ಡೇವಿಡ್ ಶೂಟೌಟ್ ಪ್ರಕರಣ: ಆರೋಪಿಗಳೊಂದಿಗೆ ಸ್ಥಳ ಮಹಜರು

ಉಡುಪಿ, ಆ.11: ಮದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟ್ಔಟ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುವ ಇಬ್ಬರು ಆರೋಪಿಗಳೊಂದಿಗೆ ಪೊಲೀಸರು ಮಂಗಳವಾರ ಸ್ಥಳ ಮಹಜರು ನಡೆಸಿದರು.
ಪ್ರಕರಣದ ಆರೋಪಿಗಳಾದ ಉತ್ತರಖಾಂಡದ ಆಕಾಶ್ ಅಲಿಯಾಸ್ ಅನ್ಮೋಲ್ ರಸ್ತಗಿ ಹಾಗೂ ಬಿಹಾರದ ಜಿಯಾವುಲ್ಲಾ ಅಲಿಯಾಸ್ ದೀಪಕ್ ಎಂಬವರನ್ನು ಹೆಚ್ಚಿನ ತನಿಖೆಗಾಗಿ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಹಿನ್ನೆಲೆಯಲ್ಲಿ ಪೊಲೀಸರು, ಈ ಪ್ರಕ್ರಿಯೆ ನಡೆಸಿದರು.
ಮುದರಂಗಡಿಯಲ್ಲಿ ಶೂಟೌಟ್ ನಡೆದ ಸ್ಥಳ ಮತ್ತು ಆರೋಪಿಗಳು ಸಂಚರಿಸಿದ ಮಾರ್ಗದಲ್ಲಿ ಪೋಲಿಸ್ ತಂಡವು ಸಾಗಿ ಮಾಹಿತಿ ಕಲೆ ಹಾಕಿತು. ಶೂಟೌಟ್ ಮಾಡಿದ ಬಳಿಕ ಆರೋಪಿಗಳು ಪರಾರಿಯಾಗಲು ಬಳಸಿದ ಬೈಕ್ನ್ನು ಏರ್ಮಾಳ್ ಬಳಿ ಬಿಟ್ಟು ಬಸ್ಸಿನಲ್ಲಿ ತೆರಳಿದ್ದರು. ಬೈಕ್ ಬಿಟ್ಟು ಹೋಗಿ ರುವ ಎರ್ಮಾಳು ಮಸೀದಿಯ ಮುಂಭಾಗ ಕೂಡ ಪೋಲಿಸ್ ತಂಡವು ಆರೋಪಿಗಳೊಂದಿಗೆ ಆಗಮಿಸಿ ಸ್ಥಳ ಮಹಜರು ನಡೆಸಿತು. ಈ ಸಂದರ್ಭದಲ್ಲಿ ಶಿರ್ವ ಠಾಣಾಧಿಕಾರಿಗಳು ಮತ್ತು ಉಡುಪಿ ಪೋಲಿಸರ ತಂಡ ಹಾಜರಿತ್ತು.




