ಉಡುಪಿ ಜಿಲ್ಲೆಯಲ್ಲಿ ಶೇ.43ರಷ್ಟು ಅಧಿಕ ಮಳೆ; ಅಪಾರ ಹಾನಿಯ ಅಂದಾಜು: ಡಿಸಿ ಸ್ವರೂಪ ಟಿ.ಕೆ.
► ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ► ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ ಬಿರುಕು?

ಉಡುಪಿ, ಜು.15: ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ ವಾಡಿಕೆಗಿಂತ ಶೇ.43ರಷ್ಟು ಅಧಿಕ ಮಳೆಯಾಗಿದೆ. ಇಂದಿನವರೆಗಿನ ಜಿಲ್ಲೆಯ ವಾಡಿಕೆ ಮಳೆ 1959ಮಿ.ಮೀ. ಆಗಿದ್ದರೆ, ಪ್ರಸ್ತುತ ವರ್ಷದಲ್ಲಿ ಈವರೆಗೆ 2803 ಮಿ.ಮೀ ನಷ್ಟು ಮಳೆ ಬಿದ್ದಿದೆ. ಮುಂಬರುವ ದಿನಗಳಲ್ಲಿಯೂ ಸಹ ಹೆಚ್ಚು ಮಳೆಯಾಗಬಹುದೆಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ. ಹವಾಮಾನ ಇಲಾಖೆ ಪ್ರತಿದಿನವೂ ನೀಡುವ ಮುನ್ಸೂಚನೆಗಳನ್ನು, ಮಾಹಿತಿಗಳನ್ನು ಸಾರ್ವಜನಿಕರಿಗೆ ಹಾಗೂ ಮೀನುಗಾರರಿಗೆ ತಲುಪಿಸ ಬೇಕು. ಇದರಿಂದ ಆಗುವ ಮಾನವ ಜೀವಹಾನಿ ಹಾಗೂ ಪ್ರಾಣಿಗಳ ಜೀವಹಾನಿ ಯನ್ನು ತಪ್ಪಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕೆಸ್ವಾನ್ ವೀಡಿಯೋ ಕಾನ್ಫ್ರೆನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಇದುವರೆಗೆ ಬಿದ್ದಿರುವ ಹೆಚ್ಚಿನ ಮಳೆಯಿಂದಾಗಿ ಮೂಲಸೌಕರ್ಯಗಳಾದ ರಾಜ್ಯಹೆದ್ದಾರಿ 9.8 ಕಿ.ಮೀ., ಜಿಲ್ಲಾ ಮುಖ್ಯ ರಸ್ತೆಗಳು 15 ಕಿ.ಮೀ. ಹಾಗೂ 904.70 ಕಿ.ಮೀ.ನಷ್ಟು ಗ್ರಾಮೀಣ ರಸ್ತೆಗಳು ಹಾಳಾಗಿವೆ. ಇದರೊಂದಿಗೆ 24 ಸೇತುವೆಗಳಿಗೂ ಹಾನಿಯುಂಟಾಗಿದೆ.30ಕ್ಕೂ ಹೆಚ್ಚು ಶಾಲೆ, ಅಂಗನವಾಡಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಕಟ್ಟಡಗಳಿಗೆ ಹಾನಿ ಯುಂಟಾಗಿವೆ. ಇವುಗಳ ದುರಸ್ಥಿಗೆ ಅಗತ್ಯವಿ ರುವ ಅಂದಾಜು ನಷ್ಟವನ್ನು ಕ್ರೋಢೀಕರಿಸಿ ಕೂಡಲೇ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಅತಿವೃಷ್ಟಿ, ನೈಸರ್ಗಿಕ ವಿಕೋಪಗಳು ಉಂಟಾದಾಗ ಕೂಡಲೇ ಸ್ಪಂದಿಸಿ, ಪರಿಹಾರ ಕಾರ್ಯ ಗಳನ್ನು ಕೈಗೊಂಡು ಹಾನಿಗೊಳಗಾದವರಿಗೆ ನಷ್ಟ ಪರಿಹಾರವನ್ನು ಆದಷ್ಟು ತ್ವರಿತವಾಗಿ ನೀಡಬೇಕು ಎಂದೂ ಅವರು ತಿಳಿಸಿದರು.
