ಉಡುಪಿ: ಮುಂದುವರಿದ ಗಾಳಿ-ಮಳೆ ಪ್ರತಾಪ; 40 ಕ್ಕೂ ಅಧಿಕ ಮನೆಗಳಿಗೆ ಹಾನಿ

ಉಡುಪಿ, ಜು.7:ಜಿಲ್ಲೆಯಲ್ಲಿ ಗಾಳಿ-ಮಳೆಯ ಪ್ರತಾಪ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ 40ಕ್ಕೂ ಅಧಿಕ ವಾಸ್ತವ್ಯ ಮನೆಗಳಿಗೆ ಸಾಧಾರಣದಿಂದ ಭಾರೀ ಪ್ರಮಾಣದ ಹಾನಿ ಸಂಭವಿಸಿದ್ದರೆ, ಮೂರು ಜಾನು ವಾರು ಕೊಟ್ಟಿಗೆಗಳಿಗೆ ಹಾನಿಯಾಗಿದ್ದು ಮಾತ್ರವಲ್ಲದೇ, ಮೂರು ಕಡೆ ತೋಟಗಾರಿಕಾ ಬೆಳೆಗಳಿಗೂ ಅಪಾರ ಪ್ರಮಾಣದ ಹಾನಿ ಸಂಭವಿಸಿರುವುದು ವರದಿಯಾಗಿದೆ.
ಜಿಲ್ಲೆಯ ಮಳೆಯ ಪ್ರಮಾಣ ಕುಸಿದಿದ್ದರೂ, ಮಳೆಯೊಂದಿಗೆ ಆಗಾಗ ಬೀಸುತ್ತಿರುವ ಗಾಳಿ ತನ್ನ ಪ್ರತಾಪವನ್ನು ಜಿಲ್ಲೆಯಾದ್ಯಂತ ತೋರಿಸಿದೆ. ಇದರಿಂದ ಮನೆಗಳು, ಕೊಟ್ಟಿಗೆಗಳ ಮೇಲೆ ಮರಗಳು ಬಿದ್ದು ಹಾನಿ ಸಂಭವಿಸಿದ್ದು ಮಾತ್ರವಲ್ಲ, ತೋಟಗಾರಿಕಾ ಬೆಳೆಗಳೂ ಅಲ್ಲಲ್ಲಿ ಧರಾಶಾಹಿಯಾಗಿವೆ.
ಕಾರ್ಕಳ ತಾಲೂಕು ಮರ್ಣೆಯ ಸುಕುಮಾರ್ ಹೆಗ್ಡೆ ಎಂಬವರಿಗೆ ಸೇರಿದ ಮನೆಯ ಜಾನುವಾರು ಕೊಟ್ಟಿಗೆ ಗಾಳಿ-ಮಳೆಗೆ ಸಂಪೂರ್ಣ ಕುಸಿದಿದ್ದು, ಎರಡೂವರೆ ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ಬ್ರಹ್ಮಾವರ ತಾಲೂಕು ಕೋಟದ ಗೌರಿ ಪೂಜಾರ್ತಿ ಹಾಗೂ ಕುಂದಾಪುರ ತಾಲೂಕು ಬೇಳೂರು ಗ್ರಾಮದ ಆನಂದ ರಾಮ ಎಂಬವರ ಜಾನುವಾರು ಕೊಟ್ಟಿಗೆ ಭಾಗಶ: ಹಾನಿಯಾಗಿದ್ದು, 50 ಸಾವಿರ ರೂ. ನಷ್ಟ ವಾಗಿರುವುದಾಗಿ ಅಂದಾಜಿಸಲಾಗಿದೆ.
ಕುಂದಾಪುರ ತಾಲೂಕು ಸಿದ್ಧಾಪುರದ ಸದಾನಂದ ಶೆಟ್ಟಿ ಹಾಗೂ ನಾರಾಯಣ ಶೆಟ್ಟಿ ಅಲ್ಲದೇ ಹೆಬ್ರಿ ಗ್ರಾಮ ಶಿವಪುರದ ಕೃಷ್ಣ ನಾಯ್ಕ್ ಎಂಬವರ ತೋಟಗಾರಿಕಾ ಬೆಳೆಗಳು ಗಾಳಿ-ಮಳೆಗೆ ಹಾನಿಗೊಳಗಾಗಿವೆ. ಇವುಗಳಲ್ಲಿ ಅಡಿಕೆ, ಬಾಳೆಗಿಡಗಳು ಸೇರಿ ವಿವಿಧ ಮರಗಳು ಹಾನಿಗೊಂಡಿವೆ.
