ಉಡುಪಿ: ಆನ್ಲೈನ್ ವಂಚನೆಯ 2 ಪ್ರಕರಣಗಳಲ್ಲಿ ಒಟ್ಟು 14 ಲಕ್ಷ ರೂ. ಲಪಟಾಯಿಸಿದ ವಂಚಕರು

ಉಡುಪಿ: ಆನ್ಲೈನ್ ಮೂಲಕ ಬ್ಯಾಂಕ್ ಖಾತೆಯಿಂದ ಹಣ ಪಡೆದು ವಂಚಿಸಿದ ಇನ್ನೆರಡು ಪ್ರಕರಣಗಳು ವರದಿಯಾಗಿದ್ದು, ಒಟ್ಟು 14 ಲಕ್ಷ ರೂ.ಗಳನ್ನು ಇಬ್ಬರ ಬ್ಯಾಂಕ್ ಖಾತೆಯಿಂದ ಲಪಟಾಯಿಸಲಾಗಿದೆ.
ಮೊದಲ ಪ್ರಕರಣದಲ್ಲಿ ಶ್ವೇತಾ ಎಂಬವರನ್ನು ಅಪರಿಚಿತರು ಟೆಲಿಗ್ರಾಂ ಎಪ್ಲಿಕೇಶನ್ ಮೂಲಕ ಸಂಪರ್ಕಿಸಿ ವರ್ಕ್ ಫ್ರಂ ಹೋಮ್ ನಲ್ಲಿ ಉದ್ಯೋಗ ಕೊಡುವುದಾಗಿ ನಂಬಿಸಿ ನೀಡಿದ ಟಾಸ್ಕ್ ಪೂರ್ಣಗೊಳಿಸಲು ತಿಳಿಸಿದ್ದು, ಟಾಸ್ಕ್ನಿಂದ ಬಂದ ಹಣವನ್ನು ಪಡೆಯಲು ಅಪರಿಚಿತರು ತಿಳಿಸಿದ ಬ್ಯಾಂಕ್ ಖಾತೆಗೆ ಹಣವನ್ನು ಪಾವತಿಸಿದ್ದು, ಫೆ.8ರಿಂದ 16ರವರೆಗೆ ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತಹಂತವಾಗಿ ಒಟ್ಟು 12,85,000ರೂ.ಹಣವನ್ನು ಆನ್ಲೈನ್ನಲ್ಲಿ ವರ್ಗಾವಣೆ ಮಾಡಿದ್ದರು.
ಆದರೆ ಆರೋಪಿಗಳು ಟಾಸ್ಕ್ನಿಂದ ಬಂದ ಹಣ ಹಾಗೂ ಶ್ವೇತಾ ಅವರಿಂದ ಪಡೆದ ಹಣವನ್ನು ಹಿಂದಿರುಗಿಸದೇ ಮೋಸ ಮಾಡಿರುವುದಾಗಿ ಇದೀಗ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎರಡನೇ ಪ್ರಕರಣದಲ್ಲಿ ಕೇಶವರಾವ್ ಎಂಬವರ ತಂದೆ ಉಡುಪಿ ಕ್ಯಾಥೋಲಿಕ್ ಸೆಂಟರ್ನ ಕೆನರಾ ಬ್ಯಾಂಕಿನಲ್ಲಿ ಎಸ್ಬಿ ಖಾತೆ ಹೊಂದಿದ್ದು, ಫೆ.21ರಂದು ಅವರಿಗೆ ಕೆವೈಸಿ ಅಪ್ಡೇಟ್ ಮಾಡುವ ಬಗ್ಗೆ ಸಂದೇಶ ಬಂದಿದ್ದು, ಆ ನಂಬರಿಗೆ ಅವರು ದೂರವಾಣಿ ಕರೆ ಮಾಡಿದ್ದರು. ಕರೆ ಸ್ವೀಕರಿಸಿದಾತ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಆಧಾರ್ ನಂಬರ್ ಮಾತ್ರವಲ್ಲದೇ ಅವರ ಮೊಬೈಲ್ಗೆ ಬಂದ ಓಟಿಪಿಯನ್ನು ಪಡೆದು ಅವರ ಖಾತೆಯಿಂದ 1,42,000ರೂ ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದ. ಇದೀಗ ಕೇಶವರಾವ್ ತಂದೆಯವರಿಗಾದ ನಷ್ಟದ ಕುರಿತು ಸೆನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.







