ಉಡುಪಿ: ಡಿ.31ಕ್ಕೆ ರಾಜಾಂಗಣದಲ್ಲಿ ಕೋಟಿ ತುಳಸಿ ಅರ್ಚನೆ
ಉಡುಪಿ, ಡಿ.28: ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾಮಂಡಲ (ತುಶಿಮಾಮ) ಉಡುಪಿ ಇದರ ಅಂಗಸಂಸ್ಥೆ ತುಶಿಮಾಮ ಕಡಿಯಾಳಿಯ ನೇತೃತ್ವದಲ್ಲಿ ವಿವಿ ವಿಪ್ರ ಸಂಘಟನೆಗಳ ಸಹಕಾರದೊಂದಿಗೆ ಡಿ.31ರಂದು ಉಡುಪಿ ಶ್ರೀಕೃಷ್ಣನಿಗೆ ವಿಷ್ಣು ಸಹಸ್ರನಾಮಾವಳಿ ಸಹಿತ ಕೋಟಿ ತುಳಸಿ ಅರ್ಚನೆ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.31ರ ಮುಂಜಾನೆ 7:00ರಿಂದ ಅಪರಾಹ್ನ 12:00ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಲೋಕಕಲ್ಯಾಣಾರ್ಥವಾಗಿ ನಡೆಯುವ ಈ ಕಾರ್ಯಕ್ರಮ ಬೆಳಗ್ಗೆ 7:30ಕ್ಕೆ ಮೆರವಣಿಗೆಯ ಮೂಲಕ ಶ್ರೀಕೃಷ್ಣನ ಮೂರ್ತಿಯನ್ನು ತಂದು ರಾಜಾಂಗಣದಲ್ಲಿ ಪ್ರತಿಷ್ಠಾಪಿಸಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದರು.
ಐದು ವರ್ಷಗಳ ಬಳಿಕ ಶ್ರೀಕೃಷ್ಣ ಮಠಲ್ಲಿ ಕೋಟಿ ತುಳಸಿ ಅರ್ಚನೆ ನಡೆಯುತ್ತಿದೆ. ತುಳಸಿಯನ್ನು ಕೃಷ್ಣನಿಗೆ ಅರ್ಪಿಸಬಯಸುವವರು ಡಿ.30ರೊಳಗೆ ರಾಜಾಂಗಣಕ್ಕೆ ತಂದು ಒಪ್ಪಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತುಶಿಮಾಮದ ರಘುಪತಿ ಉಪಾಧ್ಯ, ರಾಜೇಶ್ ಭಟ್ ಪಣಿಯಾಡಿ, ಅರವಿಂದ ಆಚಾರ್ಯ, ರಂಜನ್ ಕಲ್ಕೂರ ಹಾಗೂ ಶ್ರೀಶ ಕಡೆಕಾರ್ ಉಪಸ್ಥಿತರಿದ್ದರು.







