ಅರ್ಬನ್ ಕೋಆಪರೇಟಿವ್ ಬ್ಯಾಂಕ್ಗಳಿಗಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ

ಉಡುಪಿ, ಆ.24: ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ವತಿಯಿಂದ ರಾಜ್ಯದ ಎಲ್ಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರಿಗೆ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉಡುಪಿಯ ಲೀಕೋ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿರ್ದೇಶಕ ಮತ್ತು ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಅಧ್ಯಕ್ಷ ಎಚ್.ಜಯಪ್ರಕಾಶ್ ಕೆದ್ಲಾಯ ಮಾತನಾಡಿ, ಪಟ್ಟಣ ಸಹಕಾರಿ ಬ್ಯಾಂಕುಗಳು ಸಾಂಪ್ರದಾಯಿಕ ಹಳೆ ಬ್ಯಾಂಕಿಂಗ್ ವ್ಯವಸ್ಥೆಯಿಂದ ನೂತನವಾಗಿ ವೃತ್ತಿಪರ ನಿರ್ವಹಣೆಗೆ ಒಳಪಟ್ಟು ನೂತನ ವ್ಯವಸ್ಥೆಗೆ ಹೊಂದಿಕೊಂಡು ಸದಸ್ಯರ ವಿಶ್ವಾಸ ಠೇವಣಿದಾರರ ರಕ್ಷಣೆಯೊಂದಿಗೆ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಕ್ಕೆ ಒಳಪಟ್ಟು ಉತ್ತಮ ಆಡಳಿತವನ್ನು ನೀಡುವುದು ಯಶಸ್ವಿ ಸಹಕಾರಿ ಬ್ಯಾಂಕಿಗೆ ಅಡಿಪಾಯವಾಗಿರುತ್ತದೆ ಎಂದು ತಿಳಿಸಿದರು.
ಮಹಾಮಂಡಳದ ನಿರ್ದೇಶಕ ಬನಶಂಕರಿ ಎಚ್.ಆರ್., ಶಿವಕುಮಾರ್ ಗುಂಡಗಿ, ಅಂಬೋರೆ ಪಿ.ಸುರೇಶ್ ಮತ್ತು ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ದಿನಕರ ಶೆಟ್ಟಿ, ನಾರಾಯಣಗುರು ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಹರಿಶ್ಚಂದ ಅಮೀನ್, ಲೀಕೋ ಬ್ಯಾಂಕಿನ ಅಧ್ಯಕ್ಷ ಕೃಷ್ಣ ಕೆ., ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನ ವೃತ್ತಿಪರ ನಿರ್ದೇಶಕ ಮಂಜುನಾಥ ಎಸ್.ಕೆ. ಉಪಸ್ಥಿತರಿದ್ದರು.
ಮಹಾಮಂಡಳದ ಡೆಪ್ಯೂಟಿ ಸಿಇಓ ಅನಿಲ್ ಹೆಚ್ ಕೆರೆಸೂರ್ ಸ್ವಾಗತಿಸಿ ಲಿಕೋ ಬ್ಯಾಂಕಿನ ಕಾರ್ಯನಿರ್ವಹಣಾಧಿ ಕಾರಿ ಶಶಿಕಲಾ ಪುರುಷೋತ್ತಮ ವಂದಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಹಾಮಂಡಳದ ಗೌರವ ಸಲಹೆಗಾರ ರಾದ ಸುಧಾಕರ್ ಭಟ್ ಹಾಗೂ ಡಾ.ಗುರುಸ್ವಾಮಿ ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ತರಬೇತಿ ನೀಡಿದರು.






