ಚಮ್ತಾಡಿ-ಅಚ್ಲಾಡಿ ಕಿರುಸೇತುವೆಗೆ 45 ಲಕ್ಷ ಅನುದಾನ ಮಂಜೂರು

ಕುಂದಾಪುರ, ಆ.21: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಳೂರು ಗ್ರಾಮಪಂಚಾಯತ್ನ ಚಮ್ತಾಡಿ-ಅಚ್ಲಾಡಿಯನ್ನು ಸಂಪರ್ಕಿಸುವ ಹಿರೇಹೊಳೆಗೆ ನೂತನ ಸೇತುವೆ ನಿರ್ಮಾಣಕ್ಕೆ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು 45 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.
ಹಿರೇಹೊಳೆಗೆ ಈಗಿರುವ ಕಾಲುಸಂಕ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದು, ಅದನ್ನು ತೆರವುಗೊಳಿಸಿ ನೂತನ ಕಿರುಸೇತುವೆ ನಿರ್ಮಿಸುವಂತೆ ಕ್ಷೇತ್ರದ ಮುಖಂಡರಾದ ಎಂ.ದಿನೇಶ್ ಹೆಗ್ಡೆ ಮೊಳಹಳ್ಳಿ ಅವರು ಬಹುಕಾಲ ದಿಂದ ಮನವಿ ಸಲ್ಲಿಸಿ ಪ್ರಯತ್ನ ನಡೆಸಿದ್ದರು.
ಇದೀಗ ನೂತನ ಕಿರುಸೇತುವೆ ನಿರ್ಮಾಣ ಮಾಡಲು 45 ಲಕ್ಷ ರೂ.ಗಳ ಅನುದಾನ ಕೋರಿ ಸಲ್ಲಿಸಲಾದ ಪ್ರಸ್ತಾವನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ. ಈ ಬಗ್ಗೆ ದಿನೇಶ್ ಹೆಗ್ಡೆ ಅವರು ಬೆಂಗಳೂರಿನಲ್ಲಿ ಸಚಿವ ಜಾರಕಿಹೊಳಿ ಅವರನ್ನು ಭೇಟಿಯಾಗಿ ಸ್ಥಳೀಯ ಜನರ ಬೇಡಿಕೆ ಕುರಿತು ಅವರ ಗಮನ ಸೆಳೆದಿದ್ದರು.
ಬೇಳೂರು ಗ್ರಾಪಂ ವ್ಯಾಪ್ತಿಯ ಹಿರೇಹೊಳೆ ಬಳಿಯ ಚಮ್ತಾಡಿ-ಅಚ್ಲಾಡಿ ಕಾಲುಸಂಕ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು, ಕುಸಿದು ಬೀಳುವ ಭೀತಿ ಯಲ್ಲಿತ್ತು. ಅಪಾಯದ ಮುನ್ಸೂಚನೆ ಹಿನ್ನೆಲೆಯಲ್ಲಿ ಗ್ರಾಪಂ ವತಿಯಿಂದ ಸಾರ್ವಜನಿಕರ ಸಂಚಾರ ನಿಷೇಧಿಸಿ ಬ್ಯಾನರ್ ಅಳವಡಿಸಲಾಗಿತ್ತು. ಇದರಿಂದ ಈ ಭಾಗದ ಸುಮಾರು 18 ಕುಟುಂಬಗಳಿಗೆ ಹಾಗೂ ನದಿಯ ಆಚೆಗಿರುವ ಕೃಷಿ ಗದ್ದೆ, ತೋಟಗಳಿಗೆ ತೆರಳಲು ಇದ್ದ ಏಕೈಕ ಸಂಪರ್ಕ ಮಾರ್ಗ ಕಡಿತಗೊಂಡು ಗ್ರಾಮಸ್ಥರು ನಿತ್ಯ ಸಂಕಷ್ಟ ಅನುಭವಿಸುವಂತಾಗಿತ್ತು.
ಸ್ಥಳೀಯರ ಈ ಗಂಭೀರ ಸಮಸ್ಯೆಯನ್ನು ಮನಗಂಡ ದಿನೇಶ್ ಹೆಗ್ಡೆ ಅವರು, ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಸಚಿವರು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣವೇ ಸ್ಪಂದಿಸಿ ಕಾಮಗಾರಿಗೆ ಹಸಿರು ನಿಶಾನೆ ತೋರಿದ್ದಾರೆ. ಗ್ರಾಮಸ್ಥರ ಸಂಚಾರ ಸಮಸ್ಯೆಗೆ ಶಾಶ್ವತ ಮುಕ್ತಿ ದೊರಕಿಸಿಕೊಡಲು ಶ್ರಮಿಸಿದ ದಿನೇಶ್ ಹೆಗ್ಡೆ ಹಾಗೂ ಅನುದಾನ ಒದಗಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಚಮ್ತಾಡಿ-ಅಚ್ಲಾಡಿ ಹಾಗೂ ಬೇಳೂರು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.






