ಬೈಂದೂರಿಗೆ ಶೀಘ್ರ ತಾಲೂಕು ಆಸ್ಪತ್ರೆ ಮಂಜೂರು: ಸಚಿವ ಯುಟಿ ಖಾದರ್

ಬೈಂದೂರು, ಜು.13: ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ನೇತೃತ್ವದಲ್ಲಿ ಬೈಂದೂರು ರೈತರ ನಿಯೋಗವೊಂದು ಆರೋಗ್ಯ ಸಚಿವ ಯು.ಟಿ ಖಾದರ್ ಅವರನ್ನು ಉಳ್ಳಾಲದಲ್ಲಿ ಸೋಮವಾರ ಭೇಟಿ ಮಾಡಿ ಮಾತುಕತೆ ನಡೆಸಿಕು.
ರೈತರು ಪ.ಪಂ ವ್ಯಾಪ್ತಿಯಿಂದ ಗ್ರಾಮೀಣ ಭಾಗಗಳನ್ನು ಕೈ ಬಿಡಲು ಆಗ್ರಹಿಸಿ ಕಳೆದ 292 ದಿನಗಳಿಂದ ಬೈಂದೂರು ತಾಲೂಕು ಆಡಳಿತ ಕಛೇರಿ ಎದುರು ಧರಣಿ ನಡೆಸುತ್ತಿದ್ದು ಸಚಿವರು ಸಂಪೂರ್ಣ ಮಾಹಿತಿ ಪಡೆದು ರಾಜ್ಯ ಅಧೀನ ಕಾರ್ಯದರ್ಶಿಗಳೊಂದಿಗೆ ಸ್ಥಳದಲ್ಲೆ ಮಾತನಾಡಿದರು. ಮತ್ತು ಸರಕಾರದ ಮಟ್ಟದಲ್ಲಿ ಮಾಹಿತಿ ಪಡೆದು ರೈತರ ಹೋರಾಟಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದರು ಎಂದು ತಿಳಿದುಬಂದಿದೆ.
ಬೈಂದೂರಿಗೆ ತಾಲೂಕು ಆಸ್ಪತ್ರೆ: ಬೈಂದೂರು ಅತ್ಯಂತ ವಿಸ್ತಾರವಾದ ಕ್ಷೇತ್ರವಾಗಿದ್ದು ಬಹುತೇಕ ಗ್ರಾಮೀಣ ಭಾಗಗಳನ್ನು ಹೊಂದಿದೆ. ಹೀಗಾಗಿ ಈ ಭಾಗದಲ್ಲಿ ತಾಲೂಕು ಆಸ್ಪತ್ರೆ ಅತ್ಯಗತ್ಯವಾಗಿದೆ. ಶೀಘ್ರ ಬೈಂದೂರಿಗೆ ತಾಲೂಕು ಆಸ್ಪತ್ರೆ ಮಂಜೂರು ಮಾಡಲಾಗುವುದು ಎಂದವರು ಭರವಸೆ ನೀಡಿದರು.
ತಾಲೂಕು ರಕ್ಷಾ ಸಮಿತಿ ಪರವಾಗಿ ರೈತ ಮುಖಂಡ ವೀರಭದ್ರ ಗಾಣಿಗ ಸಚಿವರಿಗೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಮ್ಯಾಥ್ಯೂ, ಗಣೇಶ ಪೂಜಾರಿ, ಪದ್ಮಾಕ್ಷ ಗೋಳಿಬೇರು, ಶಬ್ಬೀರ್ ಬೈಂದೂರು, ನೂರ್ ಮಹ್ಮದ್, ದೇವಪ್ಪ ಮರಾಠಿ, ಸುಧೀರ್ ಪೂಜಾರಿ, ಸಿದ್ದೀಕ್, ವಾಸುದೇವ ಮರಾಠಿ ಹೊಸೂರು, ಮಹಾದೇವ ಪೂಜಾರಿ, ಹೆರಿಯ ಪೂಜಾರಿ ಗೋಳಿಬೇರು, ಕೇಶವ ಮುಂತಾದವರು ಹಾಜರಿದ್ದರು.






