ಆಹಾರ ಉದ್ಯಮ ಇಂದು ವೃತ್ತಿಪರ: ಕೆ.ಪ್ರಕಾಶ್ ರಾವ್

ಉಡುಪಿ, ಆ.31: ಆಹಾರ ಉದ್ಯಮವು ಇಂದು ವೃತ್ತಿಪರವಾಗುತ್ತಿದ್ದು ಆನ್ಲೈನ್ ಖರೀದಿಯಲ್ಲಿ ಝೆನ್ಜಿ ಸಮುದಾಯ ದರ, ಶ್ರೇಯಾಂಕ ಹಾಗೂ ವಿಮರ್ಶೆಗೆ ಆದ್ಯತೆ ನೀಡುತ್ತಿದೆ ಎಂದು ಮಂಗಳೂರಿನ ಕಲ್ಬಾವಿ ಕನ್ಸೂಮರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಇದರ ವ್ಯವಸ್ಥಾಪಕ ನಿರ್ದೇಶಕ ಕಲ್ಬಾವಿ ಪ್ರಕಾಶ್ ರಾವ್ ತಿಳಿಸಿದ್ದಾರೆ.
ಕಡಿಯಾಳಿಯ ಹೋಟೆಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಫುಡ್ ಪ್ಯಾಕೇಜಿಂಗ್ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಆಹಾರ ಉದ್ಯಮದ ಮಾರುಕಟ್ಟೆ ಮಾತ್ರವಲ್ಲ ಎಲ್ಲಾ ರಂಗದಲ್ಲೂ ಅತಿ ವೇಗದ ಪರಿವರ್ತನೆಗಳಾಗುತ್ತಿವೆ ಎಂದು ಅವರು ಹೇಳಿದರು.
ಉತ್ಪನ್ನಕ್ಕೆ ಕೊಡುವ ಆದ್ಯತೆಯನ್ನು ಪ್ಯಾಕೇಜಿಂಗ್ಗೆ ಯಾಕೆ ಕೊಡಬೇಕು ಎನ್ನುವ ನೆಲೆಯಲ್ಲಿ ಹೂಡಿಕೆ ಹಾಗೂ ಖರ್ಚಿನ ಪ್ರಶ್ನೆ ಎದುರಾಗುತ್ತಿದ್ದು ಆನ್ಲೈನ್ ಹೊರತಾದ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಪ್ಯಾಕೇಜಿಂಗ್ ಅತಿ ಮುಖ್ಯವಾಗುತ್ತದೆ. ಉತ್ಪನ್ನದ ಬಾಳ್ವಿಕೆ ಉತ್ತಮ ಪ್ಯಾಕೇಜಿಂಗ್ನಿಂದ ಸಾಧ್ಯ. ಉತ್ತಮ ಉತ್ಪನ್ನ ಕೆಟ್ಟ ಪ್ಯಾಕೇಜಿಂಗ್ ನಿಂದಾಗಿ ಬೇಡಿಕೆ ಕಳೆದುಕೊಳ್ಳುವಂತಾಗಬಾರದು. ಉತ್ಪನ್ನಗಳಿಗೆ ಬ್ರ್ಯಾಂಡಿಂಗ್ ಅತ್ಯಗತ್ಯ ಎಂದು ಪ್ರಕಾಶ್ ರಾವ್ ಹೇಳಿದರು.
ಉಡುಪಿ ಜಿಲ್ಲಾ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ನ ಮುಖ್ಯ ಪ್ರಬಂಧಕ ಹರೀಶ್ ಜಿ. ಮಾತನಾಡಿ, ಎಂಎಸ್ಎಂಇಗಳಿಗೆ ಉಡುಪಿ ಜಿಲ್ಲೆಯಲ್ಲಿ 4,000ಕೋಟಿ ರೂ. ಸಾಲ/ನೆರವು ಈವರೆಗೆ ನೀಡಲಾಗಿದೆ ಎಂದರು.
ಮಂಗಳೂರಿನ ಎಂಎಸ್ಎಂಇ ಅಭಿವೃದ್ಧಿ ಮತ್ತು ನೆರವು ಕೇಂದ್ರ ಶಾಖೆಯ ಸಹಾಯಕ ನಿರ್ದೇಶಕ ಸುಂದರ ಶೇರಿರ್ಗಾ ಎಂ. ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಫುಡ್ ಪಾರ್ಕ್ ವ್ಯವಸ್ಥಾಪಕ ಪಾಲುದಾರ ಜಾನ್ ಆರ್. ಡಿಸಿಲ್ವ, ಉಡುಪಿ ಜಿಲ್ಲಾ ಬೇಕರಿ ಮತ್ತು ಆಹಾರ ಉತ್ಪನ್ನಗಳ ಉತ್ಪಾದಕರ ಮತ್ತು ಮಾರಾಟಗಾರ ಸಂಘಟನೆ ಅಧ್ಯಕ್ಷ ವಿಶ್ವನಾಥ್ ಕುಲಾಲ ಉಪಸ್ಥಿತರಿದ್ದರು.
ಸುಮನಾ ಎಸ್.ರಾಜು ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಬೇಕರಿ ಮತ್ತು ಆಹಾರ ಉತ್ಪನ್ನ ಉತ್ಪಾದಕರು ಮತ್ತು ಮಾರಾಟಗಾರ ಸಂಘಟನೆ ಕಾನೂನು ಸಲಹೆಗಾರ ಪಿ.ಎಸ್. ಶ್ರೀಧರ್ ವಂದಿಸಿದರು.






