‘ಅಧಿಕಾರಿಗಳು ಬುದ್ಧಿವಂತಿಕೆಯೊಂದಿಗೆ ಹೃದಯವಂತಿಕೆಯನ್ನೂ ತೋರಿಸಿ’ ಜನಸಾಮಾನ್ಯರಿಗೆ ತೋರಬೇಕಿರುವ ಸ್ಪಂದನೆ ಕುರಿತು ಸಚಿವ ಯುಟಿ ಖಾದರ್

ಕಾಪು, ಆ.7: ಪ್ರಕೃತಿ ವಿಕೋಪದಿಂದ ಜನಸಾಮಾನ್ಯರು ತೊಂದರೆ ಅನುಭವಿಸಿದ ಸಂದರ್ಭದಲ್ಲಿ, ಅವರಿಗೆ ಪರಿಹಾರ ಒದಗಿಸುವ ವೇಳೆಯಲ್ಲಿ ಅಧಿಕಾರಿಗಳು ‘ಬುದ್ಧಿವಂತಿಕೆ’ ಮಾತ್ರವಲ್ಲ, ಸ್ವಲ್ಪಮಟ್ಟಿನ ಹೃದಯವಂತಿಕೆ ಹಾಗೂ ಮಾನವೀಯತೆ ಪ್ರದರ್ಶಿಸಿ ಪ್ರಜ್ಞಾವಂತಿಕೆಯ ನಿರ್ಧಾರ ತೆಗೆದು ಕೊಂಡು ಜನರ ಸಂಕಷ್ಟಗಳಿಗೆ ಸ್ಪಂದಿಸುವಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಫರೀದ್ ಅಧಿಕಾರಿಗಳಿಗೆ ಹಿತವಚನ ನೀಡಿದ್ದಾರೆ.
ಇತ್ತೀಚಿಗೆ ಗಾಳಿ-ಮಳೆಯ ಸಂದರ್ಭದಲ್ಲಿ ತೀವ್ರವಾದ ಕಡಲು ಕೊರೆತ ಕಾಣಿಸಿಕೊಂಡ ಕಾಪು ಕ್ಷೇತ್ರದ ಲೈಟ್ಹೌಸ್ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಕಾಪು ತಾಲೂಕು ಕಚೇರಿ ಸಭಾಂಗಣದಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿ ಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಕೃತಿ ವಿಕೋಪ ಹಾಗೂ ಅತಿವೃಷ್ಟಿಯಿಂದ ಜನಸಾಮಾನ್ಯರಿಗೆ ಯಾವುದೇ ರೀತಿಯ ಸಮಸ್ಯೆಗಳು ಉಂಟಾದಲ್ಲಿ ಕೂಡಲೇ ಸ್ಪಂದಿಸುವುದರ ಜೊತೆಗೆ ಪರಿಹಾರದ ಮೊತ್ತವನ್ನು ಶೀಘ್ರದಲ್ಲಿಯೇ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಯಾವುದೇ ರೀತಿಯ ಪ್ರಕೃತಿ ವಿಕೋಪದ ವೇಳೆ ಪ್ರಾಣಹಾನಿ, ಮನೆಹಾನಿ ಸೇರಿದಂತೆ ಯಾವುದೇ ರೀತಿಯ ಹಾನಿ ಉಂಟಾದಲ್ಲಿ ಕೆಳಮಟ್ಟದ ಅಧಿಕಾರಿ ಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಅವರಿಗೆ ಅಗತ್ಯದ ನೆರವು ಒದಗಿಸ ಬೇಕು. ಗಾಳಿ-ಮಳೆಯಿಂದ ಯಾವುದೇ ಪ್ರಮಾಣದ ಮನೆ ಹಾನಿ ಸಂಭವಿಸಿದಲ್ಲಿ ತುರ್ತಾಗಿ ಅಧಿಕಾರಿಗಳು ತತ್ಕ್ಷಣ 5,500 ರೂ. ಪರಿಹಾರ ಧನ ವಿತರಿಸುವುದರೊಂದಿಗೆ ಸಂತ್ರಸ್ಥರು ಸ್ವಾಭಿಮಾನದಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಖಾದರ್ ನುಡಿದರು.
