ಆ. 23-24ರಂದು ಸತತ 25 ಗಂಟೆ ದಾಸರ ಪದ ಗಾಯನ; ವಿಶ್ವದಾಖಲೆ ಪ್ರಯತ್ನದಲ್ಲಿ ಖ್ಯಾತ ಗಾಯಕಿ ಸಂಗೀತ ಬಾಲಚಂದ್ರ

ಉಡುಪಿ: ಲಘು ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ 25 ವರ್ಷಗಳ ಸುದೀರ್ಘ ಪಯಣ ಪೂರ್ಣಗೊಳಿಸಿರುವ ಆಕಾಶ ವಾಣಿಯ ಉನ್ನತ ಶ್ರೇಣಿಯ ಕಲಾವಿದೆ ಹಾಗೂ ಚಲನಚಿತ್ರ ಹಿನ್ನೆಲೆ ಗಾಯಕಿ ಉಡುಪಿಯ ಸಂಗೀತ ಬಾಲಚಂದ್ರ ಅವರು ಇದೀಗ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆಯಲು ವಿಶಿಷ್ಟ ಸಾಹಸಕ್ಕೆ ಮುಂದಾಗಿದ್ದಾರೆ.
ಇದೇ ಆಗಸ್ಟ್ 23ರಂದು ಬೆಳಗ್ಗೆ 6:30ರಿಂದ ಮರುದಿನ ಆ.24ರ ಬೆಳಗ್ಗೆ 7:30ರವರೆಗೆ ಸತತ 25 ಗಂಟೆಗಳ ಕಾಲ ದಾಸರಪದ ಗಾಯನದ ಮೂಲಕ ವಿಶಿಷ್ಟ ವಿಶ್ವದಾಖಲೆಗಾಗಿ ಅವರು ನಿರಂತರವಾಗಿ ಹಾಡಲಿದ್ದಾರೆ. ಭೀಮಾ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ಗಾಯನ ಕಾರ್ಯಕ್ರಮಕ್ಕೆ ‘ಪಂಚವಿಂಶತಿ’ ಎಂದು ಹೆಸರಿಡಲಾಗಿದೆ.
ಉಡುಪಿಯ ಶ್ರೀಕೃಷ್ಣ ಮಠದ ಸಮೀಪದ ಗೀತಾ ಮಂದಿರದ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ಈ ಕಾರ್ಯ ಕ್ರಮ ನಡೆಯಲಿದೆ ಎಂದು ಸಂಗೀತ ಬಾಲಚಂದ್ರ ಇಂದು ಪ್ರೆಸ್ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸತತ 25 ಗಂಟೆಗಳ ದಾಸರ ಪದಗಾಯನದ ವೇಳೆ ಪುರಂದರದಾಸರು, ಕನಕದಾಸರು, ವಿಜಯದಾಸರು ಸೇರಿದಂತೆ ವಿವಿಧ ದಾಸರ ಒಟ್ಟು 250 ದಾಸರ ಪದಗಳನ್ನು ಹೊಸ ರಾಗಸಂಯೋಜನೆಯೊಂದಿಗೆ ಪ್ರಸ್ತುತ ಪಡಿಸುತ್ತಿರುವುದಾಗಿ ಸಂಗೀತ ಬಾಲಚಂದ್ರ ತಿಳಿಸಿದರು.
ತಮ್ಮ ಸಂಗೀತಗುರು ವಿದ್ವಾನ್ ಸೂರಾಲು ಜಿ.ಪರಮೇಶ್ವರ ಭಟ್ ಅವರಿಗೆ ಸಮರ್ಪಿಸುತ್ತಿರುವುದಾಗಿ ತಿಳಿಸಿಗದ ಸಂಗೀತಾ, ಆ.23ರಂದು ಬೆಳಗ್ಗೆ 6.00ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಶಾಸಕ ಯಶಪಾಲ್ ಸುವರ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.6:30ಕ್ಕೆ ಆರಂಭವಾಗುವ ಗಾಯನವು ಆ.24ರ ಬೆಳಿಗ್ಗೆ 7.30ಕ್ಕೆ ಮುಕ್ತಾಯ ಗೊಳ್ಳಲಿದೆ. ಒಟ್ಟು 25 ಗಂಟೆ (1,500 ನಿಮಿಷ) ಕಾಲ ನಿರಂತರವಾಗಿ ದಾಸರಪದಗಳ ಗಾಯನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಹೊಸದಾಗಿ ಸ್ವರಸಂಯೋಜನೆ ಮಾಡಲಾಗಿರುವ 250 ದಾಸರಪದಗಳನ್ನು ಪ್ರಸ್ತುತಪಡಿಸಲಾಗುವುದು. ಕೀಬೋರ್ಡ್, ರಿದಮ್ ಪ್ಯಾಡ್, ಕೊಳಲು ಹಾಗೂ ತಬಲಾ ವಾದಕ ರನ್ನೊಳಗೊಂಡ ಎರಡು ಪ್ರತ್ಯೇಕ ಸಹಕಲಾವಿದರ ತಂಡಗಳು ನಿರಂತರವಾಗಿ ಲೈವ್ ಸಂಗೀತಕ್ಕೆ ಸಾಥ್ ನೀಡಲಿವೆ. ಪ್ರತಿ ಮೂರುಗಂಟೆಗೊಮ್ಮೆ ತಲಾ 10ರಿಂದ 15 ನಿಮಿಷಗಳ ವಿರಾಮ ಪಡೆಯಲಾಗುವುದು ಎಂದರು.
ಮಹಿಳಾ ಗಾಯಕಿಯೊಬ್ಬರು ಪ್ರಮುಖವಾಗಿ ದಾಸರಪದಗಳನ್ನು ಆಯ್ಕೆ ಮಾಡಿಕೊಂಡು ಇಷ್ಟು ಸುದೀರ್ಘ ಅವಧಿ ಯವರೆಗೆ ನಿರಂತರವಾಗಿ ಗಾಯನ ಮಾಡುತ್ತಿರುವುದು ಅಪರೂಪದ ಹಾಗೂ ಮೊದಲ ಪ್ರಯತ್ನ ಇದಾಗಿದ್ದು, ಈ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ನಲ್ಲಿ ದಾಖಲೆ ಬರೆಯಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ರವೀಂದ್ರ ಪ್ರಭು, ಗುರುರಾಜ್, ಕೆ.ವೇದವ್ಯಾಸ ಪುರಾಣಿಕ್, ಮೋಹನ್ ಪಡ್ರೆ ಉಪಸ್ಥಿತರಿದ್ದರು.






