ಆಹಾರ ಗುಣಮಟ್ಟ ಪರೀಕ್ಷೆಗೆ ಫೈವ್ಸ್ಟಾರ್ ಹೊಟೇಲ್ ಮೇಲೂ ದಾಳಿ: ಕಾಪುವಿನಲ್ಲಿ ಸಚಿವ ಯು.ಟಿ.ಖಾದರ್

ಕಾಪು, ಆ.7: ಜನರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವುದಕ್ಕಾಗಿ, ಆಹಾರ ಸುರಕ್ಷತೆಯ ದೃಷ್ಟಿಯಿಂದ ಇದೀಗ ನಮ್ಮ ಇಲಾಖೆ ಪಂಚತಾರಾ ಹೊಟೇಲ್ಗಳ ಮೇಲೂ ದಾಳಿ ನಡೆಸಿ ಆಹಾರದ ಗುಣಮಟ್ಟ ಪರೀಕ್ಷೆಗೆ ಮುಂದಾಗಿದೆ. ಆಹಾರ ಸುರಕ್ಷತಾ ದಳ ಇದೀಗ ಬೆಂಗಳೂರಿನಲ್ಲಿ ಪೈವ್ಸ್ಟಾರ್ ಹೊಟೇಲ್ಗಳ ಮೇಲೆ ದಾಳಿ ನಡೆಸುತ್ತಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಕಾಪು ಬೀಚ್ನಲ್ಲಿ ಸಮುದ್ರ ಕೊರೆತದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾ ಡುತಿದ್ದರು. ಮೇಲಿನಿಂದಲೇ ನಮ್ಮ ಕ್ರಮಗಳನ್ನು ಪ್ರಾರಂಭಿಸಿದರೆ, ಕೆಳಗಿರುವ ಹೊಟೇಲ್ಗಳು ಎಚ್ಚೆತ್ತು ಉತ್ತಮ ಆಹಾರವನ್ನು ಜನರಿಗೆ ಒದಗಿಸುತ್ತವೆ. ಆದ್ದರಿಂದ ಯಾವುದೋ ಸಣ್ಣ ಹೊಟೇಲ್ಗೆ ಬದಲು ಪಂಚತಾರಾ ಹೊಟೇಲ್ ಮೂಲಕವೇ ತಪಾಸಣೆ ಪ್ರಾರಂಭಿಸಿದ್ದೇವೆ. ಜನರಿಗೆ ಉತ್ತಮ, ಸುರಕ್ಷಿತ ಆಹಾರ ಸಿಗಬೇಕೆಂಬುದು ತಮ್ಮ ಆಶಯ ಎಂದರು.
ಆರೋಗ್ಯ ಸಚಿವನಾಗಿ, ಎರಡು ಜಿಲ್ಲೆಗಳ ಉಸ್ತುವಾರಿ ಸಚಿವನಾಗಿ ಇಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಗಳು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ಹಾಗೂ ಗ್ರಾಮೀಣ ಪ್ರದೇಶ ಗಳಲ್ಲಿ 20 ನಿಮಿಷಗಳಲ್ಲಿ ಹಾಗೂ ನಗರ ಪ್ರದೇಶದಲ್ಲಿ 15 ನಿಮಿಷದಲ್ಲಿ ಅಂಬುಲೆನ್ಸ್ ಸೇವೆಯನ್ನು ಜನರಿಗೆ ತಲುಪಿಸಬೇಕೆಂಬುದು ತಮ್ಮ ಗುರಿಯಾಗಿದೆ ಎಂದರು.




