ಕಳೆದ 10 ದಿನಗಳಲ್ಲಿ ಎಲ್ಲೂ ಹಂದಿ ಸತ್ತಿಲ್ಲ: ಡಾ.ಅರುಣ್ ಕುಮಾರ್ ಹೆಗ್ಡೆ

ಕುಂದಾಪುರ, ಆ.9: ಕಳೆದ 10 ದಿನಗಳಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಎಲ್ಲಿಯೂ ಯಾವುದೇ ಕಾಡು ಹಂದಿ ಅಥವಾ ಸಾಕು ಹಂದಿಗಳು ಸತ್ತಿರುವ ಬಗ್ಗೆ ವರದಿಯಾಗಿಲ್ಲ. ಕಾಡು ಹಂದಿ ಹಾಗೂ ಸಾಕು ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಬಂದಿರುವುದು ಈಗಾಗಲೇ ದೃಢಪಟ್ಟಿದೆ.
ಜು.28ರಂದು ಕಾಲ್ತೋಡಿನಲ್ಲಿ ಕಾಡು ಹಂದಿಯೊಂದು ಮೃತಪಟ್ಟಿರುವುದು ಪತ್ತೆಯಾಗಿದೆ. ಅದೇ ಕೊನೆಯಾಗಿದ್ದು, ಅನಂತರ ಎಲ್ಲಿಯೂ ಕಾಡು ಹಂದಿಗಳು ಸತ್ತಿರುವುದು ಕಂಡು ಬಂದಿಲ್ಲ. ಇನ್ನು ಸಾಕು ಹಂದಿಗಳಲ್ಲಿ ಸೇನಾಪುರದ ಹಂದಿ ಸಾಕಾಣಿಕೆ ಫಾರ್ಮ್ವೊಂದರಲ್ಲಿ ಮಾತ್ರ ಈ ಆಫ್ರಿಕನ್ ಹಂದಿಜ್ವರ ಕಂಡು ಬಂದಿದೆ. ಅಲ್ಲಿದ್ದ ಎಲ್ಲ 18 ಹಂದಿಗಳು ಕೂಡ ಈಗಗಾಲೇ ಸಾವನ್ನಪ್ಪಿವೆ.
ಕಳೆದ ಕೆಲ ದಿನಗಳಿಂದ ಕುಂದಾಪುರ, ಬೈಂದೂರು ಭಾಗದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ಉತ್ತಮ ಮಳೆಯಾಗಿದೆ. ಇದು ಕೂಡ ವೈರಸ್ ಹರಡದಂತೆ ತಡೆಯಲು ಸಹಕಾರಿಯಾಗಿರಬಹುದು. ಆಗಾಗ್ಗೆ ಮಳೆ, ಬಿಸಿಲು ಇದ್ದರೆ, ವೈರಾಣು ಹರಡುವಿಕೆ ಇರುತ್ತದೆ. ಆದುರಿಂದ ಬಹುಶಃ ಕಳೆದ ಕೆಲ ದಿನಗಳಿಂದ ಹಂದಿಗಳ ಸಾವಿನ ಪ್ರಕರಣ ಕಂಡು ಬಂದಿಲ್ಲ ಎಂದು ಪಶು ಪಾಲನಾ ಇಲಾಖೆಯ ಕುಂದಾಪುರ ತಾಲೂಕು ಸಹಾಯಕ ನಿರ್ದೇಶಕ ಡಾ.ಅರುಣ್ ಕುಮಾರ್ ಹೆಗ್ಡೆ ಮಾಹಿತಿ ನೀಡಿದ್ದಾರೆ.
ಸಾಕು ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಕಂಡು ಬಂದ ಸೇನಾಪುರ ಗ್ರಾಮದ ಹಂದಿ ಸಾಕಾಣಿಕೆ ಫಾರ್ಮ್ಗೆ ಗುಜ್ಜಾಡಿ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅರುಣ್ ಕೆ.ಪಿ. ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮುಂದಿನ ಆದೇಶದವರೆಗೆ ಹಂದಿ ಸಾಕಾಣಿಕೆ ಪುನಾರಾರಂಭ ಮಾಡದಂತೆ ಕೂಡ ಆ ಫಾರ್ಮ್ ನವರಿಗೆ ಸೂಚನೆ ನೀಡಿದ್ದಾರೆ.






