ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಎಸ್ಟಿ ಮೋರ್ಚಾ ಮನವಿ

ಉಡುಪಿ, ಆ.18: ವಾಲ್ಮಿಕಿ ನಿಗಮದ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಹಣವನ್ನು ದುರುಪಯೋಗ ಮಾಡಿದ್ದ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಉಡುಪಿ ಜಿಲ್ಲಾ ಎಸ್ಟಿ ಮೋರ್ಚಾ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮೂಲಕ ಮಂಗಳವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಈ ವಿಚಾರದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ನಿಗಮದಲ್ಲಿ ಹಗರಣವಾಗಿರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಬಿ.ನಾಗೇಂದ್ರ ವಿರುದ್ಧ ಸಿಬಿಐ ಮೂರು ದೋಷಾರೋಪ ಪಟ್ಟಿ ಸಲ್ಲಿಸಿದೆ. ಜಾರಿ ನಿರ್ದೇಶನಾಲಯ ಕೂಡ ಒಂದು ಚಾರ್ಜ್ಶೀಟ್ ಹಾಕಿದೆ. ಈ ವಿಚಾರಕ್ಕೆ ಬಿ.ನಾಗೇಂದ್ರ ಜೈಲು ಸೇರಿದ್ದು, ನಂತರ ಜಾಮೀನನ ಮೇಲೆ ಬಿಡುಗಡೆಗೊಂಡಿದ್ದಾರೆ. ಇದೀಗ ನೂತನ ಸಚಿವ ಸಂಪುಟದಲ್ಲಿ ಅವರನ್ನು ಸಚಿವರ ನ್ನಾಗಿ ಮಾಡಿರುವುದು ನಮ್ಮ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ.
ಕಳೆದ ಮೂರು ವರ್ಷಗಳಿಂದ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ವಾಲ್ಮೀಕಿ ನಿಗಮದಿಂದ ಉಡುಪಿ ಜಿಲ್ಲೆಯ ಪರಿಶಿಷ್ಟ ಪಂಗಡದವರ ಅಭಿವೃದ್ಫಿಗೆ ಒಂದು ನಯಪೈಸೆ ಬಿಡುಗಡೆ ಮಾಡದೆ ಇರುವುದು ಕೂಡ ಅನ್ಯಾಯವಾಗಿದೆ. ಆದ್ದರಿಂದ ಜಿಲ್ಲೆಗೆ ನಿಗಮದ ಮೂಲಕ ಅನುದಾನ ಬಿಡುಗಡೆಯಾಗಬೇಕು. ಅಲ್ಲದೆ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ ರಾಜೀನಾಮೆ ಪಡೆಯಬೇಕು ಎಂದು ನಿಯೋಗ ಮುಖ್ಯಮಂತ್ರಿಯನ್ನು ಆಗ್ರಹಿಸಿದೆ.
ನಿಯೋಗದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ, ಮುಖಂಡರಾದ ಶ್ರೀಕಾಂತ ನಾಯಕ್, ಮಧುಕರ ಮುದ್ರಾಡಿ, ಸತ್ಯಾನಂದ ನಾಯಕ್, ಉಮೇಶ್ ಎ.ನಾಯ್ಕ್ ಚೇರ್ಕಾಡಿ, ಉಡುಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಬುಜಂಗ ನಾಯ್ಕ್ ಮಣಿಪಾಲ್, ಉಪಾಧ್ಯಕ್ಷ ರಮೇಶ್ ನಾಯ್ಕ್ ಕೊಡ್ಲಾಡಿ, ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ್ ನಾಯ್ಕ್ ನೂಜಿನಬೈಲು ಮತ್ತು ಸುಭಾಸ್ ನಾಯ್ಕ್ ಪೆಡೂರ್ರ, ನಗರ ಎಸ್ಟಿ ಮೋರ್ಚ ಅಧ್ಯಕ್ಷೆ ಸುಮಲತ ನಾಯ್ಕ್, ಉಪಾದ್ಯಕ್ಷರು ನವೀನ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಸುಗುಣ ನಾಯ್ಕ್ ಉಪಸ್ಥಿತರಿದ್ದರು.






