ಗಾಳಿ - ಮಳೆ: ಉಡುಪಿ ಜಿಲ್ಲೆಯ ಮನೆ, ತೋಟಗಳಿಗೆ ಹಾನಿ

ಉಡುಪಿ: ಜಿಲ್ಲೆಯಲ್ಲಿ ಇಂದು ಸಹ ಬಿಟ್ಟು ಬಿಟ್ಟು ಮಳೆ ಯಾಗಿದೆ. ನಿರಂತರ ಮಳೆ ಸುರಿಯದೇ ಇರುವುದರಿಂದ ಕೃಷಿ ಚಟುವಟಿಕೆ ಗಳಿಗೆ ಬೇಕಷ್ಟು ನೀರು ಸಿಗದೇ ಸಮಸ್ಯೆ ಮುಂದುವರಿದಿದೆ. ಇಂದು ಒಂದು ಮನೆ ಹಾಗೂ ಎರಡು ತೋಟಗಳಿಗಾ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ.
ಶನಿವಾರ ಮುಂಜಾನೆ ಬೀಸಿದ ಗಾಳಿ ಹಾಗೂ ಮಳೆಗೆ ಕುಂದಾಪುರ ತಾಲೂಕು ಉಳ್ಳೂರು ಗ್ರಾಮದ ವಸಂತ ಶೆಟ್ಟಿ ಇವರ ತೋಟದ ಸುಮಾರು 10 ಅಡಿಕೆ ಮರಗಳು ಗಾಳಿಗೆ ಉರುಳಿ ಬಿದ್ದಿದ್ದು 20ಸಾವಿರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಅದೇ ಗ್ರಾಮದ ಬಾಬು ಹಾಂಡ ಎಂಬವರ ಮನೆಯ ತೋಟಕ್ಕೂ ಬೀಸಿದ ಗಾಳಿಯಿಂದ ಸುಮಾರು 15 ಅಡಿಕೆ ಮರಗಳು ತುಂಡಾಗಿ ಉರುಳಿ ಬಿದ್ದಿವೆ. ಇದರಿಂದ 25ಸಾವಿರ ರೂ.ಗಳಿಗ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕಾಪು ತಾಲೂಕು ಎಲ್ಲೂರು ಗ್ರಾಮದ ನವೀನ್ ಅಮೀನ್ ಎಂಬವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಬಾಗಶ: ಹಾನಿಯಾಗಿದೆ. ಇದರಿಂದ ಸುಮಾರು 10ಸಾವಿರ ರೂ.ಗಳ ನಷ್ಟವಾಗಿರುವ ಮಾಹಿತಿ ಇದೆ.
ಜಿಲ್ಲೆಯಲ್ಲಿ ಇಂದು ಬೆಳಗಿನವರೆಗೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ 49.9ಮಿ.ಮೀ.ಮಳೆಯಾಗಿದೆ. ಕಾಪುವಿನಲ್ಲಿ ಅತ್ಯಧಿಕ 84.5ಮಿ.ಮೀ. ಮಳೆಯಾದ ವರದಿ ಬಂದಿದೆ. ಉಳಿದಂತೆ ಕಾರ್ಕಳದಲ್ಲಿ 76.6, ಉಡುಪಿಯಲ್ಲಿ 60.2, ಹೆಬ್ರಿಯಲ್ಲಿ 50.8, ಬ್ರಹ್ಮಾವರದಲ್ಲಿ 36.0 ಹಾಗೂ ಬೈಂದೂರಿನಲ್ಲಿ 25.3ಮಿ.ಮೀ. ಮಳೆ ದಾಖಲಾಗಿದೆ.






