ಬಾಯ್ಸ್ ಟ್ರೋಫಿ-2024: ಕೊರಗ ಸಮುದಾಯದವರ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಉಡುಪಿ: ಕೊರಗ ಸಮುದಾಯದ ಯುವಕರಲ್ಲಿ ಅಗಾಧವಾದ ಕ್ರೀಡಾ ಪ್ರತಿಭೆಗಳಿವೆ. ಅವರಿಗೆ ಉತ್ತಮ ತರಬೇತಿ ನೀಡುವ ಮೂಲಕ ಮುಖ್ಯವಾಹಿನಿಗೆ ತರಲು ಸರಕಾರ ಮತ್ತು ಎನ್ಜಿಓಗಳು ಶ್ರಮಿಸಬೇಕು ಎಂದು ಉಡುಪಿಯ ಯುವ ವಕೀಲ ಅಸದುಲ್ಲ ಕಟಪಾಡಿ ಹೇಳಿದ್ದಾರೆ.
ಬಾಯ್ಸ್ ಕ್ರಿಕೆಟರ್ಸ್ ಚಿಟ್ಪಾಡಿ ಉಡುಪಿ ಇದರ ವತಿಯಿಂದ ಉಡುಪಿ ಎಂ.ಜಿ.ಎಂ. ಕಾಲೇಜು ಕ್ರೀಡಾಂಗಣದಲ್ಲಿ ಕೊರಗ ಸಮುದಾಯದವರಿಗೆ ನಡೆದ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರಮಜೀವಿಗಳೇಹೆಚ್ಚಿರುವ ಕೊರಗ ಸಮುದಾಯದಲ್ಲಿ ಇಂದಿನ ಯುವಕರು ಶಿಸ್ತಿನ ಜೀವನಕ್ಕೆ ಆದ್ಯತೆಯನ್ನು ನೀಡುತ್ತಿದ್ದಾರೆ. ಕ್ರೀಡೆಯನ್ನು ತುಂಬಾ ಪ್ರೀತಿಸುವ ಇವರು ಇತರ ಸಮುದಾಯದ ಯುವಕರಿಗೆ ಮಾದರಿ ಯಾಗಿದ್ದಾರೆ ಎಂದರು.
ಕ್ರಿಕೆಟ್ ಆಟಗಾರ ಪ್ರದೀಪ್ ಶೆಟ್ಟಿ, ಉದ್ಯಮಿ ಕಿಶೋರ್, ಬಾಯ್ಸ್ ಚಿಟ್ಪಾಡಿಯ ನಾಯಕ ಸುನಿಲ್, ಜಯರಾಮ ಬೀಡಿನಗುಡ್ಡೆ, ಶ್ಯಾಮ್, ಆನಂದ, ಜಗದೀಶ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾಟದಲ್ಲಿ ಅವಿಭಜಿತ ದ.ಕ. ಜಿಲ್ಲೆಯಿಂದ ಕೊರಗ ಸಮುದಾಯದ ೪೪ ತಂಡಗಳು ಭಾಗವಹಿಸಿವೆ. ಪಥುಲ್ ಹಿರಿಯಡ್ಕ ಕಾರ್ಯಕ್ರಮ ನಿರ್ವಹಿಸಿದರು.





