಲ್ಪನೆ ಡಾ.ವಿಜಯೇಂದ್ರ ವಸಂತ ಅವರ ಕನಸಿನ ಕೂಸಾಗಿದ್ದು, ಅವರು ಈ ‘ವಿಷನ್ 20-3-35’ದ ಪ್ರಧಾನ ಸಂಯೋಜಕರೂ ಆಗಿದ್ದಾರೆ. ನಾಳಿನ ಕಾರ್ಯಕ್ರಮದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಉಡುಪಿಯ ಯೋಜಿತ ಅಭಿವೃದ್ಧಿ ಪಥದ ನೀಲನಕ್ಷೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಉಡುಪಿ ಜಿಲ್ಲೆ ತನ್ನ ಧಾರ್ಮಿಕ ಪರಂಪರೆ, ಶಿಕ್ಷಣ, ಆರೋಗ್ಯ, ಉದ್ಯಮ, ಕೃಷಿ, ಮೀನುಗಾರಿಕೆ, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯದ ಮೂಲಕ ದೇಶದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದು, ಬದಲಾಗುತ್ತಿರುವ ಜಾಗತಿಕ ಪರಿಸ್ಥಿತಿ, ತಂತ್ರಜ್ಞಾನ, ಹವಾಮಾನ ಬದಲಾವಣೆ, ನಗರೀಕರಣ ಹಾಗೂ ಆರ್ಥಿಕ ಬೆಳವಣಿಗೆ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ದೂರದೃಷ್ಟಿ ಯೋಜನೆ ಇದಾಗಿದೆ ಎಂದು ಡಾ.ವಿಜಯೇಂದ್ರ ತಿಳಿಸಿದರು.
ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ಮಾತನಾಡಿ, 2035ರ ವೇಳೆಗೆ ಉಡುಪಿ ಜಿಲ್ಲೆಯನ್ನು ದೇಶದ ಅತ್ಯುತ್ತಮ ಸುಸ್ಥಿರ, ತಂತ್ರಜ್ಞಾನ ಆಧಾರಿತ, ಪರಿಸರ ಸ್ನೇಹಿ, ಹೂಡಿಕೆ ಆಕರ್ಷಿಸುವ, ಸುರಕ್ಷಿತ, ಸಾಂಸ್ಕೃತಿಕವಾಗಿ ಶ್ರೀಮಂತ ಹಾಗೂ ಮಾದರಿ ಜಿಲ್ಲೆಯನ್ನಾಗಿ ರೂಪಿಸುವುದು ಈ ಯೋಜನೆಯ ಪ್ರಧಾನ ಗುರಿಯಾಗಿದೆ ಎಂದರು.
ಇದಕ್ಕಾಗಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಪಾಲುದಾರರನ್ನು ಒಂದೇ ವೇದಿಕೆಗೆ ತಂದು ಮುಂದಿನ ಹತ್ತು ವರ್ಷಗಳ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ರೂಪಿಸುವುದು ನಮ್ಮ ಮುಖ್ಯ ಧ್ಯೇಯವಾಗಿದೆ. ಅಭಿವೃದ್ಧಿಯ ಆಯಾಮ ಗಳಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ, ವಿಶ್ವದರ್ಜೆಯ ರಸ್ತೆ ಜಾಲ, ಸುಗಮ ಸಂಚಾರ ವ್ಯವಸ್ಥೆ, ಸ್ಮಾರ್ಟ್ ಟ್ರಾಪಿಕ್ ನಿರ್ವಹಣೆ, ಸುಸ್ಥಿರ ನಗರ ಯೋಜನೆ, ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ, ಪ್ರವಾಸೋದ್ಯಮದ ಸರ್ವತೋಮುಖ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಪರಿಸರ ಸಂರಕ್ಷಣೆ, ಸ್ಮಾರ್ಟ್ ಆಡಳಿತ ಸೇರಿವೆ ಎಂದರು.
ನಾಳಿನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಶಾಸಕರು, ವಿಧಾನಪರಿಷತ್ನ ಸದಸ್ಯರು, ಮಾಜಿ ಶಾಸಕರು, ಸಚಿವರು, ವಿವಿಧ ಮಂಡಳಿಗಳ ಅಧ್ಯಕ್ಷರು, ಗಣ್ಯರು, ಜಿಲ್ಲಾಡಳಿತದ ಪ್ರಮುಖರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಡಾ.ವಿಜಯೇಂದ್ರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರೆಡೈ ಅಧ್ಯಕ್ಷ ಭಗವಾನ್ದಾಸ್, ಪ್ರಧಾನ ಕಾರ್ಯದರ್ಶಿ ಹಾಗೂ ಇತರರು ಉಪಸ್ಥಿತರಿದ್ದರು.






