ತ್ಯಾಜ್ಯ ವಿಲೇವಾರಿಗಾಗಿ 47.50ಕೋ.ರೂ. ಅನುದಾನ ಮಂಜೂರು: ಶೋಭಾ ಕರಂದ್ಲಾಜೆ

ಉಡುಪಿ: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ವಚ್ಛ ಭಾರತ್ ಅಭಿಯಾನ 2.0ರ ಅಡಿಯಲ್ಲಿ ಉಡುಪಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಾರಂಪರಿಕ ತ್ಯಾಜ್ಯದ ವಿಲೇವಾರಿಗಾಗಿ 47.50 ಕೋಟಿ ರೂ. ಅನುದಾನವನ್ನು ಮಂಜೂರುಗೊಳಿಸಲಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಗರ ಸಭೆ ವ್ಯಾಪ್ತಿಯ ದ್ರವ ತ್ಯಾಜ್ಯ ನಿರ್ವಹಣೆ ಮೇಲ್ದರ್ಜೆಗೇರಿಸಲು ಭಾರತ ಸರಕಾರದ ನಗರ ವ್ಯವಹಾರಗಳ ಇಲಾ ಖೆಯು ಎನ್ಜಿಟಿ ನಿಧಿಯ ಮೂಲಕ 30 ಕೋಟಿ ರೂ. ಹಾಗೂ ಘನ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸಿದ್ಧಪಡಿಸಿದ್ದ 13 ಕೋಟಿ ರೂ. ಪ್ರಸ್ತಾವನೆಯನ್ನು ಅನುಮತಿ ನೀಡಿ ಮಂಜೂರಾತಿ ನೀಡಿದೆ ಹಾಗೂ ಎಲ್ಲಾ ತರಹದ ಘನ ತ್ಯಾಜ್ಯಗಳನ್ನು ನಿರ್ವಹಣೆ ಮಾಡಲು ಎಂಆರ್ಎಫ್ ಕೇಂದ್ರವನ್ನು ಸ್ಥಾಪಿಸಲು 4.5 ಕೋಟಿ ರೂ. ಮಂಜೂರುಗೊಳಿಸಿದೆ. ಈ ಮೂಲಕ ನಗರದ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ವಿಶೇಷ ಒತ್ತನ್ನು ನೀಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಆಹಾರ ಸಂಸ್ಕರಣೆ ಉದ್ದಿಮೆ ರಾಜ್ಯ ಖಾತೆ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





