ಲೋಕಸಭಾ ಚುನಾವಣೆ| ಎ. 25-26ಕ್ಕೆ ಕುಂದಾಪುರ-ಬೆಂಗಳೂರು ಮಧ್ಯೆ ವಿಶೇಷ ರೈಲು ಸಂಚಾರ
ಸಾಂದರ್ಭಿಕ ಚಿತ್ರ
ಉಡುಪಿ: ಎ.26ರಂದು ನಡೆಯುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾನಕ್ಕಾಗಿ ಬೆಂಗಳೂರಿನಲ್ಲಿರುವ ಕರಾವಳಿಯ ಮತದಾರ ರು ಊರಿಗೆ ಬರಲು ಅನುಕೂಲವಾಗುವಂತೆ ಕೊಂಕಣ ರೈಲ್ವೆ ಕುಂದಾಪುರ ಮತ್ತು ಯಶವಂತಪುರಗಳ ನಡುವೆ ಎ.25 ಹಾಗೂ ಎ.26ರಂದು ವನ್ವೇ ವಿಶೇಷ ರೈಲನ್ನು ದಕ್ಷಿಣ-ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಓಡಿಸಲು ನಿರ್ಧರಿಸಿದೆ.
ರೈಲು ನಂ.06547 ಯಶವಂತಪುರ- ಕುಂದಾಪುರ ವನ್ವೇ ಎಕ್ಸ್ಪ್ರೆಸ್ ವಿಶೇಷ ರೈಲು ಎ.25ರ ರಾತ್ರಿ 11:20ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಎ.26ರ ಬೆಳಗ್ಗೆ 10:45ಕ್ಕೆ ಕುಂದಾಪುರ ತಲುಪಲಿದೆ. ಈ ರೈಲಿಗೆ ನೆಲಮಂಗಲ, ಕುಣಿಗಲ್, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ ಹಾಗೂ ಬಾರಕೂರು ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಅದೇ ರೀತಿ ರೈಲು ನಂ.06548 ಕುಂದಾಪುರ- ಯಶವಂತಪುರ ವನ್ವೇ ಎಕ್ಸ್ಪ್ರೆಸ್ ವಿಶೇಷ ರೈಲು ಎ.26ರ ಶುಕ್ರವಾರ ಬೆಳಗ್ಗೆ 11:20ಕ್ಕೆ ಕುಂದಾಪುರ ದಿಂದ ಪ್ರಯಾಣ ಬೆಳೆಸಲಿದ್ದು ಅದೇ ದಿನ ರಾತ್ರಿ 9:50ಕ್ಕೆ ಯಶವಂತಪುರ ರೈಲು ನಿಲ್ದಾಣ ತಲುಪಲಿದೆ. ಈ ರೈಲಿಗೆ ಬಾರಕೂರು, ಉಡುಪಿ, ಮುಲ್ಕಿ, ಸುರತ್ಕಲ್, ಮಂಗಳೂರು ಜಂಕ್ಷನ್, ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ, ಸಕಲೇಶಪುರ, ಹಾಸನ ಹಾಗೂ ಕುಣಿಗಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಈ ರೈಲು ಒಟ್ಟು 21 ಬೋಗಿಗಳೊಂದಿಗೆ ಸಂಚರಿಸಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ಹಾಗೂ ಸಮಯದ ಕುರಿತು ತಿಳಿಯಲು ವೈಬ್ಸೈಟ್ -www.enquiry.indianrail.gov.in- ಸಂದರ್ಶಿಸಬಹುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.