ಕೃಷಿ ಭೂಮಿ 11-ಇ ನಕ್ಷೆ ವಿಂಗಡನೆ, ಮಳೆ ಪರಿಹಾರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಮನವಿ

ಉಡುಪಿ, ಜು.31: ಕೃಷಿ ಭೂಮಿಯನ್ನು 11- ಇ ನಕ್ಷೆ ಮೂಲಕ ವಿಂಗಡನೆಗೆ ಅವಕಾಶ, ಮಳೆಹಾನಿ ಪರಿಹಾರ ಹಾಗೂ ವಸತಿ ಯೋಜನೆಯಡಿ ಮಂಜೂರಾದ ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಬುಧವಾರ ಜಿಲ್ಲೆಗೆ ಭೇಟಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲೆ ಭೌಗೋಳಿಕವಾಗಿ ಇತರ ಜಿಲ್ಲೆಗಳಿಗಿಂತ ವಿಭಿನ್ನವಾಗಿದ್ದು, ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರಿಂದ ಕೂಡಿದ ಭೂ ಪ್ರದೇಶವಾಗಿದೆ. ಹಿಂದಿನಿಂದಲೂ ಕಂದಾಯ ನಿಯಮಗಳನ್ನು ರೂಪಿ ಸುವಾಗ ಉಡುಪಿ ಜಿಲ್ಲೆಯೂ ಸೇರಿದಂತೆ ಅವಿಭಜಿತ ದ.ಕ ಜಿಲ್ಲೆಗೆ ರಿಯಾಯಿತಿ ನೀಡಿಕೊಂಡು ಬರಲಾ ಗುತ್ತಿದೆ ಎಂದವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಸರಕಾರದ ಆದೇಶದಂತೆ ಮನೆ ನಿರ್ಮಾಣಕ್ಕೆ ಭೂ ಪರಿವರ್ತನೆ ಪೂರ್ವದಲ್ಲಿ ಕೃಷಿ ಭೂಮಿ ಯನ್ನು ವಿಂಗಡಿಸಲು ಕನಿಷ್ಠ 50 ಸೆನ್ಸ್ ಮಿತಿ ನಿಗದಿ ಪಡಿಸಲಾಗಿತ್ತು. ಜಿಲ್ಲೆಯಲ್ಲಿ 50 ಸೆನ್ಸ್ಗಿಂತ ಕಡಿಮೆ ಜಾಗ ಹೊಂದಿರುವ ಸಾವಿರಾರು ರೈತರಿದ್ದು, ಹಲವು ಕಾರಣಗಳಿಗಾಗಿ 11-ಇ ನಕ್ಷೆ ಆಧಾರದಲ್ಲಿ ಜಾಗ ವಿಂಗಡನೆಯು ಅನಿವಾರ್ಯವಾಗಿರುತ್ತದೆ ಎಂದವರು ಮನವಿಯಲ್ಲಿ ವಿವರಿಸಿದ್ದಾರೆ.
ನಗರ ವ್ಯಾಪ್ತಿಯೂ ಸೇರಿದಂತೆ ಗ್ರಾಮೀಣ ಭಾಗದ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಕುಟುಂಬಗಳು ನಿವೇಶನಕ್ಕಾಗಿ ಗ್ರಾಮ ಪಂಚಾಯತ್ಗೆ ಅರ್ಜಿ ಸಲ್ಲಿಸಿದ್ದು, ಸರಕಾರಿ ಜಾಗದ ಲಭ್ಯತೆ ಯಿಲ್ಲದೆ ಹಲವಾರು ವರ್ಷಗಳಿಂದ ಸ್ವಂತ ನಿವೇಶನದ ನಿರೀಕ್ಷೆಯಲ್ಲಿದ್ದಾರೆ. ಈಗಿನ ಆದೇಶದಿಂದ ಕಡಿಮೆ ದರದಲ್ಲಿ ಸಣ್ಣ ಜಾಗ ಖರೀದಿಸಿ ಮನೆ ನಿರ್ಮಿಸುವ ಉದ್ದೇಶ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಆದ್ದರಿಂದ ಉಡುಪಿ ಜಿಲ್ಲೆಗೆ ಮಾತ್ರ ಅನ್ವಯಿಸಿ ಆದೇಶಿಸಲಾಗಿರುವ ಸದ್ರಿ ನಿಯಮವನ್ನು ಹಿಂಪಡೆದು ಹಿಂದಿ ನಂತೆ 50 ಸೆನ್ಸ್ ಮಿತಿಗೆ ಬದಲಾಗಿ 7.5 ಸೆಂಟ್ಸ್ ಮಿತಿಗೆ ಮರು ಆದೇಶ ಹೊರಡಿಸುವಂತೆ ಶಾಸಕರು ಸಚಿವರಿಗೆ ಮನವಿ ಮಾಡಿದ್ದಾರೆ.
