ಕಾರ್ಕಳ ಇಮ್ಮಡಿ ಭೈರರಸನ 16ನೇ ಶತಮಾನಶಾಸನದ ಮರು ಅಧ್ಯಯನ
ಶಿರ್ವ: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಕಲ್ಲಂಬಾಡಿ ಪ್ರದೇಶದ ಕುಸುಮ ಶೆಟ್ಟಿ ಅವರ ಗದ್ದೆಯ ಬದುವಿನಲ್ಲಿ ರುವ ಈ ಶಾಸನ ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿದ್ದು, 3 ಅಡಿ ಎತ್ತರ ಮತ್ತು 2 ಅಡಿ ಅಗಲವನ್ನು ಹೊಂದಿದೆ. ಈ ಶಾಸನವು 16ನೆಯ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯ 18 ಸಾಲುಗಳನ್ನು ಒಳಗೊಂಡಿದೆ. ಶಾಸನದ ಮೇಲ್ಭಾಗದಲ್ಲಿ ಮುಕ್ಕೊಡೆಯಿದ್ದು ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ.
ಈ ಶಾಸನದ ಮರು ಅಧ್ಯಯನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡು ಬೆಳ್ಳೆ ಇವರು ಉಡುಪಿಯ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕ ಎಸ್.ಎ. ಕೃಷ್ಣಯ್ಯ ಅವರ ಸಹಯೋಗದಲ್ಲಿ ಮಾಡಿದ್ದಾರೆ.
ಜಿನ ಸ್ತುತಿಯೊಂದಿಗೆ ಪ್ರಾರಂಭವಾಗುವ ಈ ಶಾಸನವು 1452ರ (ಸಾಮಾನ್ಯ ವರ್ಷ 1530) ವಿಕೃತಿ ಸಂವತ್ಸರದ ಮಕರ ಮಾಸ ಶುದ್ಧ 15ನೆಯ ಆದಿವಾರಕ್ಕೆ ಸೇರುತ್ತದೆ. ಈ ಸಂದರ್ಭದಲ್ಲಿ ಕಳಸ-ಕಾರ್ಕಳ ಭೈರರಸ ರಾಣಿ ಬೊಮ್ಮಲದೇವಿಯ ಪುತ್ರ ಇಮ್ಮಡಿ ಭೈರರಸನು ರಾಜ್ಯಭಾರ ಮಾಡುತ್ತಿದ್ದಾಗ ಮುಡಾಳಿಯವರು ಕಾರ್ಕಳದಲ್ಲಿನ ಅಜಿತ ನಾಥ (ಜೈನ ತೀರ್ಥಂಕರ) ದೇವರ ಅಮೃತಪಡಿಗೆ ಬಿಟ್ಟ ಭೂಮಿಯಲ್ಲಿ ಉತ್ಪತ್ತಿಯು ಕಡಿಮೆಯಾದಾಗ ಅದಕ್ಕೆ ಪ್ರತಿಯಾಗಿ ಇಮ್ಮಡಿ ಭೈರರಸನು ಕೊಟ್ಟ ಭೂ ದಾನದ ವಿವರವನ್ನು ಶಾಸನವು ಉಲ್ಲೇಖಿಸುತ್ತದೆ.
ಸ್ಥಳೀಯರಾದ ಆದರ್ಶ್ ಶೆಟ್ಟಿ ಮತ್ತು ಅಕ್ಷಯ್ ಶೆಟ್ಟಿ ಅವರ ಮಾಹಿತಿಯ ಮೇರೆಗೆ ನಡೆದ ಕ್ಷೇತ್ರಕಾರ್ಯ ಶೋಧನೆಯಲ್ಲಿ ಪುರಾತತ್ವ ವಿದ್ಯಾರ್ಥಿಗಳಾದ ವಿಶಾಲ್ ರೈ ಕೆ, ಶಶಾಂತ್, ಮಂಜುನಾಥ ನಂದಳಿಕೆ ಹಾಗೂ ಸ್ಥಳೀಯರಾದ ರತ್ನಾರ್ಕ ಶೆಟ್ಟಿ, ವಸಂತ್ ಶೆಟ್ಟಿ ಮತ್ತು ರಾಜೀವಿ ಶೆಟ್ಟಿ ಸಹಕಾರ ನೀಡಿದ್ದರು ಎಂದು ಶ್ರುತೇಶ್ ಆಚಾರ್ಯ ತಿಳಿಸಿದ್ದಾರೆ.
