ಮೇ 14ರಿಂದ ಪುತ್ತಿಗೆ ಮಠದಲ್ಲಿ ಮೊಬೈಲ್ ವರ್ಜನ ಶಿಬಿರ

ಉಡುಪಿ, ಮೇ 8: ಉಡುಪಿ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀಸುಶ್ರೀಂದ್ರ ತೀರ್ಥರ ಸಂಕಲ್ಪ ಮತ್ತು ಮಾರ್ಗದರ್ಶನದಂತೆ 8ರಿಂದ 12 ವಯೋಮಾನದ ಬಾಲಕ, ಬಾಲಕಿಯರಿಗಾಗಿ ಇದೇ ಮೇ 14 ರಿಂದ ಮೇ 18ರವರೆಗೆ ಸನಿವಾಸ ಮೊಬೈಲ್ ವರ್ಜನ ಶಿಬಿರ ಹಿರಿಯಡ್ಕದ ಸಮೀಪದಲ್ಲಿರುವ ಪುತ್ತಿಗೆ ಮೂಲ ಮಠದಲ್ಲಿ ನಡೆಯಲಿದೆ ಎಂದು ಉಡುಪಿ ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.
ಈ ಶಿಬಿರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಹೆಸರು ನೊಂದಣಿ ಮಾಡಿಕೊಳ್ಳಲು ಮೇ 11 ಕೊನೆಯ ದಿನವಾಗಿರುತ್ತದೆ. ಕೇವಲ 50 ಶಿಬಿರಾರ್ಥಿಗಳಿಗೆ ಮಾತ್ರ ಇದರಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು ಮೇ 17ರಂದು ಶಿಬಿರಾರ್ಥಿಗಳ ಹೆತ್ತವರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಣಿಪಾಲದ ಕೆಎಂಸಿಯ ಮನೋಚಿಕಿತ್ಸಾ ವಿಭಾಗ ಮತ್ತು ಉಡುಪಿಯ ಪತಂಜಲಿ ಯೋಗ ಸಮಿತಿಗಳ ಸಹ ಯೋಗದೊಂದಿಗೆ ಹಿರಿಯಡ್ಕದಲ್ಲಿರುವ ಶ್ರೀಪುತ್ತಿಗೆ ಮೂಲಮಠದಲ್ಲಿ ನಡೆಯಲಿರುವ ಈ ಶಿಬಿರವು, ಮೊಬೈಲ್ ಬಳಕೆಯ ಪ್ರಮಾಣ ಅತ್ಯವಶ್ಯಕ ಮತ್ತು ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಆಗುವಂತೆ ಪ್ರೇರೇಪಣೆ ನೀಡುವತ್ತ ಗಮನ ಹರಿಸಲಿದೆ.
ಶಿಬಿರದಲ್ಲಿ ಆರೋಗ್ಯಪೂರ್ಣ ದಿನಚರಿ, ಒಳಾಂಗಣ- ಹೊರಾಂಗಣ ಕ್ರೀಡೆಗಳು, ಯೋಗ, ಓದು, ಭಜನೆ, ಭಗವದ್ಗೀತೆ, ಚರ್ಚೆ, ಕರಕುಶಲ ಚಟುವಟಿಕೆ, ಪೇಂಟಿಂಗ್, ಮ್ಯಾಜಿಕ್, ಅಡುಗೆ, ಕುಣಿತಭಜನೆ, ನೃತ್ಯ, ಯಕ್ಷಗಾನ ಮುಂತಾದ ಆಯ್ದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರಣೆ ನೀಡಲಾಗುವುದು.
ಮೊಬೈಲ್ನಿಂದ ಆಗುವ ದುಷ್ಪರಿಣಾಮಗಳು, ಜಂಕ್ಫುಡ್ನ ಅಪಾಯ, ಕೌನ್ಸೆಲಿಂಗ್, ಕುಟುಂಬ ಬಾಂಧವ್ಯ, ಹೆತ್ತವರ ಜವಾಬ್ದಾರಿ ಮುಂತಾದ ವಿಷಯಗಳ ಕುರಿತು ತಜ್ಞರಿಂದ ಮಾಹಿತಿ ಒದಗಿಸಲಾಗುವುದು. ಮಣಿಪಾಲ
ಆಸ್ಪತ್ರೆಯ ಡಾ.ಸುಮಾ ಉಡುಪ, ಗಾಂಧೀ ಆಸ್ಪತ್ರೆಯ ಡಾ.ವ್ಯಾಸರಾಜ ತಂತ್ರಿ, ಡಾ .ಸುಧೀರ್ರಾಜ್ ನಿಟ್ಟೆ, ಡಾ. ಶ್ರುತಿ ಬಲ್ಲಾಳ್, ರಾಘವೇಂದ್ರ ಭಟ್ ಪಣಿಯಾಡಿ, ವಿದುಷಿ ಉಷಾ ಹೆಬ್ಬಾರ್, ಗೋವರ್ಧನ ಆಚಾರ್ಯ, ವಿದ್ವಾನ್ ಕೆ.ವಿ. ರಮಣಾಚಾರ್ಯ, ವಿದುಷಿ ಅಯನಾ ವಿ. ರಮಣ್ ಮೂಡುಬಿದಿರೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ವಿದ್ವಾನ್ ಕೆ.ವಿ. ರಮಣಾಚಾರ್ಯ ಹಾಗೂ ಉಮಾ ಪ್ರಸಾದ್ ಅವರು ಶಿಬಿರದ ಸಂಚಾಲಕರಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ 8792158946/9880605691ನ್ನು ಸಂಪರ್ಕಿಸು ವಂತೆ ಶ್ರೀಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.






