ಪ್ರತಿ ವರ್ಷ 3,000ಕ್ಕೂ ಅಧಿಕ ಮಕ್ಕಳಿಂದ ಯಕ್ಷಗಾನ ಕಲಿಕೆ: ತಲ್ಲೂರು

ಉಡುಪಿ, ಅ.4: ಯಕ್ಷ ಶಿಕ್ಷಣ ಹಾಗೂ ರಂಗ ಶಿಕ್ಷಣವನ್ನು ಇಂದು ಶಾಲಾ ಕಾಲೇಜು ಮಕ್ಕಳಿಗೆ ನೀಡಲಾಗುತ್ತಿದೆ. ಸುಮಾರು 3,000ಕ್ಕೂ ಅಧಿಕ ಮಕ್ಕಳು ಪ್ರತಿ ವರ್ಷ ಯಕ್ಷಗಾನವನ್ನು ಕಲಿಯುತ್ತಿದ್ದಾರೆ. ಈ ಬಾರಿ 20 ಪ್ರೌಢಶಾಲೆ ಗಳಲ್ಲಿ ನಾಟಕ ಅಭಿನಯವನ್ನು ಕಲಿಸುವ ರಂಗಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಉಡುಪಿ ಪುತ್ತೂರಿನ ಭಗವತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಗುರುವಾರ ಶ್ರೀಭಗವತಿ ಯಕ್ಷ ಕಲಾ ಬಳಗದ ವತಿಯಿಂದ ನವರಾತ್ರಿ ಮಹೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ 11 ದಿನಗಳ ಕಾಲ ನಡೆದ ‘ಯಕ್ಷ ನವಮಿ 2025’ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಮಾತನಾಡುತಿದ್ದರು.
ಮಕ್ಕಳಿಗೆ ಯಕ್ಷಗಾನವನ್ನು ಕಲಿಸಲು ತಂದೆತಾಯಿಗಳು ಮುಂದಾಗಬೇಕು. ಇದರಿಂದ ಮಕ್ಕಳು ನೈತಿಕ ಮೌಲ್ಯ ಗಳನ್ನು ಬೆಳೆಸಿಕೊಂಡು ಪ್ರಜ್ಞಾವಂತ ನಾಗರಿಕರಾಗುತ್ತಾರೆ. ಅಲ್ಲದೆ ಯಕ್ಷಗಾನವನ್ನು ಕಲಿತ ಮಕ್ಕಳು ಶಿಕ್ಷಣದಲ್ಲೂ ಉತ್ತಮ ಸಾಧನೆ ಮಾಡಿರುವುದನ್ನು ಕಂಡಿದ್ದೇವೆ. ಹೀಗಾಗಿ ಯಕ್ಷಗಾನ ಕಲಿತರೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ ಎಂಬ ಅಳುಕು ಹೆತ್ತವರಿಗೆ ಬೇಡ ಎಂದರು.
ಅದಮಾರು ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ನಮ್ಮ ದೇಶದ ಎಲ್ಲಾ ಕಲೆಗಳು ಪೌರಾಣಿಕ ಹಿನ್ನಲೆ ಯನ್ನು ಪಡೆದುಕೊಂಡಿವೆ. ನಮ್ಮ ಪುರಾಣದ ಕಥೆಗಳು ಇದಕ್ಕೆ ಉದಾಹರಣೆ. ನಮ್ಮ ಹಿರಿಯರು ಪೌರಾಣಿಕ ಪ್ರಸಂಗಗಳನ್ನು ಕಲಿತಿರುವುದೇ ಈ ಯಕ್ಷಗಾನ ದಿಂದಾಗಿ. ಹೀಗಾಗಿ ಯಕ್ಷಗಾನವನ್ನು ಉಳಿಸಿ ಬೆಳೆಸುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ಸ್ತ್ರೀ ವೇಷಧಾರಿ, ಕಲಾವಿದ ಸಂತೋಷ್ ಹಿಲಿಯಾಣ ಇವರಿಗೆ 7ನೇ ವರ್ಷದ ’ಯಕ್ಷ ಪ್ರದೀಪ್ತರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜ ಸೇವಕಿ ವೀಣಾ ಎಸ್.ಶೆಟ್ಟಿ, ಕರ್ನಾಟಕ ಬ್ಯಾಂಕಿನ ಸ್ಥಳೀಯ ಶಾಖೆಯ ಎಜಿಎಂ ವಾದಿರಾಜ ಭಟ್, ಯುವ ಉದ್ಯಮಿ ನಾಗರಾಜ್ ಎಸ್.ಕೆ., ಉಪಸ್ಥಿತರಿದ್ದರು. ಅಧ್ಯಕ್ಷ ಪ್ರಮೋದ್ ತಂತ್ರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕೋಶಾಧಿಕಾರಿ ಚೈತನ್ಯ ಎಂ.ಜಿ. ಕಾರ್ಯಕ್ರಮ ನಿರೂಪಿಸಿದರು.