ಪಾಂಡ್ಯಪ್ಪರಸನ ಶಾಸನ ಅಧ್ಯಯನ: ಇದೇ ತಂಡ ತಾಲೂಕಿನ ಶಿರ್ಲಾಲು ಗ್ರಾಮದ ಕಡ್ಜೆಲ್ ಪ್ರದೇಶದ ಸುದೇಶ್ ಜೈನ್ ಇವರಿಗೆ ಸೇರಿದ ಜಾಗದಲಿದ್ದ್ಲ ಕಳಸ ಕಾರ್ಕಳ ಭೈರವರಸ ಮನೆತನಕ್ಕೆ ಸೇರಿದ ರಾಣಿ ಕಾಳಲಾದೇವಿಯ ಕುಮಾರ ಪಾಂಡ್ಯಪ್ಪರಸನ ಶಾಸನದ ಅಧ್ಯಯನವನ್ನೂ ನಡೆಸಿದೆ.
ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು 3 ಅಡಿ ಎತ್ತರ ಮತ್ತು 2 ಅಡಿ ಅಗಲವನ್ನು ಹೊಂದಿದ್ದು 14 ನೆಯ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯ 17 ಸಾಲುಗಳನ್ನು ಒಳಗೊಂಡಿದೆ. ಶಾಸನದ ಮೇಲ್ಭಾಗದ ಪಟ್ಟಿಕೆಯಲ್ಲಿ ಶಿವಲಿಂಗವಿದ್ದು ಇದರ ಇಕ್ಕೆಲಗಳಲ್ಲಿ ಸೂರ್ಯ -ಚಂದ್ರ, ದೀಪಕಂಬ, ರಾಜಕತ್ತಿ ಹಾಗೂ ನಂದಿಯ ಉಬ್ಬು ಕೆತ್ತನೆಯಿದೆ.
ಈ ಶಾಸನವು ಶಕವರುಷ 1290 (ಸಾಮಾನ್ಯ ವರ್ಷ 1368)ನೆಯ ಪ್ಲವಂಗ ಸಂವತ್ಸರದ ಆಷಾಢ ಮಾಸ 9ನೆಯ ಆದಿತ್ಯವಾರದಂದು ಕಾಳಲದೇವಿಯ ಕುಮಾರ ಪಾಂಡ್ಯಪ್ಪರಸನು ಕಾಂತು ನಾಯ್ಕಂಗೆ (?) ಭೂ ದಾನವನ್ನು ಕೊಟ್ಟಿದ್ದು ಇಲ್ಲಿಂದ ಪ್ರತಿ ವರುಷ ಬಾರಕೂರ ಗದ್ಯಾಣ 1ನು ಕಳಸದ ಶ್ರೀಕಳಸನಾಥ ದೇವರಿಗೆ ಕೊಟ್ಟು ಅವನ ಸಂತಾನವು ಸುಖ ಸಮೃದ್ಧಿಯಿಂದ ಬಾಳಬೇಕೆಂದು ಶಾಸನವು ಉಲ್ಲೇಖಿಸುತ್ತದೆ. ಶಾಸನದಲ್ಲಿ ಶಾಪಶಯ ವಾಕ್ಯದ ಬಳಿಕ ಈ ಶಾಸನವನ್ನು ಬರೆದ ಬಿರ್ಮಮಲ್ಲಿಯ ಉಲ್ಲೇಖವಿದೆ.
ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಇತಿಹಾಸ ಉಪನ್ಯಾಸಕ ನವೀನ್ ಕೊರೆಯ ಮತ್ತು ಪ್ರಭಾತ್ ಬಲ್ನಾಡು ಹಾಗೂ ಪುರಾತತ್ವ ವಿದ್ಯಾರ್ಥಿಗಳಾದ ಶಶಾಂತ್, ಆರ್.ಶ್ರಾವ್ಯಾ ಮತ್ತು ಮಂಜುನಾಥ ನಂದಳಿಕೆ ಭಾಗವಹಿಸಿದ್ದರು.