ಶಾಲಾ ಕಟ್ಟಡ ಹಾಗೂ ಕೊಠಡಿಗಳ ಸದೃಢತೆಯ ಬಗ್ಗೆ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳ ಅಭಿಯಂತರರು, ಶಿಕ್ಷಣ ಇಲಾಖೆ ಅಧಿಕಾರಿಗಳು ಒಟ್ಟಾಗಿ ಪರಿಶೀಲನೆ ಮಾಡಿ, ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆಯಬೇಕು ಎಂದರು.
ಒಂದೊಮ್ಮೆ ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದಲ್ಲಿ ಬಳಕೆಗೆ ಯೋಗ್ಯವಲ್ಲದಿದ್ದಲ್ಲಿ ಅಂತಹ ಕೊಠಡಿ ಗಳಲ್ಲಿ ತರಗತಿಗಳನ್ನು ನಡೆಸದೇ ಬದಲೀ ವ್ಯವಸ್ಥೆಯನ್ನು ಮಾಡಬೇಕು. ಶಾಲಾ ವಿದ್ಯಾರ್ಥಿಗಳು ಅಂತಹ ಕಟ್ಟಡಗಳ ಬಳಿ ಹೋಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕಾಲುಸಂಕಗಳ ನಿರ್ಮಾಣ ಕಾಮಗಾರಿ ಗಳನ್ನು ಕೈಗೊಳ್ಳಲು ಸರಕಾರ ಈಗಾಗಲೇ 5 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಜೊತೆಗೆ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಯಾವುದೇ ರಸ್ತೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ಮಣ್ಣು ಕುಸಿತ ಉಂಟಾಗದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದ ಅವರು, ಖಾಸಗಿಯವರು ಮನೆಗಳನ್ನು ನಿರ್ಮಾಣ ಮಾಡುವಾಗಲೂ ಸಹ ಮಣ್ಣು ಕುಸಿತ ಉಂಟಾಗುವ ಸಾಧಕ- ಬಾಧಕಗಳನ್ನು ನೋಡಿ, ಅನುಮತಿ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯ ಶಿರೂರಿನಿಂದ ಹೆಜಮಾಡಿಯವರೆಗೆ ಕಡಲ ಕೊರೆತ ಉಂಟಾಗುವ ಸಂಭಾವ್ಯ ಪ್ರದೇಶಗಳನ್ನು ಈಗಾಗಲೇ ಗುರುತಿಸ ಲಾಗಿದೆ. ಕಡಲಕೊರೆತ ತಡೆ ಕಾಮಗಾರಿಗಳನ್ನು ಇಲಾಖಾ ವತಿಯಿಂದಲೇ ಕಲ್ಲುಕೋರೆಗಳ ಅನುಮತಿ ಪಡೆದು ಕಾಮಗಾರಿಗಳನ್ನು ಕೈಗೊಂಡಲ್ಲಿ ಹೆಚ್ಚು ಪ್ರದೇಶದಲ್ಲಿ ಕಲ್ಲು ತಡೆಗೋಡೆಗಳನ್ನು ರಚಿಸಲು ಸಾಧ್ಯ. ಇದಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ಕುಮಾರ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು ವೀಡಿಯೋ ಕಾನ್ಫ್ರೆನ್ಸ್ ಮೂಲಕ ಭಾಗವಹಿಸಿದ್ದರು.
‘ಬಜೆ ಅಣೆಕಟ್ಟಿನಲ್ಲಿ ಬಿರುಕು; ಸಾರ್ವಜನಿಕರಿಂದ ದೂರು’
ಸ್ವರ್ಣಾ ನದಿಗೆ ಬಜೆ ಬಳಿ ನಿರ್ಮಿಸಲಾಗಿರುವ ಅಣೆಕಟ್ಟಿನಲ್ಲಿ ಬಿರುಕು ಉಂಟಾಗಿದೆ ಎಂದು ಸಾರ್ವಜನಿಕ ರಿಂದ ದೂರು ಕೇಳಿಬರುತ್ತಿದೆ. ಕೂಡಲೇ ಈ ಬಗ್ಗೆ ಪರಿಶೀಲನೆ ಮಾಡಿ ವರದಿ ನೀಡುವಂತೆ ಜಿಲ್ಲಾದಿಕಾರಿ ಸ್ವರೂಪ ಟಿ.ಕೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಸೂಚನೆ ನೀಡಿದರು.