ಅನುದಾನ ಮಂಜೂರಿಗೆ ಮನವಿ: ಉಡುಪಿ ತಾಲೂಕಿನಲ್ಲಿ ನೆರೆ ಸಂತ್ರಸ್ತರ ಪುರ್ನವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ರಾಜೀವ ಗಾಂಧಿ ವಸತಿ ನಿಗಮದಿಂದ ಅನುದಾನ ಮಂಜೂರಾಗಿ ವರ್ಷಗಳೇ ಕಳೆದರು, ಈವರೆಗೆ ಮಂಜೂರಾದ ಸಂಪೂರ್ಣ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಮನೆ ನಿರ್ಮಾಣ ಪೂರ್ಣಗೊಳಿಸಲಾಗದೆ ಅನಾನುಕೂಲವಾಗಿದೆ. ಆದ್ದರಿಂದ ತಾಲೂಕಿನ ನೆರೆ ಸಂತ್ರಸ್ಥರ ಪುರ್ನ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ರಾಜೀವ ಗಾಂಧಿ ವಸತಿ ನಿಗಮದಿಂದ ಮಂಜೂರಾಗಿರುವ ಅನುದಾನವನ್ನು ತುರ್ತಾಗಿ ಬಿಡುಗಡೆಗೊಳಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಳೆಗಾಲದಲ್ಲಿ ಸಮುದ್ರ ತೀರದಲ್ಲಿ ಕಡಲು ಕೊರೆತದ ಸಮಸ್ಯೆ ಹಲವೆಡೆ ಕಾಣಿಸಿಕೊಂಡಿದೆ. ಸುಂಟರ ಗಾಳಿ ಮತ್ತು ವಿಪರೀತ ಮಳೆಯಿಂದ ನೂರಾರು ಮರಗಳು ಬಿದ್ದು, ವಿದ್ಯುತ್ ಕಂಬಗಳಿಗೆ, ಮನೆಗಳಿಗೆ ಹಾನಿಯಾಗಿದೆ. ರಸ್ತೆ, ಮೋರಿ, ಶಾಲಾ ಕಟ್ಟಡಗಳು, ಕಾಲುಸಂಕಗಳು ಹಾಗೂ ಸೇತುವೆಗಳು ಅಪಾಯ ದಲ್ಲಿವೆ. ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆಯಾಗದೆ, ಗ್ರಾಮೀಣ ರಸ್ತೆಗಳ ನಿರ್ವಹಣೆಯಿಲ್ಲದೆ ಸಂಚಾರ ದುಸ್ತರವಾಗಿದೆ. ಹೀಗಾಗಿ ಸಂತ್ರಸ್ತರಿಗೆ ಪರಿಹಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಗೆ, ದುರಸ್ತಿಗೆ ಸಾಕಷ್ಟು ಅನುದಾನದ ಅಗತ್ಯವಿದ್ದು, ಈ ಬಗ್ಗೆ ವಿಶೇಷ ಅನುದಾನವನ್ನು ಪ್ರಾಕೃತಿಕ ವಿಕೋಪ ದಡಿ ಉಡುಪಿ ಜಿಲ್ಲೆಗೆ ಸರಕಾರದಿಂದ ಮಂಜೂರು ಮಾಡುವಂತೆ ಕಂದಾಯ ಸಚಿವರಿಗೆ ಶಾಸಕ ಯಶಪಾಲ್ ಮನವಿ ಮಾಡಿದ್ದಾರೆ.







