ಸೀಮೆಎಣ್ಣೆ ರಹದಾರಿ: ಆ.25, 26ಕ್ಕೆ ದೋಣಿಗಳ ಭೌತಿಕ ತಪಾಸಣೆ

ಉಡುಪಿ, ಆ.19: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಮೋಟಾರೀಕೃತ ನಾಡ ದೋಣಿಗಳನ್ನು ಭೌತಿಕವಾಗಿ ಪರಿಶೀಲಿಸಿ ಮೀನುಗಾರಿಕೆ ಪರವಾನಿಗೆ ಹಾಗೂ ಸೀಮೆಎಣ್ಣೆ ರಹದಾರಿ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ.
ಆಗಸ್ಟ್ ತಿಂಗಳಿನಿಂದ ಕೈಗಾರಿಕಾ ಸೀಮೆಎಣ್ಣೆಯನ್ನು ಪೂರೈಸಲು ಪೂರ್ವ ಸಿದ್ಧತೆ ಮಾಡಿಕೊಳ್ಳುವ ಉದ್ದೇಶದಿಂದ ಆಗಸ್ಟ್ 25ರಂದು ಕುಂದಾಪುರ ತಾಲೂಕಿನ ಕೋಡಿ ಕಿನಾರೆ, ಗಂಗೊಳ್ಳಿ ಬಂದರು, ಗಂಗೊಳ್ಳಿ ಲೈಟ್ ಹೌಸ್, ಕಂಚುಗೋಡು ತ್ರಾಸಿ, ಕಂಚುಗೋಡು-ಮಡಿ, ನಾವುಂದ-ಮರವಂತೆ, ಕೊಡೇರಿ-ಕಿರಿಮಂಜೇಶ್ವರ, ಪಡುವರಿ-ತಾರಾಪತಿ, ಮಡಿಕಲ್-ಉಪ್ಪುಂದ, ಕಳಿಹಿತ್ಲು-ಅಳ್ವೆಗದ್ದೆ ಮತ್ತು ಆಗಸ್ಟ್ 26ರಂದು ಉಡುಪಿ ತಾಲೂಕಿನ ಹೆಜಮಾಡಿ-ಪಡುಬಿದ್ರಿ, ಉಚ್ಚಿಲ-ಎಮಾಳ್, ಮಲ್ಪೆ-ಪಡುಕೆರೆ, ಮಲ್ಪೆ- ಸೀ-ವಾಕ್, ಸಾಸ್ತಾನ-ಕೋಡಿಕನ್ಯಾನ, ಸಾಸ್ತಾನ-ಕೋಡಿ ಜೆಟ್ಟಿ, ಕಾಪು- ಎರ್ಮಾಳ್ ಲೈಟ್ಹೌಸ್, ಹಂಗಾರಕಟ್ಟೆ-ಕೋಡಿಬೆಂಗ್ರೆಗಳ ಸ್ಥಳಗಳಲ್ಲಿ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭೌತಿಕ ತಪಾಸಣೆ ನಡೆಸಲಿದ್ದಾರೆ.
ಆದ್ದರಿಂದ ನಾಡದೋಣಿ ಮಾಲಕರು ತಪಾಸಣೆ ವೇಳೆಯಲ್ಲಿ ತಮ್ಮ ದೋಣಿ ಇಂಜಿನ್ ಸಮೇತ ದಾಖಲೆಗಳೊಂದಿಗೆ (ಆರ್.ಸಿ ಪ್ರತಿ, ಲೈಸೆನ್ಸ್ ಮತ್ತು ಸೀಮೆಎಣ್ಣೆ ರಹದಾರಿ ಪ್ರತಿ) ಖುದ್ದಾಗಿ ಹಾಜರಾಗಿ, ತಪಾಸಣೆ ನಡೆಸಲು ಸಹಕರಿ ಸುವಂತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





