ಉಡುಪಿ| ಪಶ್ಚಿಮಘಟ್ಟದ ಅಪಾಯದಲ್ಲಿರುವ ಉಭಯಚರಗಳ ಸಂರಕ್ಷಣೆಗೆ 1 ಕೋಟಿ ರೂ. ಅನುದಾನ

ಉಡುಪಿ, ಆ.11: ಪಶ್ಚಿಮ ಘಟ್ಟದಲ್ಲಿ ಅಳಿವಿನಂಚಿನಲ್ಲಿರುವ ಉಭಯ ಚರಗಳನ್ನು ಸ್ಥಳೀಯ ಸಮುದಾಯದ ಸಹಭಾಗಿತ್ವದೊಂದಿಗೆ ಸಂರಕ್ಷಿಸುವ ನಿಟ್ಟಿನಲ್ಲಿ ದ ಹ್ಯಾಬಿಟಟ್ಸ್ ಟ್ರಸ್ಟ್ನಿಂದ ‘ಹ್ಯಾಬಿಟಟ್ಸ್ ಟ್ರಸ್ಟ್ ಕನ್ರ್ಸವೇಶನ್ ಗ್ರ್ಯಾಂಟ್-2026’ ಒಂದು ಕೋಟಿ ರೂ. ಆರ್ಥಿಕ ನೆರವನ್ನು ಬೆಂಗಳೂರಿನ ಸೃಷ್ಠಿ ಮಣಿಪಾಲ ಇನ್ಸಿಟ್ಯೂಟ್ಗೆ ಮಂಜೂರು ಮಾಡಿದೆ.
‘ಕ್ರೋಕ್- ಕೋ ಎಕ್ಸಿಸ್ಟ್- ಕನ್ಸರ್ವ್’ ಪಶ್ಚಿಮ ಘಟ್ಟದಲ್ಲಿ ಸಮು ದಾಯದ ಸಹಭಾಗಿತ್ವದೊಂದಿಗೆ ಅಪಾಯದಲ್ಲಿರುವ ಉಭಯಚರಗಳ ಸಂರಕ್ಷಣೆ’ ಎಂಬ ಹೆಸರಿನ ಮೂರು ವರ್ಷಗಳ ಈ ಯೋಜನೆಯು ಉಭಯಚರಗಳ ಕುರಿತ ಸಂಶೋಧನೆ ಮತ್ತು ಸಂರಕ್ಷಣಾ ಕಾರ್ಯಗಳಿಗೆ ಹೆಚ್ಟಿನ ಒತ್ತು ಕೊಡುವ ಉದ್ದೇಶವನ್ನು ಹೊಂದಿದೆ.
ಅಪಾಯದಲ್ಲಿರುವ ಉಭಯಚರಗಳ ಸಂರಕ್ಷಣೆಗೆ ಅನುದಾನ ಒದಗಿಸು ವಂತೆ ಸೃಷ್ಠಿ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ಕಪ್ಪೆ ಸಂಶೋಧಕ ಡಾ.ಗುರುರಾಜ್ ಕೆ.ವಿ. ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವ ಹಿಸುತ್ತಿರುವ ದ ಹ್ಯಾಬಿಟಟ್ಸ್ ಟ್ರಸ್ಟ್ಗೆ ಪ್ರಸ್ತಾಪವನ್ನು ಸಲ್ಲಿಸಿದ್ದರು. ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪರಿಶೀಲನೆ ನಡೆಸಿ ಸೃಷ್ಠಿ ಸಂಸ್ಥೆಯನ್ನು ಆಯ್ಕೆ ಮಾಡಿ, ಈ ಅನುದಾನ ಮಂಜೂರು ಮಾಡಲಾಗಿದೆ ಎಂದು ಡಾ.ಗುರುರಾಜ್ ಕೆ.ವಿ. ತಿಳಿಸಿದ್ದಾರೆ.
ಅಳಿವಿನಂಚಿನಲ್ಲಿ ಪ್ರಬೇಧಗಳು: ವಿಶ್ವದಾದ್ಯಂತ ಉಭಯಚರಗಳು ಅತ್ಯಂತ ಅಪಾಯದಲ್ಲಿರುವ ಕಶೇರುಕ ಜೀವಿಗಳ ಗುಂಪುಗಳಲ್ಲಿ ಒಂದಾಗಿವೆ. ಪ್ರತಿ ಐದು ಉಭಯಚರ ಪ್ರಭೇದಗಳಲ್ಲಿ ಎರಡು ಅಳಿವಿನ ಅಪಾಯ ಎದುರಿಸುತ್ತಿವೆ ಎಂದು ವರದಿ ತಿಳಿಸಿದೆ.
ವಿಶ್ವದಲ್ಲಿ 9,000ಕ್ಕೂ ಅಧಿಕ ಉಭಯಚರ ಪ್ರಭೇದಗಳಿದ್ದು, ಅವುಗಳಲ್ಲಿ ಸುಮಾರು ಶೇ.5ರಷ್ಟು ಭಾರತದಲ್ಲಿವೆ. ಭಾರತದಲ್ಲಿ ಗುರುತಿಸಲಾಗಿರುವ ಸುಮಾರು 482 ಉಭಯಚರ ಪ್ರಭೇದಗಳ ಪೈಕಿ ಸುಮಾರು 200 ಪ್ರಭೇದಗಳು ಅಳಿವಿನ ಅಂಚಿನಲ್ಲಿದೆ. 2000ರಿಂದ ಭಾರತದಲ್ಲಿ 268 ಹೊಸ ಉಭಯಚರ ಪ್ರಭೇದಗಳನ್ನು ಗುರುತಿಸಲಾಗಿದೆ. ಅಂದರೆ ಪ್ರತಿ ವರ್ಷ ಸರಾಸರಿ 10 ಹೊಸ ಪ್ರಭೇದಗಳು ಪತ್ತೆಯಾಗಿವೆ.
