ಡಾ.ಲಕ್ಷ್ಮಣ್ರ ‘ಪರಿಮಳದ ಬಾಕಿ ಮೊತ್ತ’ ಸಂಕಲನಕ್ಕೆ ಕವಿ ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ- 2026

ಉಡುಪಿ, ಆ.20: ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ವರ ಪ್ರಾಯೋಜಕತ್ವದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ನೀಡುವ ಕವಿ ಕುರಾಡಿ ಸೀತಾರಾಮ ಅಡಿಗ ನೆನಪಿನ ಕಾವ್ಯ ಪ್ರಶಸ್ತಿ-2026ಕ್ಕೆ ಬೆಂಗಳೂರಿನ ಕವಿ ಡಾ. ಲಕ್ಷ್ಮಣ್ ವಿ. ಎ. ಅವರ ‘ಪರಿಮಳದ ಬಾಕಿ ಮೊತ್ತ’ ಕವನ ಸಂಕಲನ ಆಯ್ಕೆಯಾಗಿದೆ.
ಪ್ರಶಸ್ತಿಗಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಸಂಸ್ಥೆ 2025ರಲ್ಲಿ ಪ್ರಕಟಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಿತ್ತು. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 71 ಕವನ ಸಂಕಲನಗಳು ಸ್ಪರ್ಧೆಗೆ ಬಂದಿದ್ದವು. ಕನ್ನಡ ಸಾಹಿತ್ಯ ಲೋಕದ ಹಿರಿಯ ವಿಮರ್ಶಕ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಎಚ್. ದಂಡಪ್ಪ ತೀರ್ಪುಗಾರರಾಗಿ ಡಾ.ಲಕ್ಷ್ಮಣ್ರ ‘ಪರಿಮಳದ ಬಾಕಿ ಮೊತ್ತ’ ಕವನ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದರು.
ಪ್ರಶಸ್ತಿಯು 10,000ರೂ. ನಗದು ಗೌರವಧನ, ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ ತಿಳಿಸಿದ್ದಾರೆ.
ಡಾ. ಲಕ್ಷ್ಮಣ್ ಪರಿಚಯ: ಡಾ. ಲಕ್ಷ್ಮಣ್ ವಿಠೋಬ ಅಟಪಟಕರ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದವರು. ಆಯುರ್ವೇದ ವೈದ್ಯರಾಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಕವಿ, ಕಥೆಗಾರ ಹಾಗೂ ಅಂಕಣಕಾರರಾಗಿ ಕನ್ನಡ ಸಾಹಿತ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಪ್ರಮುಖ ಕೃತಿಗಳು ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’, ‘ಅಪ್ಪನ ಅಂಗಿ’, ‘ಕಾಯಿನ್ ಬೂತ್’, ‘ಪರಿಮಳದ ಬಾಕಿ ಮೊತ್ತ’, ‘ಪಿ.ಎಚ್.ಸಿ. ಕವಲುಗುಡ್ಡ’ ಸೇರಿದಂತೆ ಒಟ್ಟು 11 ಕೃತಿಗಳು ಪ್ರಕಟಗೊಂಡಿವೆ
ಇವರು ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವುಗಳಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ-2026 ಸೇರಿವೆ.