ಅಧಿಕಾರಿಗಳು ಸರಕಾದ ಮುಖಗಳಿದ್ದಂತೆ. ಜಿಲ್ಲೆಯ ಎಲ್ಲಾ ಅಧಿಕಾರಿಗಳು ತಳಮಟ್ಟದಲ್ಲಿ ಉತ್ತಮವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಜನಪರ ಕೆಲಸಗಳನ್ನು ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ಮಾಡಿಕೊಡಬೇಕು. ನೀವು ಮಾಡುವ ತಪ್ಪುಗಳಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದ ಅವರು, ಕಾಪು ತಾಲೂಕಿನಲ್ಲಿ ತಹಶೀಲ್ದಾರ್ ಅವರ ಪಿ.ಡಿ ಖಾತೆಯಲ್ಲಿ ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಬಳಿಕ ಕಾಪು ತಾಲೂಕಿನಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಕಾಪು ತಾಲೂಕಿನ ಪ್ರಮುಖ ಬೆಳೆಯಾದ ಭತವನ್ನು ಪ್ರಸ್ತುತ 2020 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದ್ದು, ಮಳೆಯ ಕೊರತೆಯಿಂದ ಬೆಳೆ ಹಾನಿ ಉಂಟಾಗಿದೆ. ಇದೀಗ ಅಲ್ಲಿ ಮರು ಬಿತ್ತನೆ ಮಾಡಲಾಗುತ್ತಿದೆ ಎಂದು ವಿವರಿಸಿದ ಕೃಷಿ ಇಲಾಖೆ ಅಧಿಕಾರಿಗಳಿಗೆ, ಬೆಳೆ ಹಾನಿಯ ಬಗ್ಗೆ ನಿಖರ ಸಮೀಕ್ಷೆ ಕ್ರೂಢೀಕರಿಸಿ ಸರಕಾರಕ್ಕೆ ವರದಿ ಸಲ್ಲಿಸುವಂತೆ ಸಚಿವ ಖಾದರ್ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈ ಬಾರಿ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಿನ ಹಾನಿ ಉಂಟಾಗಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ 19,236 ರೈತರು ತೋಟಗಾರಿಕಾ ಬೆಳೆವಿಮೆ ಮಾಡಿಸಿದ್ದಾರೆ. ಕಳೆದ ಬಾರಿ ಹೋಲಿಸಿದ್ದಲ್ಲಿ ಈ ಬಾರಿ 7690 ಅಧಿಕ ರೈತರು ಬೆಳೆವಿಮೆ ಮಾಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ ಅಧಿಕಾರಿಗೆ,ಇದನ್ನು ಮತ್ತಷ್ಟು ಹೆಚ್ಚಿಸಲು ಹೆಚ್ಚಿನ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.
ಕಾಪು ತಾಲೂಕಿನಲ್ಲಿ ಒಟ್ಟು 200 ಶಾಲೆಗಳ 660 ಕೊಠಡಿಗಳಲ್ಲಿ 91 ಕೊಠಡಿಗಳ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಇದು ಆದಷ್ಟು ಶೀಘ್ರದಲ್ಲಿಯೇ ಆಗಬೇಕು. ಅಪಾಯಕಾರಿ ಕೊಠಡಿಗಳಿದ್ದಲ್ಲಿ ಅಂತಹವು ಗಳನ್ನು ಪಾಠ-ಪ್ರವಚನಗಳಿಗೆ ಬಳಕೆ ಮಾಡಿಕೊಳ್ಳಬಾರದು. ಶಿಥಿಲಾವಸ್ಥೆ ಯಲ್ಲಿರುವ ಕಟ್ಟಡ ಹಾಗೂ ಕಾಂಪೌಂಡ್ಗಳು ಶಾಲೆಯ ಸಮೀಪವಿದ್ದಲ್ಲಿ ವಿದ್ಯಾರ್ಥಿಗಳು ಹತ್ತಿರ ಹೋಗದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಖಾದರ್ ಸೂಚಿಸಿದರು.
ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ, ಮೊಟ್ಟೆ ಹಾಗೂ ಹಾಲು ವಿತರಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಮಕ್ಕಳಿಗೆ ವಿತರಣೆ ಆಗುತ್ತಿರುವ ಆಹಾರಗಳ ಗುಣಮಟ್ಟದ ಕುರಿತು ಪರೀಕ್ಷೆ ಯನ್ನು ಜಿಲ್ಲಾ ಮಟ್ಟದ ಆಹಾರ ಅಂಕಿತ ಅಧಿಕಾರಿಗಳಿಂದ ಕೈಗೊಳ್ಳಲು ಸೂಚನೆ ನೀಡಿದರು.
ಇತ್ತೀಚೆಗೆ ಬಂದ ಹೆಚ್ಚಿನ ಮಳೆಯಿಂದಾಗಿ ಕೆಲವು ರಸ್ತೆಗಳು ಹಾಳಾಗಿ ಸಾರ್ವಜನಿಕರ, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಇವುಗಳ ದುರಸ್ಥಿ ಕಾರ್ಯಗಳನ್ನು ಆದ್ಯತೆಯ ಮೇಲೆ ತುರ್ತಾಗಿ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಪಂಚಾಯತ್ ಇಂಜಿನಿಯರಿಂಗ್, ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರಿಗೆ ಸೂಚನೆ ನೀಡಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಮೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ವಿದ್ಯುತ್ ನಿರಂತರ ಸರಬರಾಜಿಗೆ ಸಮಸ್ಯೆ ಉಂಟಾಗುತ್ತಿವೆ. ಮಳೆ ಗಾಳಿಯಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾದರೆ, ಸುದೀರ್ಘ ಅವಧಿಗೆ ವಿದ್ಯುತ್ ಕಡಿತವಾಗಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಮಳೆಯಿಂದ ತಾಲೂಕಿನ ಕೆಲವು ರಸ್ತೆಗಳು ಹಾಳಾಗಿದ್ದು ಶಾಲಾ ಬಸ್ಗಳ ಸಂಚಾರಕ್ಕೆ ತೊಂದರೆ ಆಗಿ ವಿದ್ಯಾರ್ಥಿಗಳು ಶಾಲೆಗೆ ಹೋಗಲಾಗುತ್ತಿಲ್ಲ ಎಂದು ದೂರಿದರು.
ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.






