ಸಾಹಿತಿ ಸುಲೋಚನಾ ಪಿ.ಕೆ. ಅವರ ‘ದಧೂಟಿಬನ’ ಕಾದಂಬರಿಗೆ ಪಣಿಯಾಡಿ ಪ್ರಶಸ್ತಿ

ಉಡುಪಿ: ಉಡುಪಿ ತುಳುಕೂಟದ ವತಿಯಿಂದ ನೀಡಲಾಗುವ ಎಸ್.ಯು.ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಪುತ್ತೂರಿನ ಸಾಹಿತಿ ಸುಲೋಚನಾ ಪಿ.ಕೆ. ಅವರ ದಧೂಟಿಬನ ಕಾದಂಬರಿ ಆಯ್ಕೆಯಾಗಿದೆ.
ಉಡುಪಿ ತುಳುಕೂಟವು ಕಳೆದ 31ವರ್ಷಗಳಿಂದ ತುಳು ಚಳವಳಿಯ ಪ್ರವರ್ತಕರಾಗಿದ್ದ ದಿ.ಎಸ್.ಯು.ಪಣಿಯಾಡಿ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಮುದ್ರಣಗೊಳ್ಳದ ತುಳು ಕಾದಂಬರಿಕಾರರಿಗೆ ನೀಡುತ್ತ ಬಂದಿದೆ. ಪಣಿಯಾಡಿ ಕಾದಂಬರಿ ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿಪತ್ರ, ಫಲಕಗಳನ್ನು ಒಳಗೊಂಡಿದೆ.
ಸಾಹಿತಿ ಸುಲೋಚನಾ ಪಿ.ಕೆ. ವೃತ್ತಿಯಲ್ಲಿ ಪುತ್ತೂರು ತಾಲೂಕು ಉಪತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸತ್ಯದರ್ಶನ ಕೃತಿಗೆ ಜಿ.ಪಿ.ರಾಜರತ್ನಂ ದತ್ತಿ ಪ್ರಶಸ್ತಿ ದೊರೆತಿದೆ. ಅಮ್ಮನ ಮಾತ್ ಭಸ್ಮ ಕಟ್ಟಿದ ತಗಡ್ನ ತಾಯತಾತ್ ಕೃತಿಗೆ ಅರೆಭಾಸೆ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಕೊಡುವ ಮೊದಲು, ಸೊನ್ನೆ ಕವನಸಂಕಲನ, ಶ್ರೀಸಾಯಿ ಶತನಮನ ಭಜನಾಮೃತ, ಮೂಗಿಯ ಮನದೊಳು ಕಾದಂಬರಿ, ಸಖಿವಚನ ಕೃತಿಗಳು ಪ್ರಕಟನೆ ಗೊಂಡಿವೆ.
ಈ ಕಾದಂಬರಿ ಸ್ಪರ್ಧೆಯ ತೀರ್ಪುಗಾರರಾಗಿ ಸಾಹಿತಿಗಳಾದ ಡಾ.ವಿ.ಕೆ.ಯಾದವ್, ವಾಸಂತಿ ಅಂಬಲಪಾಡಿ, ಪುಷ್ಪ ಪ್ರಸಾದ್ ಅವರು ಸಹಕರಿಸಿದ್ದರು. ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ ತಿಂಗಳಲ್ಲಿ ಉಡುಪಿ ಯಲ್ಲಿ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ, ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕ ಪ್ರಕಾಶ ಸುವರ್ಣ ಕಟಪಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.