ಪಶ್ಚಿಮಘಟ್ಟದಲ್ಲಿ ಅಧ್ಯಯನ: ಈ ಯೋಜನೆಯು ಪಶ್ಚಿಮ ಘಟ್ಟದ ಉಭಯಚರ ಪ್ರಭೇದಗಳ ಸಮೃದ್ಧಿ ಹೊಂದಿರುವ ಮಾನವ ಪ್ರಭಾವಿತ ಹಾಗೂ ಸಂರಕ್ಷಿತ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರಲಿದೆ.
ಭೂಬಳಕೆ ಮತ್ತು ಹವಾಮಾನ ಬದಲಾವಣೆಗಳು ಉಭಯಚರಗಳ ಮೇಲೆ ಬೀರುವ ಪರಿಣಾಮಗಳನ್ನು ಅಧ್ಯಯನ ಮಾಡುವುದರ ಜೊತೆಗೆ, ಅಳಿವಿನಂಚಿನಲ್ಲಿರುವ ಹಾಗೂ ಸಾಮಾನ್ಯ ಉಭಯಚರ ಪ್ರಭೇದಗಳ ಸಂರಕ್ಷಣೆಗೆ ಸಮುದಾಯ ಆಧಾರಿತ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತದೆ.
ಸ್ಥಳೀಯ ಸಮುದಾಯಗಳಲ್ಲಿ ಉಭಯಚರಗಳ ಮಹತ್ವ ಹಾಗೂ ಅವು ಪರಿಸರ ವ್ಯವಸ್ಥೆಗೆ ನೀಡುವ ಕೊಡುಗೆ ಕುರಿತು ಅರಿವು ಮೂಡಿಸಲು ಪ್ರಾಯೋಗಿಕ ಕಾರ್ಯಾಗಾರಗಳು ಮತ್ತು ಸಮುದಾಯ ಪಾಲ್ಗೊಳ್ಳುವಿಕೆ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುತ್ತದೆ.
ಸ್ಥಳೀಯ ಸಮುದಾಯಗಳ ಸಹಯೋಗದೊಂದಿಗೆ ಖಾಸಗಿ ಕೃಷಿ-ಅರಣ್ಯ ಪ್ರದೇಶಗಳಲ್ಲಿ ‘ಬ್ಯಾಟ್ರಾಚರಿಯಮ್ಸ್’ ಸ್ಥಾಪಿಸಿ ಉಭಯಚರಗಳ ಸಂರಕ್ಷಣೆಗೆ ಸೂಕ್ತ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಕೂಡ ಈ ಯೋಜನೆ ಹೊಂದಿದೆ ಎಂದು ಡಾ.ಗುರುರಾಜ್ ಕೆ.ವಿ. ಮಾಹಿತಿ ನೀಡಿದ್ದಾರೆ.
ವಿವಿಧ ಪ್ರದೇಶಗಳ ಸಂರಕ್ಷಣೆ: ಈ ಯೋಜನೆಯಡಿ 100 ಚದರ ಕಿ.ಮೀ.ಗೂ ಅಧಿಕ ಖಾಸಗಿ ಸಂರಕ್ಷಣಾ ಪ್ರದೇಶಗಳು ಹಾಗೂ 10 ಅಳಿವಿನಂಚಿನ ಉಭಯಚರ ಪ್ರಭೇದಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವ ಗುರಿ ಹೊಂದಲಾಗಿದೆ.
ಉಭಯಚರಗಳ ಸಂಖ್ಯೆ, ವಾಸಸ್ಥಳ ಮತ್ತು ಪರಿಸರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಮೊಬೈಲ್ ಅಪ್ಲಿಕೇಶನ್ಗಳು, ಪಾಸಿವ್ ಅಕೌಂಸ್ಟಿಕ್ ಮನಿಟರಿಂಗ್(ಪಿಎಎಂ) ಸಾಧನಗಳು ಹಾಗೂ ನೀರಿನ ವಿಶ್ಲೇಷಣಾ ಕಿಟ್ಗಳಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ.
ವೈಜ್ಞಾನಿಕ ಸಂಶೋಧನೆ, ತಂತ್ರಜ್ಞಾನ ಮತ್ತು ಸ್ಥಳೀಯ ಸಮುದಾಯದ ಸಕ್ರಿಯ ಭಾಗವಹಿಸುವಿಕೆಯ ಮೂಲಕ ಮಾನವ ಚಟುವಟಿಕೆ ಹೆಚ್ಚಿರುವ ಪ್ರದೇಶಗಳಲ್ಲಿಯೂ ಉಭಯಚರಗಳ ಸಂರಕ್ಷಣೆಯನ್ನು ಪರಿಣಾಮಕಾರಿ ಯಾಗಿ ಕೈಗೊಳ್ಳಬಹುದು ಎಂಬುದನ್ನು ತೋರಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯು 2026ರ ಕನ್ಸರ್ವೇಶನ್ ಗ್ರ್ಯಾಂಟ್ಗೆ ಸಂಬಂಧಿಸಿದ ಮಾಧ್ಯಮ ವರದಿಗಳ ಭಾಗವಾಗಿ ಇಕಾನಮಿಕ್ ಟೈಮ್ಸ್ನಲ್ಲಿ ಪ್ರಕಟಗೊಂಡಿದೆ ಎಂದು ಡಾ.ಗುರುರಾಜ್ ಕೆ.ವಿ. ತಿಳಿಸಿದ್ದಾರೆ.






