ಕಲ್ಯಾಣಪುರ ಜಿಎಸ್ಬಿ ಸಭಾದ 36ನೇ ವಾರ್ಷಿಕೋತ್ಸವ

ಉಡುಪಿ : ಕಲ್ಯಾಣಪುರ ಗೌಡ ಸಾರಸ್ವತ ಬ್ರಾಹ್ಮಣ ಸಭಾದ 36ನೇ ವಾರ್ಷಿಕೋತ್ಸವ ಶನಿವಾರ ಕಲ್ಯಾಣಪುರ ಶ್ರೀವೆಂಕಟರಮಣ ದೇವಸ್ಥಾನದ ಕಲಾಮಂದಿರದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಎ.ಪಿ.ಆರ್.ಕಿಣಿ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಸಮಯಪ್ರಜ್ಞೆಗೆ ಹೆಚ್ಚಿನ ಆದ್ಯತೆ ನೀಡಿ ನಂಬಿಕೆಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ದೇವಳದ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಜಿ.ಎಸ್.ಬಿ. ಸ್ವಯಂಸೇವಕರ ಭಾಗವಹಿಸುವಿಕೆ ಪ್ರಶಂಸನೀಯ. ದೇವಳದ ಜೀರ್ಣೋದ್ಧಾರ ಕಾರ್ಯಕ್ಕೆ ಪ್ರತಿಯೊಬ್ಬರೂ ಕ್ರಿಯಾಶೀಲ ಸಹಕಾರ ನೀಡಬೇಕು ಎಂದರು.
ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಕಾರ ಲಕ್ಷ್ಮೀನಾರಾಯಣ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಸ್ಪಂದನಾ ಸೇವಾ ಸಂಸ್ಥೆ ಬೆಂಗಳೂರು ಅಧ್ಯಕ್ಷ ವೆಂಕಟೇಶ ಪೈ ಮಾತನಾಡಿದರು. ಕಲ್ಯಾಣಪುರದ ಡಾ. ಟಿ.ಎಂ.ಎ.ಪೈ ಪ್ರೌಢಶಾಲೆಯ ಶಾಲಾ ಸಂಚಾಲಕಿ ಸುಮನ ಎಸ್.ಪೈ ಉಪಸ್ಥಿತರಿದ್ದರು.
ಜಿಎಸ್ಬಿ ಸಭಾ ಅಧ್ಯಕ್ಷ ಸಂತೋಷ್ ಕಾಮತ್ ಸ್ವಾಗತಿಸಿ ವಂದಿಸಿದರು. ಲಕ್ಷ್ಮೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಪ್ರವೀಣ್ ಶೆಣೈ ವಾರ್ಷಿಕ ವರದಿ ವಾಚಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶೈಕ್ಷಣಿಕ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.