40ಕ್ಕೂ ಅಧಿಕ ಮನೆಗಳಿಗೆ ಹಾನಿ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಬೀಸಿದ ಗಾಳಿಗೆ 40ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾದ ವರದಿಗಳು ವಿಕೋಪ ನಿಯಂತ್ರಣ ಕೊಠಡಿಗೆ ಬಂದಿವೆ. ಇವುಗಳಿಂದ ಸುಮಾರು 11 ಲಕ್ಷ ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ. ಇವುಗಳಲ್ಲಿ 10ಕ್ಕೂ ಅಧಿಕ ಮನೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎಂದು ವರದಿಯಾಗಿದೆ.
ಬ್ರಹ್ಮಾವರ ತಾಲೂಕಿನಲ್ಲಿ ಮನೆ ಹಾನಿಯ 18 ಪ್ರಕರಣಗಳು ವರದಿಯಾಗಿದ್ದರೆ, ಕುಂದಾಪುರ ತಾಲೂಕಿನಿಂದ 12 ಪ್ರಕರಣಗಳು ದಾಖಲಾಗಿವೆ. ಇನ್ನು ಕಾಪುವಿನಿಂದ 2, ಬೈಂದೂರಿನಿಂದ ಮೂರು, ಕಾರ್ಕಳದಿಂದ ನಾಲ್ಕು ಹಾಗೂ ಹೆಬ್ರಿಯಿಂದ ಎರಡು ಪ್ರಕರಣಗಳು ವರದಿಯಾಗಿವೆ.
ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಲಕ್ಷ್ಮಣ ಖಾರ್ವಿ ಎಂಬವರ ಮನೆ ಮೇಲೆ ಭಾರೀ ಗಾತ್ರದ ಮರ ಬಿದ್ದು ಮನೆ ಭಾಗಶ: ಕುಸಿದಿದೆ. ಇದರಿಂದ ಒಂದು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಕಾಪು ತಾಲೂಕು ಬೆಳ್ವೆಯ ಶಕುಂತಲಾ, ಕುಂದಾಪುರ ತಾಲೂಕು ಅಜ್ರಿಯ ಸಂಜೀವ ಶೆಟ್ಟಿ, ವೆಂಕಟೇಶ ಶೆಟ್ಟಿ, ಕರುಣಾಕರ ಶೆಟ್ಟಿ, ನಾರಾಯಣ ಶೆಟ್ಟಿ, ಚಂದ್ರು ಶೆಟ್ಟಿ ಇವರ ಮನೆಗಳಿಗೆ ಬೀಸಿದ ಗಾಳಿ-ಮಳೆಯಿಂದ ತಲಾ 50 ಸಾವಿರ ರೂ.ಗಳ ನಷ್ಟವಾಗಿದೆ.
ಉಪ್ಪುಂದದ ಶೇಖರ ಖಾರ್ವಿ, ಬ್ರಹ್ಮಾವರ ತಾಲೂಕು ವಂಡಾರು ಗ್ರಾಮದ ಗಿರಿಜ ಬಾಯಿ, ಆರೂರು ಗ್ರಾಮದ ಸದಾಶಿವ, ಗಿಳಿಯಾರಿನ ಸುರೇಶ್ ಅಡಿಗ, ಚಂದ್ರ ಪೂಜಾರಿ, ಶಿರಿಯಾರದ ಕೊರಗು ಶೆಟ್ಟಿ, ರಮೇಶ ಪೂಜಾರಿ, ಚಂದ್ರ, ಅಣ್ಣಪ್ಪ, ಹೆಬ್ರಿ ಶಿವಪುರದ ಶಕುಂತಳಾ ಮುಂತಾದವರ ಮನೆಗೆ 25ರಿಂದ 30ಸಾವಿರ ರೂ.ನಗಳ ನಷ್ಟದ ಅಂದಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ ಸರಾಸರಿ 52.3ಮಿ.ಮೀ. ಮಳೆ
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಉಡುಪಿ ಜಿಲ್ಲೆಯಲ್ಲಿ ಸರಾಸರಿ 52.3 ಮಿ.ಮೀ. ಮಳೆಯಾಗಿದೆ. ಅತ್ಯಧಿಕ ಮಳೆ ಹೆಬ್ರಿಯಲ್ಲಿ 68.3ಮಿ.ಮೀ. ಬಿದ್ದಿದೆ. ಉಳಿದಂತೆ ಕಾರ್ಕಳದಲ್ಲಿ 58.3, ಬೈಂದೂರಿನಲ್ಲಿ 58.3, ಕುಂದಾಪುರದಲ್ಲಿ 52.2, ಉಡುಪಿಯಲ್ಲಿ 45.9, ಕಾಪುವಲ್ಲಿ 34.0 ಹಾಗೂ ಬ್ರಹ್ಮಾವರದಲ್ಲಿ 31.1ಮಿ.ಮೀ. ಮಳೆ ಬಿದ್ದಿದೆ.






