ರಂಗಭೂಮಿ 46ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ

ಉಡುಪಿ, ಅ.4: ರಂಗಭೂಮಿ ಉಡುಪಿ ತನ್ನ 61ನೇ ವರ್ಷದ ದಿ.ಡಾ. ಟಿ.ಎಂ.ಎ. ಪೈ, ದಿ.ಎಸ್.ಎಲ್.ನಾರಾಯಣ ಭಟ್ ಮತ್ತು ದಿ.ಮಲ್ಪೆ ಮಧ್ವರಾಜ್ ಸ್ಮಾರಕ ರಾಜ್ಯ ಮಟ್ಟದ 46ನೇ ಕನ್ನಡ ನಾಟಕ ಸ್ಪರ್ಧೆಯನ್ನು ನವಂಬರ್ ತಿಂಗಳ 4ನೇ ವಾರದಲ್ಲಿ ನಡೆಸಲಿದೆ.
ಕರ್ನಾಟಕ ರಾಜ್ಯದ (ಕಾಸರಗೋಡು ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಕನಿಷ್ಟ 1 ಘಂಟೆ 30 ನಿಮಿಷ ಹಾಗೂ ಗರಿಷ್ಟ 2 ಘಂಟೆ 15 ನಿಮಿಷ ಅವಧಿಯ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಜಾನಪದ ಅಥವಾ ಯಾವುದೇ ಪ್ರಕಾರದ ನಾಟಕ ಪ್ರದರ್ಶನ ಮಾಡಬಹುದು. ಈ ಬಾರಿ ಸ್ಪರ್ಧೆಗೆ ಗರಿಷ್ಠ 12 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.
ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳೊಂದಿಗೆ ಅನುಕ್ರಮವಾಗಿ 35,000ರೂ., 25,000ರೂ., 15,000ರೂ. ನಗದು ಬಹುಮಾನಗಳನ್ನು ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. ಅಲ್ಲದೆ ಶ್ರೇಷ್ಠ ನಿರ್ದೇಶನ, ನಟ, ನಟಿ, ಸಂಗೀತ, ಬೆಳಕು, ರಂಗಪರಿಕರ, ಪ್ರಸಾಧನ, ಬಾಲನಟನೆ/ ಹಾಸ್ಯ ಪಾತ್ರಗಳಿಗೆ ನಗದು ಸಹಿತ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿದ್ದ ತಂಡಕ್ಕೆ ವಿಶೇಷ ಪುರಸ್ಕಾರ ನೀಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜೊತೆಗೆ ಉಡುಪಿಗೆ ಹೋಗಿ ಬರುವ ಒಟ್ಟು ದೂರಕ್ಕೆ ಕಿ.ಮಿ.ಗೆ 20ರೂ.ನಂತೆ ಕನಿಷ್ಠ 2,000ರೂ., ಗರಿಷ್ಠ 22,000ರೂ. ಪ್ರಯಾಣ ವೆಚ್ಚ ನೀಡಲಾಗುವುದು ಹಾಗೂ ಪ್ರತೀ ತಂಡಕ್ಕೆ ಗೌರವಧನವಾಗಿ 5,000ರೂ. ನೀಡಲಾಗುವುದು.
ಭರ್ತಿ ಮಾಡಿದ ಪ್ರವೇಶ ಪತ್ರ ಸ್ವೀಕರಿಸಲು 2025ರ ಅ.30 ಕೊನೆಯ ದಿನಾಂಕವಾಗಿದೆ. ಆಸಕ್ತ ತಂಡಗಳು ಪ್ರವೇಶ ಪತ್ರಕ್ಕಾಗಿ ಪ್ರದೀಪ್ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ, ರಂಗಭೂಮಿ, ಕುತ್ಪಾಡಿ, ಉಡುಪಿ- 574118 ಮೊಬೈಲ್ ಸಂಖ್ಯೆ: 9448952847(ಪ್ರದೀಪ್ಚಂದ್ರ ಕುತ್ಪಾಡಿ), ಅಥವಾ ಉಪಾಧ್ಯಕ್ಷ ಭಾಸ್ಕರ ರಾವ್ ಕಿದಿಯೂರು(9844742166) ಅಥವಾ ಜತೆ ಕಾರ್ಯದರ್ಶಿಗಳಾದ ಶ್ರೀಪಾದ ಹೆಗಡೆ(9845111449) ಹಾಗೂ ವಿವೇಕಾನಂದ ಎನ್. (9449367595) ಅವರನ್ನು ಸಂಪರ್ಕಿಸಬಹುದು ಎಂದು ರಂಗಭೂಮಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







