ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮದಿನ ಪ್ರಯುಕ್ತ ಕುಂದಾಪುರದಲ್ಲಿ ಗುರು ಸ್ಮರಣೆ, ಸಂದೇಶ ವಾಹನ ಜಾಥಾ

ಕುಂದಾಪುರ, ಆ.30: ನಮ್ಮ ಸಮಾಜ ಯಾವ ರೀತಿ ಮುನ್ನಡೆಯಬೇಕು ಎಂಬ ಬಗ್ಗೆ ನಾರಾಯಣಗುರುಗಳು ಸ್ಪಷ್ಟ ದಾರಿಯನ್ನು ತೋರಿಸಿದ್ದಾರೆ. ನಮ್ಮ ಸಮಾಜ ಮಾತ್ರವಲ್ಲ, ಎಲ್ಲ ಸಮಾಜವು ಗುರುಗಳ ಸಂದೇಶವನ್ನು ತಿಳಿಯ ಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು, ಯುವ ಸಮೂಹ ತತ್ವ, ಆದರ್ಶಗಳನ್ನು ಅರಿಯಬೇಕು ಎಂದು ಕುಂದಾಪುರ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಹೇಳಿದ್ದಾರೆ.
ರವಿವಾರ ಇಲ್ಲಿನ ಶ್ರೀನಾರಾಯಣ ಗುರು ಮಂದಿರದ ಎದುರು ಶ್ರೀನಾರಾಯಣ ಗುರು ಯುವಕ ಮಂಡಲದ ಆಶ್ರಯ ದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ದಿನದ ಪ್ರಯುಕ್ತ ಗುರು ಸ್ಮರಣೆ ಹಾಗೂ ಸಂದೇಶ ವಾಹನ ಜಾಥಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾರಾಯಣಗುರುಗಳ ಹಾಕಿಕೊಟ್ಟ ಆದರ್ಶಗಳ ಮೂಲಕ ಎಲ್ಲರೂ ಸನ್ಮಾರ್ಗದಿಂದ ನಡೆಯಲು ಪ್ರೇರಣೆ ಸಿಗಬೇಕು ಅನ್ನುವ ನಿಟ್ಟಿನಲ್ಲಿ ಈ ಸಂದೇಶ ವಾಹನ ಜಾಥಾ ಆಯೋಜಿಸಲಾಗುತ್ತಿದೆ. ಗುರುಗಳ ಸಂದೇಶದಂತೆ ವಿದ್ಯೆಯಿಂದ ಸ್ವತಂತ್ರರಾಗುವತ್ತ ಯುವಕರು ಕಾರ್ಯಪ್ರವೃತ್ತರಾಗಿ ಎಂದು ಅವರು ಕರೆ ನೀಡಿದರು.
ವಾಹನ ಜಾಥಾಗೆ ಚಾಲನೆ ನೀಡಿದ ದುಬೈ ಉದ್ಯಮಿ ಮಂಜುನಾಥ ಪೂಜಾರಿ ಸೇನಾಪುರ ಅವರು, ಶ್ರೀನಾರಾ ಯಣ ಗುರುಗಳು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ಕುಂದಾಪುರದ ಶ್ರೀನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಪೂಜಾರಿ ಬೀಜಾಡಿ, ಕಾರ್ಯದರ್ಶಿ ಅಶೋಕ ಪೂಜಾರಿ ನೇರಳಕಟ್ಟೆ ಪದಾಧಿಕಾರಿಗಳು, ಮಹಿಳಾ ಘಟಕದ ಸ್ಥಾಪಕಾಧ್ಯಕ್ಷೆ ಗುಣರತ್ನಾ, ಬಿಲ್ಲವ ಸಂಘದ ಪ್ರ.ಕಾರ್ಯದರ್ಶಿ ಯೋಗೀಶ್ ಪೂಜಾರಿ ಕೋಡಿ, ಉಪಾಧ್ಯಕ್ಷ ರಾಮ ಪೂಜಾರಿ ಮುಲ್ಲಿಮನೆ, ಪ್ರಮುಖರಾದ ಸತೀಶ್ ಕೋಟ್ಯಾನ್,ದಿವಾಕರ ಕಡ್ಗಿಮನೆ, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ವೇಳೆ ನಾಗರಾಜ ಹೆಜಮಾಡಿ ರಚಿಸಿರುವ ಬ್ರಹ್ಮಶ್ರೀ ನಾರಾಯಣ ಗುರು ಸಚ್ಚರಿತೆ ನಿತ್ಯ ಪಾರಾಯಣ ಗ್ರಂಥ ವನ್ನು ಬಿಡುಗಡೆ ಮಾಡಲಾಯಿತು. ರಾಜೇಶ್ ಕಡ್ಗಿಮನೆ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು.
ಸಂದೇಶ ವಾಹನ ಜಾಥಾವು ಮಂದಿರದಿಂದ ಹೊರಟು, ಹೊಸ ಬಸ್ ನಿಲ್ದಾಣ, ಪಾರಿಜಾತ ಸರ್ಕಲ್ ಮೂಲಕ ಸಾಗಿ ಶಾಸ್ತ್ರಿ ಸರ್ಕಲ್, ಬಸ್ರೂರು ಮೂರುಕೈ ಅಂಡರ್ ಪಾಸ್ ಆಗಿ ವಾಪಾಸು ಬಂದು ನಾರಾಯಣ ಗುರು ಮಂದಿರದಲ್ಲಿ ಸಂಪನ್ನಗೊಂಡಿತು.






