ಮೇ 31ರಂದು ಸುಮನಸಾ ಕೊಡವೂರು ರಜತ ಸಂಭ್ರಮ ಉದ್ಘಾಟನೆ

ಉಡುಪಿ, ಮೇ 30: 25 ವರ್ಷಗಳ ಹಿಂದೆ ಕೊಡವೂರಿನಲ್ಲಿ ಹುಟ್ಟಿಕೊಂಡ ಸುಮನಸಾ ಕೊಡವೂರು ತಂಡ ಇದೀಗ ಉಡುಪಿಯ ಪ್ರಮುಖ ಕಲಾ ಮತ್ತು ಸಾಂಸ್ಕೃತಿಕ ತಂಡವಾಗಿ ಗುರುತಿಸಿಕೊಂಡಿದ್ದು, ಇದೀಗ ರಜತ ಸಂಭ್ರಮ ದಲ್ಲಿದೆ. ಒಂದು ವರ್ಷ ಕಾಲ ವೈವಿಧ್ಯಮಯ 25 ಕಾರ್ಯಕ್ರಮ ಗಳೊಂದಿಗೆ ನಡೆಯುವ ರಜತ ಸಂಭ್ರಮದ ಉದ್ಘಾಟನೆ ಮೇ 31ರಂದು ಸಂಜೆ 5:00ಗಂಟೆಗೆ ಕುಂಜಿಬೆಟ್ಟಿನ ಕಲಾರಂಗದ ಐ.ವೈ.ಸಿ. ಸಭಾಂಗಣದಲ್ಲಿ ನಡೆಯಲಿದೆ ಎಂದು ಸುಮನಸಾ ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವರ್ಷವಿಡೀ ನಡೆಯುವ ರಜತೋತ್ಸವ ಕಾರ್ಯಕ್ರಮಗಳ ಸಮಾರೋಪ ಮುಂದಿನ ಎಪ್ರಿಲ್ನಲ್ಲಿ ಬಹುಭಾಷಾ ನಾಟಕೋತ್ಸವ ದೊಂದಿಗೆ ನಡೆಯಲಿದೆ ಎಂದರು.
ಸುಮನಸಾ ಸಂಘಟನೆಯ ಗೌರವಾಧ್ಯಕ್ಷ ಎಂ.ಎಸ್.ಭಟ್ ಮಾತನಾಡಿ, ಮಾನವೀಯ ಸೇವೆಯ ತುಡಿತದೊಂದಿಗೆ ಅಸ್ತಿತ್ವಕ್ಕೆ ಬಂದ ಸುಮನಸಾ ಕೊಡವೂರು, ಮುಂದೆ ಕಲಾ ಮತ್ತು ಸಾಂಸ್ಕೃತಿಕ ರಂಗದಲ್ಲಿ ಹೆಚ್ಚು ಸಕ್ರಿಯ ಗೊಂಡಿದ್ದು, ರಂಗಭೂಮಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳೊಂದಿಗೆ, ಪ್ರತಿಭಾನ್ವಿತ ನಾಟಕ ತಂಡ ದೊಂದಿಗೆ ಎಲ್ಲರ ಗಮನ ಸೆಳೆಯುತ್ತಿದೆ ಎಂದರು.
ವರ್ಷಪೂರ್ತಿ ನಡೆಯುವ ರಜತ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ
ನಾಳೆ ಸಂಜೆ 5ಕ್ಕೆ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ ವಹಿಸಲಿದ್ದಾರೆ. ಪಡುಬಿದ್ರಿಯ ಉದ್ಯಮಿ ಅಶೋಕ ಕುಮಾರ್ ಶೆಟ್ಟಿ ರಜತ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಯಶಪಾಲ್ ಸುವರ್ಣ ರಜತ ಸಂಭ್ರಮದ ಲೋಗೊ ಅನಾವರಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಯಕ್ಷಗಾನ ಗುರು ಯಕ್ಷ ಸಂಜೀವ ಟ್ರಸ್ಟ್ನ ಅಧ್ಯಕ್ಷ ಗುರು ಬನ್ನಂಜೆ ಸಂಜೀವ ಸುವರ್ಣ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಭಾಗವಹಿಸಲಿದ್ದಾರೆ.
ರಜತ ಸಂಭ್ರಮದಂಗವಾಗಿ ನಾಳೆ ಸಂಜೆ 5:00ರಿಂದ ಸುಮಲಹರಿ ರಂಗಗೀತಾ ಗಾಯನ, ಉದ್ಘಾಟನಾ ಕಾರ್ಯ ಕ್ರಮದ ಬಳಿಕ ಸಂಜೆ 7:00 ಗಂಟೆಗೆ ಮಕ್ಕಳ ರಂಗ ಶಿಬಿರದಲ್ಲಿ ಸಿದ್ಧಗೊಂಡ ಮಕ್ಕಳ ನಾಟಕ ‘ರಿಟಯರ್ಡ್ ಬೆಕ್ಕು’ ಪ್ರದರ್ಶನಗೊಳ್ಳಲಿದೆ. ಚರಿತ್ ಸುವರ್ಣ ಅವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು, ಉಪಾಧ್ಯಕ್ಷರಾದ ವಿನಯ್ ಕಲ್ಮಾಡಿ, ಯೋಗೀಶ್ ಕೊಳಲಗಿರಿ ಉಪಸ್ಥಿತರಿದ್ದರು.






