ಉಡುಪಿ: ಗಾಳಿ-ಸಿಡಿಲಿಗೆ ಅಪಾರ ನಷ್ಟ; 12ಕ್ಕೂ ಅಧಿಕ ಮನೆಗಳಿಗೆ ಹಾನಿ
ಉಡುಪಿ, ಮೇ15: ಮಂಗಳವಾರ ಸಂಜೆ ಗಾಳಿ ಹಾಗೂ ಗುಡುಗು- ಸಿಡಿಲು ಸಹಿತ ಸುರಿದ ಸಾಧಾರಣ ಮನೆಗೆ ಕುಂದಾ ಪುರ ಮತ್ತು ಬ್ರಹ್ಮಾವರ ತಾಲೂಕಿನ 12ಕ್ಕೂ ಅಧಿಕ ವಾಸ್ತವ್ಯದ ಮನೆಗಳಿಗೆ ಹಾನಿಯುಂಟಾಗಿದ್ದು, ಸಿದ್ಧಾಪುರದಲ್ಲಿ ಯುವಕ ರೊಬ್ಬರು ಸಿಡಿಲು ಬಡಿದು ಮೃತಪಟ್ಟರೆ, ಮುದ್ದೂರಿನಲ್ಲಿ ಜಾನುವಾರು ಸಾವನ್ನಪ್ಪಿದೆ. ಹೀಗಾಗಿ ಜಿಲ್ಲೆಯಾದ್ಯಂತ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ.
ಸುರಿದ ಮಳೆಗಿಂತಲೂ ಬೀಸಿದ ಗಾಳಿಯಿಂದ ಕುಂದಾಪುರ ತಾಲೂಕಿನಲ್ಲಿ 10 ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ ಎರಡು ಮನೆಗಳಿಗೆ ಹಾನಿಯುಂಟಾ ಗಿರುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಗೆ ಮಾಹಿತಿ ಬಂದಿವೆ. ಇದರಿಂದ ಮೂರು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಕುಂದಾಪುರ ತಾಲೂಕಿನ ಸಿದ್ಧಾಪುರ ಗ್ರಾಮದ ಸುರೇಶ್ ಶೆಟ್ಟಿ (38) ಎಂಬವರು ಬೀಸಿದ ಗಾಳಿಗೆ ಮಾವಿನಮರದಿಂದ ಉದುರಿ ಬಿದ್ದ ಮಾವಿನ ಹಣ್ಣು ಹೆಕ್ಕುತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಅದೇ ರೀತಿ ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಮದ ನಾಗಪ್ಪಯ್ಯ ಶಾನುಭೋಗ ಎಂಬವರ ಕೊಟ್ಟಿಗೆಯಲ್ಲಿದ್ದ ಜೆರ್ಸಿ ಮಿಶ್ರತಳಿ ದನ ಸಿಡಿಲು ಬಡಿದು ಸಾವನ್ನಪ್ಪಿದ್ದು 35,000ರೂ. ನಷ್ಟದ ಬಗ್ಗೆ ವರದಿ ಬಂದಿದೆ.
ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮದ ಗುಲಾಬಿ ಶೆಟ್ಟಿ ಅವರ ಮನೆ ಮೇಲೆ ಮರಬಿದ್ದು 10ಸಾವಿರ, ಹೇರೂರು ಗ್ರಾಮದ ಸುನಿಲ್ ಡಿಸೋಜರ ಮನೆ ಮೇಲೆ ಮರಬಿದ್ದು 35ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಇನ್ನು ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಪ್ರೇಮಾ ಆಚಾರಿ ಮನೆಗೆ 50ಸಾವಿರ,ಬಾಬಿ ಮನೆಗೆ 20ಸಾವಿರ, ಮೊಳಹಳ್ಳಿ ಗ್ರಾಮದ ನಾಗುಶೆಟ್ಟಿ ಹಾಗೂ ರಾಜು ಅವರ ಮನೆಗೆ ತಲಾ 20 ಸಾವಿರ ರೂ., ಬೆಳ್ಳಿ ಮತ್ತು ಕಾಡ್ತಿ ಮನೆಗೆ ತಲಾ 10 ಸಾವಿರ ರೂ.ನಷ್ಟವಾಗಿದೆ.
ಸಿದ್ಧಾಪುರ ಗ್ರಾಮದ ಶಾರದಾ ಭಟ್ ಮನೆಗೆ 75 ಸಾವಿರ ರೂ., ರಾಘವೇಂದ್ರ ಭಟ್ ಮನೆಗೆ 50ಸಾವಿರ, ಪ್ರಭಾಕರ ಭಟ್ ಮನೆಗೆ 10ಸಾವಿರ ಹಾಗೂ 74 ಉಳ್ಳೂರು ಗ್ರಾಮದ ಶಂಕರ ಮಡಿವಾಳ ಮನೆಗೆ 10ಸಾವಿರ ನಷ್ಟ ಸಂಭವಿಸಿರುವ ಬಗ್ಗೆ ವರದಿ ಬಂದಿವೆ.
7.7ಮಿ.ಮೀ. ಮಳೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 7.7ಮಿ.ಮೀ. ಸರಾಸರಿ ಮಳೆಯಾಗಿದೆ. ಬ್ರಹ್ಮಾವರದಲಿಲ ಅತ್ಯಧಿಕ 15ಮಿ.ಮೀ., ಕುಂದಾಪುರದಲ್ಲಿ 13, ಹೆಬ್ರಿಯಲ್ಲಿ 8.3, ಬೈಂದೂರಿನಲ್ಲಿ 7.7, ಉಡುಪಿಯಲ್ಲಿ 4.9 ಹಾಗೂ ಕಾರ್ಕಳದಲ್ಲಿ 0.4ಮಿಮೀ. ಮಳೆಯಾಗಿದೆ.
ಎಲ್ಲೋ ಅಲರ್ಟ್
ರಾಜ್ಯದ ಪಶ್ಚಿಮ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡಗಳಲ್ಲಿ ಮೇ 16ರಿಂದ 20ರವರೆಗೆ ಗುಡುಗು-ಸಿಡಿಲು ಸಹಿತ ಭಾರೀ ಮಳೆ ಸುರಿಯುವ ಮುನ್ಸೂಚನೆಯನ್ನು ಬೆಂಗಳೂರಿನ ಹವಾಮಾನ ಕೇಂದ್ರ ನೀಡಿದೆ.