ಗಂಗೊಳ್ಳಿಯಲ್ಲಿ ಮೀನುಗಾರರಿಂದ ಸಮುದ್ರಪೂಜೆ

ಕುಂದಾಪುರ, ಆ.3: ಮತ್ಸ್ಯಕ್ಷಾಮ ಬಾರದೆ, ಮೀನುಗಳ ಸಮೃದ್ಧಿ ನೆಲೆಸಿ ಮೀನುಗಾರಿಕೆಗೆ ತೆರಳಿದಾಗ ಯಾವುದೇ ಅಡ್ಡಿ ಆತಂಕಗಳು ಮೀನುಗಾರರಿಗೆ ಎದುರಾಗದಿರಲಿ ಎಂದು ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ಸೋಮವಾರ ಸಮುದ್ರಪೂಜೆ ನೆರವೇರಿಸಿದರು.
ಗಂಗೊಳ್ಳಿಯ ಅರ್ಚಕ ವೇದಮೂರ್ತಿ ವಿಠಲ್ದಾಸ್ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆಯ ಧಾರ್ಮಿಕ ವಿಧಿಗಳು ನೆರವೇರಿತು. ಪರ್ಸಿನ್ ಬೋಟ್, ತ್ರಿಸೆವೆಂಟಿ ಬೋಟ್ ಹಾಗೂ ಟ್ರಾಲರ್ ಬೋಟ್ಗಳ ಸಂಘದ ಸದಸ್ಯರು ಸಮುದ್ರ ರಾಜನಿಗೆ ಹಾಲು, ಸೀಯಾಳ, ಫಲಪುಷ್ಪವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಪರ್ಸಿನ್ ಬೋಟ್ಗಳ ಮೀನುಗಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಡಿವಾಳ, ತ್ರಿಸೆವೆಂಟಿ ಬೋಟ್ಗಳ ಮೀನುಗಾರರ ಸಂಘದ ಅಧ್ಯಕ್ಷ ಸೌಪರ್ಣಿಕಾ ಬಸವ ಖಾರ್ವಿ, ಟ್ರಾಲರ್ ಬೋಟುಗಳ ಮೀನುಗಾರರ ಸಂಘದ ಅಧ್ಯಕ್ಷ ಗಣೇಶ್ ಖಾರ್ವಿ, ಪ್ರಮುಖರಾದ ಚಂದ್ರ ಖಾರ್ವಿ, ನಾರಾಯಣ ಖಾರ್ವಿ, ರಾಘವೇಂದ್ರ ಮೇಸ್ತ, ಸುಬ್ರಹ್ಮಣ್ಯ ಖಾರ್ವಿ, ನಾಗರಾಜ ಖಾರ್ವಿ, ಬೋಟುಗಳ ಮಾಲಕರು, 3 ಸಂಘಗಳ ಸದಸ್ಯರು, ಮೀನುಗಾರರು ಉಪಸ್ಥಿತರಿದ್ದರು.
ಆ.16ರಿಂದ ಪರ್ಶಿನ್ ಬೋಟ್ಗಳು ಕಡಲಿಗೆ
ಕಡಲಿನಲ್ಲಿ ತುಪಾನ್(ಗಾಳಿಯೊತ್ತಡ) ಹೆಚ್ಚಿದೆ. ಹೀಗಾಗಿ ಎರಡು ತಿಂಗಳ ಮೀನುಗಾರಿಕಾ ನಿರ್ಬಂಧ ಜು.31ಕ್ಕೆ ಮುಗಿದಿದ್ದರೂ ಕೂಡ ಕಡಲಿಗಿಳಿಯಲು ಅಸಾಧ್ಯವಾಗಿದೆ. ಗಂಗೊಳ್ಳಿಯಲ್ಲಿ ದಡದಲ್ಲಿದ್ದ ಬೋಟ್ಗಳನ್ನು ನೀರಿಗೆ ಇಳಿಸುವ ಕಾರ್ಯ, ಬಲೆ ಹೆಣೆಯುವ, ಇನ್ನಿತರ ಪರಿಕರಗಳನ್ನು ಒಟ್ಟುಗೂಡಿಸುವ, ಬೋಟ್ಗಳಿಗೆ ಬಣ್ಣ ಬಳಿಯುವ ಕಾರ್ಯ ಭರದಿಂದ ನಡೆಯುತ್ತಿದೆ. ಗಂಗೊಳ್ಳಿಯಲ್ಲಿ ಆ.16ರ ನಂತರ ಕಡಲಿಗೆ ಇಳಿಯಲು ಸಿದ್ದತೆ ಮಾಡಿಕೊಂಡಿದೆ ಎಂದು ಪರ್ಸಿನ್ ಬೋಟ್ಗಳ ಮೀನುಗಾರರ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಡಿವಾಳ ಹಾಗೂ ಮುಖಂಡ ರಾದ ಸುಬ್ರಹ್ಮಣ್ಯ ಖಾರ್ವಿ ಉಪ್ಪುಂದ ತಿಳಿಸಿದ್ದಾರೆ.






